ಒಬ್ಬ ಬುದ್ಧಿಜೀವಿಯಾಗಿ ಯು.ಆರ್.ಅನಂತಮೂರ್ತಿ ಅವರು ಅನೇಕ ಸಾಮಾಜಿಕ ಮತ್ತು ವೈಚಾರಿಕ ವಿಷಯಗಳನ್ನು ನೇರವಾಗಿ ಅಭಿವ್ಯಕ್ತಗೊಳಿಸಿದರು. ಕೆಲವು ಚಳವಳಿಗಳಲ್ಲಿ ಭಾಗವಹಿಸಿದರು. ಈ ಹಾದಿಯಲ್ಲಿ ಅನೇಕ ವಿವಾದಗಳಿಗೂ ಸಿಲುಕಿದರು. ಆದರೆ ಅವರ ಅಂತ್ಯಕ್ರಿಯೆಯ ವೈಭವ ಕಂಡು ಅಚ್ಚರಿಯಾಯಿತು; ಕಸಿವಿಸಿಯೂ ಆಯಿತು.
ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಬದುಕಿನುದ್ದಕ್ಕೂ ಗಾಂಧಿವಾದವನ್ನು ಎತ್ತಿ ಹಿಡಿದರು. ಅವರ ಅಂತ್ಯಕ್ರಿಯೆಯಲ್ಲೂ ಯಥೇಚ್ಛವಾಗಿ ಶ್ರೀಗಂಧದ ತುಂಡುಗಳನ್ನು ಬಳಸಲಾಯಿತು!
ನಿಜ, ಮೃತ ವ್ಯಕ್ತಿ ಹಾಗೂ ಅವರ ಕುಟುಂಬದವರಿಗೆ ಅಂತ್ಯಕ್ರಿಯೆಯ ವಿಷಯದಲ್ಲಿ ಅವರದ್ದೇ ಆದ ಹಕ್ಕು, ನಿಲುವುಗಳು ಇರುತ್ತವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಶರೀರವನ್ನು ಕೋಲ್ಕತ್ತದ ಆಸ್ಪತ್ರೆಯೊಂದಕ್ಕೆ ದಾನ ಮಾಡಲಾಯಿತು. ನಮ್ಮ ರಾಜ್ಯದ ಸಿಪಿಎಂ ನಾಯಕ ಸೂರ್ಯನಾರಾಯಣ ರಾವ್ ಅವರ ಅಂತ್ಯಕ್ರಿಯೆಯನ್ನು ಯಾವುದೇ ಧಾರ್ಮಿಕ ವಿಧಿಗಳಿಲ್ಲದೆ ವಿದ್ಯುತ್ ಚಿತಾಗಾರದಲ್ಲಿ ಸರಳವಾಗಿ ನೆರವೇರಿಸಲಾಯಿತು. ಸಾಹಿತ್ಯ–ಸಾಂಸ್ಕೃತಿಕ ಲೋಕದ ಚಿ.ಶ್ರೀನಿವಾಸ ರಾಜು, ಮೇಕಪ್ ನಾಣಿ ಅಂತಹವರ ಅಪೇಕ್ಷೆಯ ಮೇರೆಗೆ ಕುಟುಂಬದವರು ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ನೀಡಿದ್ದರೆಂಬುದು ನೆನಪು. ಖ್ಯಾತನಾಮರಲ್ಲದೆ, ಅನೇಕ ಸಾಮಾನ್ಯ ಜನರೂ ಈ ವಿಷಯದಲ್ಲಿ ಅನುಕರಣೀಯ ಮಾನವತೆಯನ್ನು ಮೆರೆದಿದ್ದಾರೆ. ಆದರೆ ಅನಂತಮೂರ್ತಿ ಅವರ ವಿಷಯದಲ್ಲಿ ಹೀಗೇಕಾಯಿತು?