ಬೆಳಗಾವಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರು ಕುಟುಂಬವನ್ನು ಸಾಕಲಾಗದೆ ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಬಾರ್ವೊಂದರಲ್ಲಿ ಕೆಲಸ ಮಾಡುತ್ತಾರೆ!
ಅಚ್ಚರಿಯಾದರೂ ಇದು ಸತ್ಯ. ಹೀಗೆ ಉಪನ್ಯಾಸಕರಾಗಿದ್ದು ಬೇರೆ ಕಡೆ ಅರೆಕಾಲಿಕ ಕೆಲಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ‘ಇಲ್ಲಿ ಕೆಲಸ ಮಾಡುವ ದುರ್ಗತಿ ಯಾಕೆ ಬಂತು’ ಎಂದು ಅವರನ್ನು ಪ್ರಶ್ನೆ ಮಾಡಿದರೆ ‘ಸರ್ಕಾರ 6 ತಿಂಗಳಿಗೋ ಒಂದು ವರ್ಷಕ್ಕೋ ಸಂಬಳವನ್ನು ನೀಡುತ್ತದೆ. ನನ್ನನ್ನೇ ನಂಬಿಕೊಂಡ ಹೆಂಡತಿ ಮಕ್ಕಳಿದ್ದಾರೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ಅವರನ್ನು ಸಾಕುವುದು ಕಷ್ಟ. ಅದಕ್ಕೇ ಇಲ್ಲಿ ದುಡಿಯುತ್ತಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನನ್ನ ಹೆಸರು ಬರೆಯಬೇಡಿ. ನನ್ನ ವಿದ್ಯಾರ್ಥಿಗಳು ಈ ಬಾರ್ಗೆ ಬಂದರೆ ನನಗೆ ಮುಜುಗರವಾಗುತ್ತದೆ. ಆದರೂ ಕೆಲವರು ಆಗಾಗ ಇಲ್ಲಿಗೆ ಬರುತ್ತಾರೆ. ಆಗ ನಾನು ಆ ಟೇಬಲ್ಗೆ ಸರ್ವ್ ಮಾಡುವುದನ್ನು ತಪ್ಪಿಸಿಕೊಳ್ಳುತ್ತೇನೆ. ಅವರಿಗೆ ಕುಡಿಯಬೇಡಿ ಎಂದು ಹೇಳುವ ನೈತಿಕತೆಯನ್ನೂ ನಾನು ಕಳೆದುಕೊಂಡಿದ್ದೇನೆ. ಅವರು ಬಿಟ್ಟು ಹೋದ ‘ಟಿಪ್ಸ್’ ಮುಟ್ಟುವುದಕ್ಕೆ ಮನಸ್ಸು ಒಪ್ಪುವುದಿಲ್ಲ ಸಾರ್’ ಎಂದು ಕಣ್ಣೀರಿಟ್ಟರು.
ರಾಜ್ಯದ ಹಲವಾರು ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 11, 680 ಮಂದಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ ಬಹುತೇಕರು ತಮ್ಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ಎನ್ಇಟಿ, ಕೆ–ಸ್ಲೆಟ್ ಪರೀಕ್ಷೆ ಪಾಸಾಗಿದ್ದಾರೆ. ಕೆಲವರು ಪಿಎಚ್ಡಿ ಮಾಡಿಕೊಂಡವರೂ ಇದ್ದಾರೆ. ಪಿಎಚ್ಡಿ ಮಾಡಿಕೊಂಡವರಿಗೆ ಮಾಸಿಕ ರೂ 10 ಸಾವಿರ, ಉಳಿದವರಿಗೆ ಮಾಸಿಕ ರೂ 8 ಸಾವಿರ ವೇತನ ನೀಡಲಾಗುತ್ತದೆ. ಈ ವೇತನವನ್ನು 6 ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಒಟ್ಟಿಗೇ ಕೊಡಲಾಗುತ್ತದೆ. ಕಳೆದ ವರ್ಷದ ವೇತನ 2014ರ ಆಗಸ್ಟ್ ನಲ್ಲಿ ಬಂದಿದೆ. ಈ ವರ್ಷದ ಹಣ ಯಾವಾಗ ಬರುತ್ತದೆ ಗೊತ್ತಿಲ್ಲ. ಕೆಲವು ಜಿಲ್ಲೆಗಳಲ್ಲಿ 10 ತಿಂಗಳು ಕೆಲಸ. ಇನ್ನು ಕೆಲವು ಜಿಲ್ಲೆಗಳಲ್ಲಿ 9 ತಿಂಗಳು ಮಾತ್ರ ಕೆಲಸ. ಈ ವರ್ಷ ಇದ್ದವರನ್ನು ಮುಂದಿನ ವರ್ಷವೂ ಮುಂದುವರಿಸಲಾಗುತ್ತದೆ ಎಂಬ ‘ಗ್ಯಾರಂಟಿ’ ಇಲ್ಲ. ಕಳೆದ ವರ್ಷ ತೀವ್ರ ಹೋರಾಟ ನಡೆಸಿದ್ದರಿಂದ ಈ ಬಾರಿ ಮಾತ್ರ ಕಳೆದ ಬಾರಿ ಇದ್ದವರಲ್ಲಿಯೇ ಬಹುತೇಕರನ್ನು ಮುಂದುವರಿಸಲಾಗಿದೆ.
15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರನ್ನು ಕಾಯಂ ಮಾಡಬೇಕು. ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲು ತಜ್ಞರ ಸಮಿತಿ ರಚಿಸಬೇಕು. ಮಾಸಿಕ ₨25 ಸಾವಿರ ವೇತನ ನೀಡಬೇಕು. 12 ತಿಂಗಳೂ ವೇತನ ನೀಡಬೇಕು. ಪ್ರತಿ ತಿಂಗಳ ಮೊದಲವಾರ ವೇತನ ನೀಡಬೇಕು. ಮಹಿಳೆಯರಿಗೆ ವೇತನ ಸಹಿತ 3 ತಿಂಗಳು ಹೆರಿಗೆ ರಜೆ ನೀಡಬೇಕು |
‘6 ತಿಂಗಳಿಗೋ, ಒಂದು ವರ್ಷಕ್ಕೋ ಬರುವ ಹಣವನ್ನೂ ಪಡೆಯಲು ಶೇ 10ರಿಂದ 15ರಷ್ಟು ಲಂಚ ನೀಡಲೇ ಬೇಕಾಗುತ್ತದೆ. ಯಾವಾಗಲೋ ಹಣ ಬರುತ್ತದೆ ಎಂದು ಸಾಕಷ್ಟು ಸಾಲವನ್ನೂ ಮಾಡಿಕೊಂಡಿರುತ್ತೇವೆ. ಬಂದ ಹಣ ಸಾಲ ತೀರಿಸಲೂ ಸಾಕಾಗುವುದಿಲ್ಲ. ಅದಕ್ಕೆ ನಾವು ಬೇರೆ ಕೆಲಸ ಮಾಡುವುದು ಅನಿವಾರ್ಯ’ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀನಿವಾಚಾರ್ ಹೇಳುತ್ತಾರೆ. ಇವರೂ ಕೂಡ ಮಾಲೂರಿನಲ್ಲಿ ರಾಜ್ಯಶಾಸ್ತ್ರ ಬೋಧನೆ ಮಾಡುವುದರ ಜೊತೆಗೆ ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.
ಬೆಳಗಾವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ 13 ವರ್ಷಗಳಿಂದ ರಾಜ್ಯಶಾಸ್ತ್ರ ಉಪನ್ಯಾಸಕರಾಗಿರುವ ಗದಿಗೆಪ್ಪ ಕರಡಿ ಅವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾತ್ರಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಾರೆ. ಹಿಂಡಲಗ ಕಾಲೇಜಿನಲ್ಲಿ 13 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿರುವ ರಮೇಶ್ ರಾತ್ರಿ ಕಾವಲುಗಾರರಾಗಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ 8 ವರ್ಷಗಳಿಂದ ಸಮಾಜಶಾಸ್ತ್ರ ಬೋಧಿಸುತ್ತಿರುವ ಆಂಜಿನಪ್ಪ ಚಪ್ಪಲಿ ಅಂಗಡಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಾರೆ.
ಮಹಿಳಾ ಉಪನ್ಯಾಸಕರ ಕಷ್ಟ: ಮಹಿಳಾ ಉಪನ್ಯಾಸಕರ ಕಷ್ಟವಂತೂ ಹೇಳತೀರದು. ಅವರಿಗೆ ಹೆರಿಗೆ ರಜೆಯೂ ಇಲ್ಲ. ಹೆರಿಗೆ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಯಾಗಿದ್ದರೂ ಒಂದೇ ತಿಂಗಳಿನಲ್ಲಿ ಕೆಲಸಕ್ಕೆ ಹಾಜರಾಗುತ್ತಾರೆ. ಇಲ್ಲವಾದರೆ ಕೆಲಸ ಕಳೆದುಕೊಳ್ಳುವ ಭೀತಿ ಇರುತ್ತದೆ ಎಂದು ಸಂಘದ ಗೌರವಾಧ್ಯಕ್ಷ ರಾಜಶೇಖರ ಮೂರ್ತಿ ಹೇಳಿದರು.
ರಾಜ್ಯದಲ್ಲಿ ಈಗ ಪ್ರಥಮದರ್ಜೆ ಕಾಲೇಜುಗಳಲ್ಲಿ 4,800 ಉಪನ್ಯಾಸಕರ ಹುದ್ದೆ ಖಾಲಿ ಇವೆ. ರಾಜ್ಯ ಸರ್ಕಾರ ಈಗ 1192 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ನೇಮಕಾತಿಯಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ವಯೋಮಿತಿ ಮೀರಿದವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರೂ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಮಹಿಳಾ ಅತಿಥಿ ಉಪನ್ಯಾಸಕರು ಗಾರ್ಮೆಂಟ್, ಬ್ಯೂಟಿ ಪಾರ್ಲರ್ ಮುಂತಾದ ಕಡೆ ಅರೆಕಾಲಿಕ ಕೆಲಸ ಮಾಡುತ್ತಾರೆ. ಜೊತೆಗೆ ಕುಟುಂಬದ ನಿರ್ವಹಣೆಯನ್ನೂ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಉಪನ್ಯಾಸಕರ ಬದುಕೇ ಹೀಗೆ ಅತಂತ್ರವಾಗಿದ್ದರೆ ಅವರು ಹೇಗೆ ಪಾಠ ಮಾಡುತ್ತಾರೆ. ಉತ್ತಮ ವಿದ್ಯಾರ್ಥಿಗಳನ್ನು ಹೇಗೆ ತಯಾರು ಮಾಡುತ್ತಾರೆ? ಎಂದು ಅವರು ಪ್ರಶ್ನಿಸುತ್ತಾರೆ. ‘ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರಿಸಬೇಕು. ನಮಗೆ ಜವಾಬ್ದಾರಿಯುತ ಸರ್ಕಾರ ಬೇಕು’ ಎನ್ನುವುದು ಅವರ ಬೇಡಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.