ಡಾ. ಸಿ.ಡಿ. ರವಿರಾಜ್ ಅವರು ಆಯುಷ್ ವೈದ್ಯರು ಅಲೋಪಥಿ ಚಿಕಿತ್ಸೆ ನೀಡುವುದನ್ನು ಸಮರ್ಥಿಸಿಕೊಂಡಿರುವುದಕ್ಕೆ ನನ್ನ ಪ್ರತಿಕ್ರಿಯೆ (ಪ್ರ.ವಾ.,‘ಸಂಗತ’ ಅ.14).
ಅಲೋಪಥಿ ವೈದ್ಯರು ಅಲೋಪಥಿ ಚಿಕಿತ್ಸೆಯನ್ನು ಸ್ವತಂತ್ರವಾಗಿ ನೀಡುವ ಮಟ್ಟಕ್ಕೆ ಬೆಳೆಯುವಷ್ಟರಲ್ಲಿ ಇಡೀ ಅಲೋಪಥಿ ಚಿಕಿತ್ಸೆ ಬಗ್ಗೆ ಸಮಗ್ರ ಜ್ಞಾನ ಪಡೆದಿರುತ್ತಾರೆ. ಪ್ರತಿದಿನವೂ ಹೊಸ ಔಷಧಗಳು ಆವಿಷ್ಕಾರವಾಗುತ್ತಿರುವ ಆಧುನಿಕ ಯುಗದಲ್ಲಿ ಹೊಸ ಔಷಧವೊಂದನ್ನು ಬಳಸುವಾಗಲೂ ಅದರ ಬಗ್ಗೆ ಸವಿವರವಾಗಿ ತಿಳಿದುಕೊಂಡೇ ಉಪಯೋಗಿಸಬೇಕು. ಸರಿಯಾದ ಮಾಹಿತಿಯಿಲ್ಲದೆ ಔಷಧವನ್ನು ಮನುಷ್ಯರ ಮೇಲೆ ಬಳಸುವುದೂ ಒಂದು ರೀತಿಯ ಪ್ರಯೋಗವಾಗುತ್ತದೆ. ಈ ರೀತಿಯ ಪ್ರಯೋಗಗಳು ಆಯುಷ್ ಪದ್ಧತಿಯನ್ನೂ ಒಳಗೊಂಡಂತೆ ಎಲ್ಲಾ ವೈದ್ಯಪದ್ಧತಿಗಳಲ್ಲಿ ನಿಷಿದ್ಧ. ಇಂತಹ ಪ್ರಯೋಗಗಳಿಗೆ ಕಾನೂನಿನ ಮಾನ್ಯತೆ ಇಲ್ಲ.
ಆಯುಷ್ ವೈದ್ಯರಿಗೆ ಅಲೋಪಥಿ ಪದ್ಧತಿಯ ಬಗ್ಗೆ ಅರೆಬರೆ ಜ್ಞಾನವಿರುವುದರಿಂದ ಅಲೋಪಥಿ ಮಾತ್ರೆಗಳನ್ನು ಬರೆದುಕೊಟ್ಟರೆ ಸರಿಯೆಂದು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಸರಿಯೆಂದಾದರೆ ಹಲವಾರು ವರ್ಷ ಔಷಧಿ ಮಾತ್ರೆಗಳ ನಡುವೆಯೇ ತಮ್ಮ ಜೀವನ ಕಳೆಯುವ ಫಾರ್ಮಾಸಿಸ್ಟ್ ಅಥವಾ ಹಲವು ವರ್ಷ ರೋಗಿಗಳ ಶುಶ್ರೂಷೆಯಲ್ಲಿ ತೊಡಗುವ ನರ್ಸ್ಗಳು ಕೂಡ ಕ್ಲಿನಿಕ್ ಪ್ರಾರಂಭಿಸಿ ಚಿಕಿತ್ಸೆ ನೀಡಬಹುದಲ್ಲವೇ? ನಾವು ಯಾವ ಚಿಕಿತ್ಸಾ ಪದ್ಧತಿಯನ್ನು ಅಧ್ಯಯನ ಮಾಡಿರುತ್ತೇವೆಯೋ ಅದೇ ಪದ್ಧತಿಯಲ್ಲಿ ಮಾತ್ರ ಚಿಕಿತ್ಸೆ ನೀಡಬೇಕು.
ಅಲೋಪಥಿ ವೈದ್ಯರು ಲಿವ್ 52, ಎಮ್ಟೋನ್ ಮುಂತಾದ ಆಯುರ್ವೇದದ ಮಾತ್ರೆಗಳನ್ನು ರೋಗಿಗಳಿಗೆ ನೀಡುವುದೂ ತಪ್ಪಾಗುತ್ತದೆ. ಆಯುರ್ವೇದಕ್ಕೆ ವೈದ್ಯಕೀಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಆಯುರ್ವೇದದಲ್ಲೂ ಸಹ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿವೆ. ಆಯುಷ್ ವೈದ್ಯರು ತಮ್ಮ ಪದ್ಧತಿಗೇ ಬದ್ಧತೆ ತೋರಿಸಿ ಹೆಚ್ಚಿನ ಸಂಶೋಧನೆಗಳಲ್ಲಿ ನಿರತರಾದರೆ ಆಯುರ್ವೇದವು ಇನ್ನಷ್ಟು ಸಮಕಾಲೀನವಾಗುತ್ತದೆ. ಇಂತಹ ಶ್ರೇಷ್ಠ ಪದ್ಧತಿ ಆಯ್ಕೆ ಮಾಡಿಕೊಂಡಿರುವ ಆಯುಷ್ ವೈದ್ಯರಿಗೆ ಅಲೋಪಥಿ ಔಷಧಿಗಳನ್ನು ಬಳಸಬೇಕೆಂಬ ಹಪಾಹಪಿ ಏಕೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.