ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರದಿರಲಿ ಆತುಮದೀಪ...

Last Updated 2 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನನ್ನ ಕೊಂದರು

ಅಮ್ಮ, ಅಮ್ಮ, ಅಮ್ಮಾ...
ನನ್ನ ಕೊಂದರು,
ಮುಖವ ತಿಳಿಯೆ, ಮನವ ತಿಳಿಯೆ,
ನನ್ನ ಕೊಂದರು.
ಯಾಕೆ ಏನು ಯಾರು ತಿಳಿಯೆ,
ನನ್ನ ಕೊಂದರು
ಕಣ್ಣಲ್ಲಿ ಕಂಡವರೂ
ಕಾಣದಾದರು ನನ್ನ
ಕಣ್ಣಲ್ಲಿ ಕಾಣದವರೂ
ನನ್ನ ಕೊಂದರು
ನನ್ನ ಕೊಂದರು, ಅಮ್ಮಾ
ಕೊಂದರು ನನ್ನ
ನಾನಿರುವ ನನ್ನ ಮನೆಯ
ಸುಲಿದು ಚಿಂದಿಗೈದರು
ಪ್ರಶ್ನೆಗಳಿಗೆ ಉತ್ತರಿಸದೆ,
ನನ್ನ ಕೊಂದರು
ನಿನ್ನ ಕೂಗಲೂ ಬಿಡದೆ, ಅಮ್ಮಾ
ಚಂಡ ವ್ಯಾಘ್ರನಂತೆ ಎರಗಿ
ಕತ್ತೊತ್ತಿ ಕಚ್ಚಿ ಕಡಿದು
ನನ್ನ ಕೊಂದರು
ಯಾಕೆ ಏನು ಕಾರಣ?
ನನ್ನ ಕೊಂದರು.
ರಾಕ್ಷಸರಂತಿರಲಿಲ್ಲ
ರಾಕ್ಷಸರಂತೆ ಕಂಡರು,
ಯಾಕೆ ಏನು ತಿಳಿಯೆ ಅಮ್ಮ,
ನನ್ನ ಕೊಂದರು
ಎಲ್ಲಿ ನಾನು, ನನ್ನ ಮೈ
ಎಲ್ಲಿ ಬಂದೆ, ಎಲ್ಲಿ ಇರುವೆ
ತಿಳಿಯದಾದೆನೆ!
ಯಾರನ್ನು ಕರೆದರೂ
ಕರೆಯಲಾರೆನೆ! ನಿನ್ನ
ಕಾಣದಾದೆನೆ!
ತಬ್ಬಲಿಯು ನಾನಾದೆ ಅಮ್ಮ,
ಋಣವು ತೀರದೇನೇ
ಹೆಣ್ಣು ಹೆಣವಾದೆನೆ!

ಕಾಣದೇ?
ಹಸಿರಲ್ಲ, ಅದು ರಕ್ತ,
ಕಾಡಲ್ಲ ಅದು ರಕ್ತ,
ಬಯಲಲ್ಲ ಅದು ರಕ್ತ,
ಕಾಣದೇ?
ಬಸ್ಸಲ್ಲ ಅದು ಮಸಣ,
ಕಾರಲ್ಲ  ಅದು ಮಸಣ,
ಮನೆಯಲ್ಲ ಅದು ಮಸಣ,
ಕಾಣದೇ?
ಪುರುಷನಲ್ಲ ಅದು ಗಂಡು,
ಗಂಡಲ್ಲ ಅದು ಮೃಗ,
ಮೃಗವಲ್ಲ ಅದು ಪಶು,
ಕಾಣದೇ?
ದೇಹವಲ್ಲ ಇದು ಗೇಹ
ಯೋನಿಯಷ್ಟೇ ಅಲ್ಲ, ಜೀವ,
ಹೆಣ್ಣಷ್ಟೇ ಅಲ್ಲ, ಆತ್ಮ
ನಾನಷ್ಟೇ ಅಲ್ಲ, ನೀನೂ
ತಿಳಿಯದೇ?

ಈ ದೇಶದಲ್ಲಿ

ಜನರು ಇರುವರು ಸರಿ,
ಮನುಜರೆಲ್ಲಿ?
ಗಂಡುಗಳಿದ್ದಾರೆ ಸರಿ,
ಪುರುಷರೆಲ್ಲಿ?

ನೋಡುವವರಿದ್ದಾರೆ ಎಂದಿ,
ಕಾಣುವರೆಲ್ಲಿ?
ಹಾಯುವವರೆ ಮಸ್ತು ಮಂದಿ,
ಕಾಯುವರೆಲ್ಲಿ?

ಕಾನೂನುಗಳು ಇವೆ ಒಪ್ಪಿದೆ, ಕಣ್ಣು ಎಲ್ಲಿ?  
ಇವೆಯಪ್ಪಾ ನ್ಯಾಯಾಲಯ, ನ್ಯಾಯವೆಲ್ಲಿ?
ಎಲ್ಲ ಇವೆ ಎನ್ನುವೀ
ಎಲ್ಲ ಎಲ್ಲಿ?

ಮನೆಮನೆಗಳು ಸತ್ತಿವೆ,
ಮೌನ ಗವ್ವೆನ್ನುತ್ತಿದೆ,
ಆವರಿಸಿದೆ ಭೀತಿ

ದೇವಿಯರ ಹೆಸರಿನಲ್ಲಿ
ಜೀವಿಯರ ಭಾವಿಯರ
ಹೋಮ ಹವನ ಆರತಿ,
ಪೂರ್ಣಾಹುತಿ

ಛೆ ಛೆ ಛೆ ಛುಛುಛು

ಎಲ್ಲ ಸೇರಿದಂತಿದೆ?
ಎಲ್ಲಿಗೋ ಹೊರಟಂತಿದೆ?
ಸುಮ್ಮನೇ ಗಮ್ಮತಿಗೆ

ಏನು ನಿಮ್ಮ ಕಾರ್ಯಕ್ರಮ?
ಕೂಟ ಊಟ ಸಂಭ್ರಮ
ಓಹೊ ಒಹೋ, ಕಾರಣ?
ಯಾಕೆ ಕಾರಣ?

ಆಮೇಲಿನ ಪ್ಲಾನು?
ಏನು ಪ್ಲಾನು ಗೀನು?
ಊಟ ತಿಂಡಿ ಗಾಯನ,
ಪಟ್ಟಾಂಗದ ಹೂರಣ

ಕೇಳಿದಿರಾ ಸುದ್ದಿ? ರತ್ನಾ...

ಹೌದು, ಪಾಪ ರತ್ನ...
ಶ್ವೇತ ಗೀತ ನೀತ ಮಿತಾ
ಛೆ ಛೆ ಛೆ, ಛು ಛು ಛು
ನಿತ್ಯಾ ಎಷ್ಟು ರತ್ನ

ಬಂತೇನ್ರೇ ಗಾಡಿ?
ಹೂಂ ಬಂತು ನೋಡಿ
ಬರ್ರೇ, ಹೊತ್ತಾಯಿತು,
ಬೇಗ ಜಲ್ದಿ ಜಲ್ದಿ

ಹೇಗಿದ್ದೀರಿ ಮೇಡಂ?

ಹೇಗಿದ್ದೀರಿ ಮೇಡಂ?
-ಸವಿತ ಕವಿತ ಸುನೀತಾ

ಹೇಗಿದ್ದೀರಿ ಮೇಡಂ?
-ಸವಿತ ಪ್ರತಿಭ ಪ್ರತೀಮಾ

ಹೇಗಿದ್ದೀರಿ ಮೇಡಂ?
-ಸವಿತ ಕವಿತ ಸುನೀತಾ
ಪ್ರತಿಭ ಪ್ರತಿಮ ಸೌಜನ್ಯಾ

ಹೇಗಿದ್ದೀರಿ ಮೇಡಂ?
-ಬಸ್ಸು ಕಾರು ಗದ್ದೆ ಬಯಲು
ಬೆಟ್ಟ ಗುಡ್ಡ ಬಚ್ಚಲೂ
ನಿಂತ ನೆಲ ನಡೆವ ಕಾಡು
ಹಾಡು ಹಗಲು ಕತ್ತಲೂ
ಮನೆ, ಮನೆಯ ಮೂಲೆ ಮೂಲೆ
ಅಪ್ಪ ಅಣ್ಣ ಆತ ಈತ
ಮುದುಕ ಯುವಕ ಹುಡುಗ ತುಡುಗ
ಬಡವ ಗಢವ ಧನಿ ಮುನಿ

ಹೇಗಿದ್ದೀರಿ ಮೇಡಂ?
-ನಿರ್ಭಯಾ ನಿರ್ಭಯಾ

ಹೇಗಿದ್ದೀರಿ ಮೇಡಂ?
-ರತ್ನಾ ಮತ್ತು ರತ್ನಾ

ಹೇಗಿದ್ದೀರಿ ಮೇಡಂ?
ಏನಾಗಿದೆ ಮೇಡಂ?
ನೀರು ತರ್ಲಾ ಮೇಡಂ?
ಡಾಕ್ಟ್ರನ್ ಕರೀಲಾ ಮೇಡಂ?

ಮತ್ತೊಮ್ಮೆ ಹುಟ್ಟಿ ಬಾ

ಒಬ್ಬಳೇ ಎಲ್ಲಿಗೆ ಹೊರಟಿರುವೆ ಮಗಳೇ
ಅಲ್ಲೆಲ್ಲ ಭಾರೀ ಜನಸಂದಣಿ
ಮರೆಯಲ್ಲಿ ಎಲ್ಲಿವೆಯೋ ಕ್ರೂರಪ್ರಾಣಿ
ಒಬ್ಬಳೇ ಹೊರಟಿರುವೆ, ಯಾಕೆ, ಜೋಕೆ
ಪ್ರಾಣ ಪದಕ ನನ್ನ ಕರುಳ ಮೋಕೆ
**
ಹೋಗದಿರು ಒಬ್ಬಳೇ ಆ ನಿರ್ಜನ ರಸ್ತೆಯಲ್ಲಿ!
ಯಾರಿರುವರು ನಾನೆಂಬುವರು ನಿನಗೆ ಅಲ್ಲಿ
ಸದ್ದಿಲ್ಲದೆ ಹದ್ದು ಗಿಡುಗ ಕ್ಷಣಮಾತ್ರದಿ ಎರಗುವವು
ಕತ್ತೆ ಕಿರುಬ ವೇಷ ಮರೆಸಿ ಅಂಡಲೆಯುತಿಹವು
ಗೋವಿನಂಥ ಮುಖಗಳು ಗೂಂಡಾಡುತಿಹವು 
ಕರೆಯುವುದು ಸಾವು ತಿರುವು ಕಾಲುಹಾದಿ ಓಣಿ 
ಒಬ್ಬಳೇ ಹೋಗದಿರು ಮಗಳೆ ಕಣ್ಮಣೀ  
**
ಬೇಡ ಮಗೂ ನದೀ ತೀರ, ಬೇಡ ನಿನಗೆ ಕಡಲ ತೀರ,
ಬೇಡ, ಸುಖಾ ಸುಮ್ಮನೇ ಸುದ್ದಿಯಾಗ ಬೇಡ
ಮನೆಯಲ್ಲಿಯೂ ಒಬ್ಬಳೇ, ಉಹ್ಞು, ಬೇಡ ಬೇಡ
ಜಪ್ಪಯ್ಯ ಎಂದರೂ ಅಗಳಿ ತೆರೆಯ ಬೇಡ
**
ಬೆಟ್ಟ ನೆತ್ತಿಗೆ ಹೋಗ ಬೇಡ,
ಕಟ್ಟ ಕಡೆಯಲಿ ನಿಲ್ಲ ಬೇಡ
ದುಷ್ಟವ್ಯಾಧನು ಹೊಂಚುತಿರುವನು 
ನಟ್ಟ ನಡುವಿರು ಕಂದಳೇ
ಎಲ್ಲೆ ಇದ್ದರೂ ಮನೆಯ ಸೇರು
ಹಗಲು ಮುಗಿಯುವ ಮುಂದೆಯೇ
ಆಷಾಢಿ ಭೂತವಿವೆ ರಾತ್ರಿ ತಿರುಗ ಬೇಡ
ಅಲೆಯದಿರು ಒಬ್ಬಳೇ, ಬೆಳದಿಂಗಳು ಕೂಡ
**
ಆ ರಸ್ತೆಯೇ ಬೇಡ ಮಗೂ ಈ ರಸ್ತೆಯಾಗಿ ಬಾ
ಈ ರಸ್ತೆಯಲಿ ಮೆಲ್ಲ ಇಣುಕಿ ನೋಡಿ ತಿಳಿದು ಬಾ
ಓಣಿ ಬೇಡ, ದೋಣಿ ಬೇಡ, ಕಾರು ಬೇಡ, ಬಸ್ಸು ಬೇಡ
ರೈಲಿನಲ್ಲಂತೂ ಬೇಡವೇ ಬೇಡ ಬೇಡ
ವಾಯುಮಾರ್ಗವಾದರೂ ಹೇಗೆ ನಂಬುತೀ?  
ಆಟೋ ಕೂಡ ಭಯವೆ ಮಗಳೆ, ಹೇಗೆ ತಲುಪುತೀ?
**
ದೇಹದಾಹಿಗಳ ಮಧ್ಯೆ ಹೇಗೆ ಬದುಕುತೀ?
ಮರ್ಯಾದೆಯೆ ಹೋದ ಮೇಲೆ ಹೇಗೆ ಉಳಿಯುತೀ?
ಹುಟ್ಟ ಬೇಡ ಹುಟ್ಟು ಬೇಡ ಇನ್ನು ಸಾಕು ಹೆಣ್ಣೇ
ಸಾಕು ಜನ್ಮ ಕರ್ಮ ಸಾಕು ಭೂಲೋಕದ ಮಣ್ಣೇ
ಭಕುತಿ ಮಾರ್ಗವೊಂದೆ ನಿನಗೆ ಮುಕುತಿ ಮಾರ್ಗ
ಇದ್ದಲ್ಲೇ ಇರು ಜಪಿಸು ಇನ್ನು ದೇವರ ನಾಮ
ಸದ್ಯಸ್ಥಿತಿಗಿದುವೆ ಎಲ್ಲ ಪೂರ್ಣವಿರಾಮ  
**      
ಎನ್ನುವವರು ಎನ್ನುತಿರಲಿ, ಮಗಳೆ ಇಳಿದು ಬಾ
ಮತ್ತೆ ಹೊಡ ಮರಳಿ ಅರಳಿ
ಒದ್ದು ಬಾ ಎದ್ದು ಬಾ
ನೆನಪಿರಲಿ ಬಾಲಿಕೆ ನೀ
ನೆಲದ ಮೂಲ ಮೃತ್ತಿಕೆ
ಹುಟ್ಟಡಗಿಸ ಹೊರಟವರಿಗೆ
ಮದ್ದು ಬಾ - ತಿದ್ದೆ ಬಾ
ದೇಹದಾಹಿಗಳಿಗೆ ತಿಳಿವು
ಬುದ್ಧಿಯಾಗಿ ಬಾ
ಹೆಣ್ಣು ನೀನು, ಜಗದ ಕಣ್ಣು.
ಸಾವು ನೋವು ಸವಾಲುಗಳ
ಗೆದ್ದು ಬಾ ಪುಟಿದು ಪುಟಿದು
ಬಾರೆ ಮಗಳೆ ಬಾರೆ ಕದಿರೆ
ಕುದ್ದು ಹುಟ್ಟಿ ಬಾ
ಶುದ್ಧಗೊಳಿಸೆ ಬಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT