ಇಂದು ಅರಣ್ಯದಲ್ಲಿ ರೆಸಾರ್ಟ್ ನಿರ್ಮಿಸಿ ಪ್ರವಾಸೋದ್ಯಮ ಬೆಳೆಸುವುದೇ ಅಭಿವೃದ್ಧಿ ಎನ್ನುವಂತಾಗಿದೆ. ಅರಣ್ಯ ಪ್ರದೇಶ ದಿನೇ ದಿನೇ ಸಂಕುಚಿತವಾಗುತ್ತಿದೆ. ಕೈಗಾರಿಕೆ, ನಗರೀಕರಣ, ಆರ್ಥಿಕ ಪ್ರಗತಿಯಿಂದ ಕಾಡಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮುಖ್ಯವಾಗಿ ಪ್ರಾಣಿಗಳಿಗೆ ಆಹಾರ, ನೀರು ಮತ್ತು ಸಂತಾನ ಅಭಿವೃದ್ಧಿಗೆ ಸ್ಥಳ ಬೇಕು. ಆದರೆ, ಅರಣ್ಯ ಪ್ರದೇಶ ಸಂಕುಚಿತವಾಗುತ್ತಿರುವುದೇ ದೊಡ್ಡ ಸಮಸ್ಯೆ. ಜತೆಗೆ ಒಂದು ಕಾಡಿಗೂ ಇನ್ನೊಂದು ಕಾಡಿಗೂ ಸಂಪರ್ಕವೇ ಇಲ್ಲದಂತಾಗುತ್ತಿದೆ.
ಮೊದಲು ಒಂದು ಕಾಡಿನ ತುದಿಗೆ ಇನ್ನೊಂದು ಕಾಡು ಆರಂಭವಾಗುತ್ತಿತ್ತು. ಈಗ ಅಂತಹ ಸಂಪರ್ಕವನ್ನೇ ಕಡಿದು ಹಾಕಲಾಗುತ್ತಿದೆ. ಈಗಿರುವ ಕಾಡುಗಳ ಸುತ್ತ ಒತ್ತಡ ಹೆಚ್ಚುತ್ತಿದೆ. ಕಾಡುಗಳ ನಡುವೆ ‘ಕಾರಿಡಾರ್’ಗಳು ಇಲ್ಲ. ಒಂದೊಂದು ಕಾಡು ಒಂದೊಂದು ದ್ವೀಪವಾಗುತ್ತಿದೆ.
ನಿಸರ್ಗದಲ್ಲಿ ಆಹಾರ ಸರಪಳಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸರಪಳಿಯಲ್ಲಿ ಯಾವುದಾದರೂ ಒಂದು ಕೊಂಡಿ ಕಳಚಿದರೂ ಪರಿಸರದಲ್ಲಿ ಅಸಮತೋಲನ ಉಂಟಾಗಿ ವಿವಿಧ ರೀತಿಯಲ್ಲಿ ಪರಿಣಾಮಗಳು ಉಂಟಾಗುತ್ತವೆ. ಆಹಾರ ಸರಪಳಿಯಲ್ಲೂ ಯಾವ ಪ್ರಾಣಿ ಯಾವ ಜಾಗದಲ್ಲಿ ಇರಬೇಕೋ ಅಲ್ಲಿಯೇ ಇದ್ದರೆ ಸುರಕ್ಷಿತ.
ಪ್ರಾಣಿಗಳು ನಾಡಿಗೆ ಬಂದಾಗ ಜನ ಹೇಗೆ ವರ್ತಿಸುತ್ತಾರೆ ಎನ್ನುವುದು ಸಹ ಮುಖ್ಯ. ಆದರೆ, ಈಗಿನ ಪೀಳಿಗೆಗೆ ಪ್ರಾಣಿಗಳ ಬಗ್ಗೆ ಭಯ ಮಾತ್ರ ಇದೆ. ಪರಿಸರದ ಜತೆಗಿನ ಸಂಬಂಧ ಇಲ್ಲದಿರುವುದೇ ಇದಕ್ಕೆ ಕಾರಣ. ಹೀಗಾಗಿ ಅಂತರ ಸೃಷ್ಟಿಯಾಗಿದೆ. ಎಲ್ಲಿ ಮಾನವ–ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆಯೋ ಅಲ್ಲಿನ ಜನರಿಗೆ ಪ್ರಾಣಿಗಳು ಮತ್ತು ಅರಣ್ಯ ಕುರಿತಾದ ಸಾಮಾನ್ಯ ಜ್ಞಾನ ಮತ್ತು ತಿಳಿವಳಿಕೆ ಮೂಡಿಸಬೇಕು.
ತೋಟಕ್ಕೆ ಆನೆ ದಾಳಿ ಮಾಡಿದಾಗ ಹೇಗೆ ವರ್ತಿಸಬೇಕು ಎನ್ನುವ ಬಗ್ಗೆಯೂ ಅರಿವು ಇರಬೇಕು. ಪ್ರಸ್ತುತ ಯಾವುದಾದರೂ ಪ್ರಾಣಿ ದಾಳಿ ನಡೆಸಿದರೆ ನೂರಾರು ಜನ ಸೇರುತ್ತಾರೆಯೇ ಹೊರತು ಯಾವುದೇ ರೀತಿ ಪರಿಹಾರ ರೂಪಿಸುವುದಿಲ್ಲ. ಇದರಿಂದ ಹೆಚ್ಚಿನ ಹಾನಿ ಉಂಟಾಗುತ್ತಿದೆ. ಜನರಲ್ಲಿ ಸಹಿಷ್ಣು ಮನೋಭಾವವೇ ಇಲ್ಲದಂತಾಗಿದೆ. ಆದ್ದರಿಂದ ಜನರ ಮನಸ್ಥಿತಿ ಬದಲಾಗಬೇಕು. ಇನ್ನೊಂದೆಡೆ ಅರಣ್ಯ ಇಲಾಖೆ ಘರ್ಷಣೆಗಳ ನಿರ್ವಹಣೆಯಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಪ್ರಾಣಿಗಳಿಗೆ ರಕ್ಷಣೆ ದೊರೆಯುತ್ತಿಲ್ಲ.
ದೇಶದಲ್ಲಿ ಪ್ರತಿ ವರ್ಷ ಅಂದಾಜು ಒಂದು ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ. ಅಪಘಾತಗಳು ಸಂಭವಿಸುತ್ತವೆ ಎಂದು ವಾಹನಗಳನ್ನು ನಿಷೇಧಿಸಲು ಸಾಧ್ಯವೇ? ವನ್ಯಜೀವಿಗಳು ದಾಳಿ ನಡೆಸಿದಾಗ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡುವುದರಿಂದ ಮಾತ್ರ ಎಲ್ಲ ಸಮಸ್ಯೆಗಳೂ ಇತ್ಯರ್ಥವಾಗುವುದಿಲ್ಲ. ಇದರ ಬದಲಾಗಿ ಸಂಘರ್ಷ ಉಂಟಾಗುವ ಪರಿಸ್ಥಿತಿ ಹೇಗೆ ಸೃಷ್ಟಿಯಾಗಿದೆ ಎನ್ನುವುದನ್ನು ಅರಿತುಕೊಂಡು ಪರಿಹಾರ ರೂಪಿಸುವ ಪ್ರಯತ್ನ ಮಾಡಬೇಕು.
ಪ್ರಾಣಿಗಳನ್ನು ಕಂಡ ತಕ್ಷಣ ಸಾಯಿಸಬಹುದೇ? ಯಾವುದೇ ಪ್ರಾಣಿಯನ್ನು ಸಾಯಿಸಬೇಕಾದರೂ ಕಾನೂನಿನಲ್ಲಿ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಮೂಕ ಪ್ರಾಣಿಗಳಿಗೆ ದನಿಯಾಗಬೇಕಾದವರೇ ಮೌನ ವಹಿಸಿದ್ದಾರೆ. ಹೀಗಾಗಿ ಮೂಕ ಪ್ರಾಣಿಗಳ ಕೂಗು ಅರಣ್ಯರೋದನವಾಗಿದೆ.
ಪರಿಹಾರ: ಅರಣ್ಯ ಇಲಾಖೆ, ಮಾನವ–ಪ್ರಾಣಿಗಳ ನಡುವಿನ ಸಂಘರ್ಷದ ಪ್ರದೇಶಗಳನ್ನು ಗುರುತಿಸಬೇಕು. ಸಂಘರ್ಷವನ್ನು ಕಡಿಮೆ ಮಾಡುವ ಅಥವಾ ತಡೆಗಟ್ಟುವ ಯೋಜನೆಗಳನ್ನು ರೂಪಿಸಬೇಕು. ಸಂಘರ್ಷ ನಿಭಾಯಿಸಲು ನಮ್ಮಲ್ಲಿ ಸಿದ್ಧತೆಗಳು ಕಡಿಮೆ. ನಾಡಿಗೆ ಪ್ರಾಣಿಗಳು ಬಂದಾಗ ಉಂಟಾಗುವ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸನ್ನದ್ಧ ಸ್ಥಿತಿಯಲ್ಲಿ ಅರಣ್ಯ ಇಲಾಖೆ ಇರುವುದಿಲ್ಲ. ಹೀಗಾಗಿ ಇಲಾಖೆಯ ಚಿಂತನಾ ಕ್ರಮಗಳು ಬದಲಾಗಬೇಕು.
ಪ್ರಾಣಿಗಳು ನಾಡಿಗೆ ಬಾರದಂತೆ ಕಂದಕ, ಸೌರಬೇಲಿ ನಿರ್ಮಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅರಣ್ಯದ ಸಮೀಪ ಇರುವ ಜಮೀನಿನಲ್ಲಿ ಕಬ್ಬು, ಬಾಳೆಯಂತಹ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರತಿ ಜೀವಿಗೂ ಬದುಕುವ ಛಲ ಇದ್ದೇ ಇರುತ್ತದೆ. ಹೀಗಾಗಿ ರುಚಿಕರವಾದ ಮತ್ತು ಸುಲಭವಾಗಿ ಆಹಾರ ಸಿಗುವುದಾದರೆ ಪ್ರಾಣಿಗಳು ಅಂತಹ ಸ್ಥಳಕ್ಕೆ ಲಗ್ಗೆ ಇಡುವುದು ಸಹಜ. ಆದ್ದರಿಂದ ಅರಣ್ಯಕ್ಕೆ ಸಮೀಪದ ಪ್ರದೇಶಗಳಲ್ಲಿ ಯಾವುದನ್ನು ಕಾಡು ಪ್ರಾಣಿಗಳು ತಿನ್ನುವುದಿಲ್ಲವೋ ಅಂತಹವನ್ನು ಬೆಳೆಯಲು ಉತ್ತೇಜನ ನೀಡಬೇಕು.
ಕೆಲವೆಡೆ ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಾರೆ. ಇದರ ವಾಸನೆಗೂ ಆನೆಗಳು ಬರುತ್ತವೆ. ಇಂತಹ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಪ್ರಯತ್ನ ಮಾಡಬೇಕು. ಯಾವುದಾದರೂ ಯೋಜನೆಗೆ ಭೂಮಿ ನೀಡುವ ಸಂದರ್ಭ ಒದಗಿದರೆ ಕಂದಾಯ ಭೂಮಿ ನೀಡಬೇಕೇ ಹೊರತು ಅರಣ್ಯ ಪ್ರದೇಶವನ್ನು ಅಲ್ಲ. ಎಲ್ಲರಿಗೂ ಭೂಮಿ ಕೊಡಲು ಸಾಧ್ಯವಿಲ್ಲದ ಕಾರಣ ಪುನರ್ವಸತಿ ಕಲ್ಪಿಸುವ ಯೋಜನೆಗಳಲ್ಲಿ ನಿರಾಶ್ರಿತರಿಗೆ ಉದ್ಯೋಗ ನೀಡಬೇಕು.
ಯೋಜನೆ ಬೇಡ: ಕಾಡಿನ ಮಧ್ಯೆ ವಿದ್ಯುತ್ ಸೇರಿದಂತೆ ಯಾವುದೇ ಯೋಜನೆಜಾರಿಗೊಳಿಸಬಾರದು. ನಗರಗಳ ಸುತ್ತ ಉದ್ಯಮಗಳನ್ನು ಸ್ಥಾಪಿಸಬೇಕೇ ಹೊರತು ಕಾಡುಗಳಲ್ಲಿ ಅಲ್ಲ. ಅರಣ್ಯ ಪ್ರದೇಶದ ತುದಿಯಲ್ಲಿ ಗಾಳಿಯಂತ್ರಗಳನ್ನು ಅಳವಡಿಸುವ ಯೋಜನೆಗಳು ಸಹ ಸಾಧುವಲ್ಲ. ಗಾಳಿಯಂತ್ರ ಸ್ಥಾಪಿಸಿದರೆ ಶೇಕಡ 60ರಷ್ಟು ಸಬ್ಸಿಡಿ ದೊರೆಯುತ್ತಿದೆ.
ಹೀಗಾಗಿ ಇದೊಂದು ಸಬ್ಸಿಡಿ ಪಡೆಯುವ ಯೋಜನೆಯಾಗುತ್ತಿದೆ ಹೊರತು ನಿಜವಾಗಿಯೂ ಎಷ್ಟು ವಿದ್ಯುತ್ ಉತ್ಪಾದನೆಯಾಗಿದೆ ಎನ್ನುವ ಬಗ್ಗೆ ನಿಗಾ ವಹಿಸುವ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಗಾಳಿಯಂತ್ರಗಳಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ವಲಸೆ ಬರುವ ಪಕ್ಷಿಗಳಿಗೂ ಧಕ್ಕೆಯಾಗುತ್ತಿದೆ. ಜತೆಗೆ ಗಾಳಿಯಂತ್ರಗಳನ್ನು ಅಳವಡಿಸುವ ಸಲುವಾಗಿ ಅರಣ್ಯ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಗಾಳಿಯಂತ್ರಗಳನ್ನು ನೆಲದ ಮಟ್ಟದಲ್ಲೇ ಅಳವಡಿಸಬಹುದು.
ಇಂತಹ ಪ್ರಯೋಗ ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಆದ್ದರಿಂದ, ಈಗಿನ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ. ಅರಣ್ಯದಲ್ಲಿ ಚೆಕ್ಡ್ಯಾಂಗಳನ್ನು ನಿರ್ಮಿಸುವ ಅಗತ್ಯವೂ ಇಲ್ಲ. ಈಗ ಜೆಸಿಬಿ, ಲಾರಿಗಳು ಹೋಗುವ ಜಾಗಗಳಲ್ಲಿ ಮಾತ್ರ ಚೆಕ್ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಕಾಡಿನಲ್ಲೇ ಹಳ್ಳ, ಕೆರೆಕಟ್ಟೆಗಳಿವೆ. ಸಹಜವಾಗಿಯೇ ಹರಿಯುವ ನೀರು ಇದ್ದರೆ ಪ್ರಾಣಿಗಳಿಗೆ ಅನುಕೂಲ. ಚೆಕ್ಡ್ಯಾಂ ಇದ್ದಲ್ಲಿಯೇ ಎಲ್ಲ ಪ್ರಾಣಿಗಳೂ ಹೋಗುವುದಿಲ್ಲ.
ಒಂದು ವೇಳೆ ಚೆಕ್ಡ್ಯಾಂ ನಿರ್ಮಿಸಿದರೂ ಆ ಸ್ಥಳದ ಸುತ್ತಮುತ್ತ ಮಾತ್ರ ಪ್ರಾಣಿಗಳ ಸಂಖ್ಯೆ ಅಧಿಕವಾಗಿ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ನಿಸರ್ಗದಲ್ಲಿ ಸಹಜವಾಗಿ ಬದುಕುವ ಪ್ರಾಣಿ, ಪಕ್ಷಿಗಳಿಗೆ ತೊಂದರೆ ನೀಡಿದಂತಾಗಿ ಅರಣ್ಯ ಪ್ರದೇಶದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ನೈಸರ್ಗಿಕವಾಗಿ ಇರುವುದನ್ನು ಅದು ಯಥಾಸ್ಥಿತಿಯಲ್ಲೇ ಇರಲು ಬಿಡಬೇಕು.
ಯಾವುದೇ ಸಂದರ್ಭದಲ್ಲಿ ನಿಸರ್ಗದ ವಿರುದ್ಧ ಹೋಗುವುದು ಸರಿ ಅಲ್ಲ. ಈಗಿರುವ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ರಕ್ಷಣಾ ಕಾಯ್ದೆಗಳು ಉತ್ತಮವಾಗಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಸಾಕು. ಆದರೆ, ಈ ಕಾಯ್ದೆಗಳನ್ನು ಸಡಿಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಅಕ್ರಮ ಸಕ್ರಮ: ಅಕ್ರಮ–ಸಕ್ರಮದಂತಹ ಯೋಜನೆಗಳನ್ನು ಜಾರಿಗೊಳಿಸುವುದು ತಪ್ಪು. ಅರಣ್ಯ ಭೂಮಿಯನ್ನು ಕಬಳಿಸಿದ ನಂತರ ಸಕ್ರಮಗೊಳಿಸಿಕೊಳ್ಳುವುದು ಸರಿ ಅಲ್ಲ. ಇಂತಹ ಭೂ ಅತಿಕ್ರಮಣವನ್ನು ಕಾನೂನು ಬದ್ಧಗೊಳಿಸುವುದಾದರೆ ಅದನ್ನು ‘ಅಕ್ರಮ’ ಎಂದು ಕರೆಯಲೇಬಾರದು. ಕಾನೂನು ಎಲ್ಲರಿಗೂ ಸಮ. ಆದರೆ, ಅದನ್ನು ವಿಶ್ಲೇಷಿಸುವಾಗ ಭೇದಭಾವ ಇರಬಾರದು. ಬಡವರಿಗೆ ಯಾವ ರೀತಿಯ ಕಾನೂನು ಅನ್ವಯವಾಗುತ್ತದೋ ಶ್ರೀಮಂತರಿಗೂ ಅದೇ ಅನ್ವಯವಾಗಬೇಕು. ಈಗಲೇ ಎಚ್ಚೆತ್ತುಕೊಂಡು ದೂರದೃಷ್ಟಿಯಿಂದ ಅರಣ್ಯ ಸಂರಕ್ಷಿಸುವ ಯೋಜನೆಗಳನ್ನು ರೂಪಿಸಿದರೆ, ಭವಿಷ್ಯದಲ್ಲಿ ಇನ್ನಷ್ಟು ಬಿಗಡಾಯಿಸಬಹುದಾದ ಮಾನವ – ಪ್ರಾಣಿ ಸಂಘರ್ಷಕ್ಕೆ ತಡೆ ಒಡ್ಡಲು ಸಾಧ್ಯ.
(ಲೇಖಕರು ವನ್ಯಜೀವಿ ಕಾರ್ಯಕರ್ತರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.