ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಸೂರ್ಯ

ಕವಿತೆ
Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ಅವರು
ನಮ್ಮನ್ನು ಜೀವಸಹಿತ
ಹೂತುಬಿಟ್ಟರು
ಗೊತ್ತಿರಲಿಲ್ಲ ಅವರಿಗೆ ನಾವು
ತೇವಕಾಯ್ದು
ಮೊಳಕೆಯೊಡೆಯುವ ರಾಗಿ
ಕಾಳುಗಳೆಂದು

ಅವರು
ನಮ್ಮನ್ನು ಮಡಿ ಬಟ್ಟೆಯೊಳಗೆ
ಕೂಡಿ ಗಂಟಿಕ್ಕಿದರು
ಗೊತ್ತಿರಲಿಲ್ಲ ಅವರಿಗೆ ನಾವು
ಸುಡುವ  ಕೆಂಡಗಳೆಂದು

ಅವರು
ನಮ್ಮನ್ನು ಸುಡು ಮರಳುಗಾಡಿಗೆ
ದೂಡಿದರು
ಗೊತ್ತಿರಲಿಲ್ಲ ಅವರಿಗೆ ನಾವು
ಇಬ್ಬನಿ ಕುಡಿದು ಹೂ ಅರಳಿಸುವ
ಖರ್ಜೂರ ಪಾಪಾಸು ಕಳ್ಳಿಗಳೆಂದು

ಅವರು
ನಮ್ಮ ಕನಸ ರೆಕ್ಕೆಮುರಿದು
ಜೀವಂತ ಸುಟ್ಟರು
ಗೊತ್ತಿರಲಿಲ್ಲ ಅವರಿಗೆ ನಾವು
ಮುಂಗಾರಿಗೆ ಮತ್ತೆ ತಲೆಎತ್ತಿ
ಹಬ್ಬುವ ಗರಿಕೆ ಎಂದು

ಅವರು
ನಮ್ಮ ಸುತ್ತಲೂ ಗೋಡೆ ಕಟ್ಟಿದರು
ಗೊತ್ತಿರಲಿಲ್ಲ ಅವರಿಗೆ ನಾವು
ಬಿರುಕಿನಲ್ಲೇ ಚಿಗುರಿ
ಗೋಡೆ ಉರುಳಿಸುವ ಅರಳಿ ಆಲವೆಂದು

ಅವರು
ನಮ್ಮನ್ನು ತುಳಿಯುತ್ತಾ
ಗದ್ದುಗೆ ಎಡೆಗೆ ಸಾಗಿದರು
ಗೊತ್ತಿರಲಿಲ್ಲಾ ಅವರಿಗೆ ನಾವು
ನಡೆದಷ್ಟೂ ಮುಗಿಯದ ಹಾದಿ ಎಂದು

ಅವರು
ನಮಗೆ ದಕ್ಕದಂತೆ ಬೆಳಕ
ಮುಚ್ಚಿಟ್ಟುಕೊಂಡರು
ಗೊತ್ತಿರಲಿಲ್ಲ ಅವರಿಗೆ  ಸತ್ಯ
ಸೂರ್ಯನ ಹಾಗೆಂದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT