ದೀಪಾವಳಿ ಧಮಾಕಾ ಮತ್ತು ‘ಬಿಗ್ ಬಿಲಿಯನ್ ಡೇ’ ಮಾರಾಟ ಜಾಹೀರಾತು ಮೂಲಕ ಫ್ಲಿಪ್ಕಾರ್ಟ್, ಅಮೆಜಾನ್ ಮತ್ತಿತರ ಆನ್ಲೈನ್ ಮಾರಾಟ ಸಂಸ್ಥೆಗಳು ಕೆಲವೇ ಕೆಲ ಗಂಟೆಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸಿರುವುದು ಸಣ್ಣ ಪುಟ್ಟ ವಹಿವಾಟುದಾರರೂ ಸೇರಿದಂತೆ ರಿಟೇಲ್ ವಹಿವಾಟಿನ ದೊಡ್ಡ ಸಂಸ್ಥೆಗಳಲ್ಲೂ ತಲ್ಲಣ ಮೂಡಿಸಿ, ಅವರೆಲ್ಲ ತಮ್ಮ ರಕ್ಷಣೆಗೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.
ಇ– ವಾಣಿಜ್ಯ ವಹಿವಾಟಿನ ದೈತ್ಯ ಸಂಸ್ಥೆಗಳಾದ ಫ್ಲಿಪ್ಕಾರ್ಟ್, ಸ್ನ್ಯಾಪ್ಡೀಲ್, ಅಮೆಜಾನ್ಗಳ ವಹಿವಾಟು ಕಂಡು ಸರಕುಗಳ ಚಿಲ್ಲರೆ ವಹಿವಾಟಿನ ಬೃಹತ್ ಉದ್ದಿಮೆ ಸಂಸ್ಥೆಗಳು ಹಠಾತ್ತಾಗಿ ಎಚ್ಚರಗೊಂಡಿವೆ. ತಮ್ಮೆಲ್ಲ ವಹಿವಾಟು ಎಲ್ಲಿ ಕೈಬಿಟ್ಟು ಹೋಗುವುದೋ ಎನ್ನುವ ಆತಂಕದಲ್ಲಿ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಧಾವಿಸಿ, ಇ–ಕಾಮರ್ಸ್ನ ಎಂಟೆದೆಯ ಹೊಸ ವಹಿವಾಟುದಾರರ ರೆಕ್ಕೆಗಳನ್ನು ಕತ್ತರಿಸಬೇಕೆಂದು ಮೊರೆ ಹೋಗಿದ್ದಾರೆ. ಅಹವಾಲುಗಳನ್ನು ಪರಿಶೀಲಿಸುವುದಾಗಿ ಸಚಿವೆ ಭರವಸೆ ನೀಡಿರುವುದು ಕಂಡು ಮರುಕ ಉಂಟಾಗುತ್ತದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಬೇರು ಬಿಟ್ಟಿರುವ, ವಹಿವಾಟಿನಲ್ಲಿ ಏಕಸ್ವಾಮ್ಯ ಸ್ಥಾಪಿಸಿರುವ ಅನೇಕರು ಇ–ಕಾಮರ್ಸ್ನ ಹೊಸ ಸಂಸ್ಥೆಗಳ ಭರಾಟೆ ವಹಿವಾಟಿನಿಂದ ಧೃತಿಗೆಟ್ಟಿದ್ದಾರೆ. ಬದಲಾದ ಕಾಲಕ್ಕೆ ತಕ್ಕಂತೆ ಮಾರಾಟ ತಂತ್ರ ಬದಲಿಸದಿರುವುದೇ ಇದಕ್ಕೆ ಕಾರಣ. ವಹಿವಾಟಿನಲ್ಲಿ ಹೊಸಬರ ಪ್ರವೇಶವು ಸಾಂಪ್ರದಾಯಿಕ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿರುವ ಲಕ್ಷಾಂತರ ಜನರ ಜೀವನಾಧಾರಕ್ಕೆ ಎರವಾಗಲಿದೆ ಎಂದು ಅವರೆಲ್ಲ ಹುಯಿಲೆಬ್ಬಿಸಿದ್ದಾರೆ.
ತಮ್ಮ ವಾದಕ್ಕೆ ಸಮರ್ಥನೆಯಾಗಿ ಅವರೆಲ್ಲ ಹುರುಳಿಲ್ಲದ ಕಾರಣಗಳನ್ನು ನೀಡುವುದರ ಜತೆಗೆ ರಾಜಕೀಯವಾಗಿಯೂ ಪ್ರಭಾವ ಬೀರುತ್ತಿದ್ದಾರೆ. ಬಿಜೆಪಿಯ ವೋಟ್ ಬ್ಯಾಂಕ್ ಎಂದೇ ಪರಿಗಣಿಸಲಾಗಿರುವ ಲಕ್ಷಾಂತರ ಸಣ್ಣ ವ್ಯಾಪಾರಿಗಳು, ತಮ್ಮ ಜೀವನಾಧಾರಕ್ಕೆ ಇದು ಮುಳುವಾಗಲಿದೆ ಎಂದೂ ಹಲುಬುತ್ತಿದ್ದಾರೆ.
ಕೆಲ ಪಟ್ಟಭದ್ರರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇದೇ ಬಗೆಯಲ್ಲಿ ಸರ್ಕಾರದ ಮೇಲೆ ಪ್ರಭಾವ ಬೀರಲು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಪ್ರಯತ್ನಿಸಿದ ಹತ್ತಾರು ನಿದರ್ಶನಗಳಿವೆ.
ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಡೆಕ್ಕನ್, ಕೈಗೆಟುಕುವ ಪ್ರಯಾಣ ದರದಲ್ಲಿ ವಿಮಾನ ಯಾನ ಸೌಲಭ್ಯ, ಟ್ರಾವೆಲ್ ಏಜೆಂಟರ ಹಾವಳಿಗೆ ಕಡಿವಾಣ, ಇಂಟರ್ನೆಟ್ನಲ್ಲಿ ಟಿಕೆಟ್ ಮಾರಾಟ ಸೇವೆ ಆರಂಭಿಸಿದಾಗ, ಇತರ ವಿಮಾನ ಯಾನ ಸಂಸ್ಥೆಗಳು ಸಾಕಷ್ಟು ಬಗೆಯಲ್ಲಿ ಅಡ್ಡಿಪಡಿಸಲು ಮುಂದಾಗಿದ್ದವು. ತಮ್ಮ ಹಿತಾಸಕ್ತಿ ರಕ್ಷಣೆಗಾಗಿ ಸರ್ಕಾರದ ಮೊರೆ ಹೋಗಿದ್ದವು. ಭಾರತದಲ್ಲಷ್ಟೇ ಅಲ್ಲ, ಅಮೆರಿಕ, ಯುರೋಪ್ ದೇಶಗಳಲ್ಲೂ ಜನಸಾಮಾನ್ಯರಿಗೆ ಕಡಿಮೆ ದರದ ವಿಮಾನ ಯಾನ ಸೇವೆ ಆರಂಭಿಸಿದಾಗಲೂ ಇದೇ ಬಗೆಯ ಪ್ರತಿರೋಧ ಕಂಡು ಬಂದಿತ್ತು.
ತಮ್ಮ ವಹಿವಾಟಿನಲ್ಲಿನ ದೋಷಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ, ವಹಿವಾಟಿನ ಮಾದರಿಯಲ್ಲಿ ಬದಲಾವಣೆ ಅಳವಡಿಸಿಕೊಳ್ಳುವ, ಹೊಸ ತಂತ್ರಜ್ಞಾನ ಬಳಸಿಕೊಳ್ಳುವ ಬದಲಿಗೆ ಸಾಂಪ್ರದಾಯಿಕ ವಹಿವಾಟುದಾರರು ಮತ್ತು ರಿಟೇಲ್ ಕಾರ್ಪೊರೇಟ್ ದಿಗ್ಗಜರು ತಮ್ಮ ವಹಿವಾಟಿನ ರಕ್ಷಣೆಗಾಗಿ ಸರ್ಕಾರದ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಲೇ ಬಂದಿದ್ದಾರೆ.
ಇತಿಹಾಸದ ಉದ್ದಕ್ಕೂ ಕೆಲವು ವರ್ಷಗಳ ಅಂತರದಲ್ಲಿ ಹೊಸ ತಂತ್ರಜ್ಞಾನ, ಹೊಸ ವಹಿವಾಟಿನ ಮಾದರಿ, ಸ್ಫೋಟಕ ಸ್ವರೂಪದ ಹೊಸ ಚಿಂತನೆ, ಎದುರಿಗೆ ಬಂದದ್ದನ್ನೆಲ್ಲ ಆಪೋಶನ ತೆಗೆದುಕೊಳ್ಳುವ ಬದಲಾವಣೆಯ ಸುನಾಮಿ ಅಲೆಗಳು ಹಳೆಯ ವಹಿವಾಟನ್ನು ಗುಡಿಸಿ ಗುಡ್ಡೆ ಹಾಕಿ ಬಿಟ್ಟಿವೆ. ಜನರ ಬದುಕು ಕೂಡ ಬದಲಾವಣೆಯ ಪ್ರಭಾವಕ್ಕೆ ಒಳಗಾಗಿದೆ.
‘ಭವಿಷ್ಯದಲ್ಲಿ ಎದುರಾಗಲಿರುವ ಪರಿವರ್ತನೆಯ ಲಕ್ಷಣಗಳನ್ನು ಮುಂಚಿತವಾಗಿಯೇ ಅಂದಾಜಿಸುವವರು ಮತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳುವವರು ಮಾತ್ರ ವಹಿವಾಟಿನ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ’ ಎಂದು ಇಂಟೆಲ್ ಸಂಸ್ಥೆಯ ಸ್ಥಾಪಕ ಆ್ಯಂಡಿ ಗ್ರೋವ್ ಅಭಿಪ್ರಾಯಪಟ್ಟಿದ್ದರು.
ಹೈಸ್ಕೂಲ್ ಹಂತದಲ್ಲಿಯೇ ವಿದ್ಯಾಭ್ಯಾಸಕ್ಕೆ ಬೆನ್ನು ಮಾಡಿದ್ದ ಡೆಲ್ ಕಂಪ್ಯೂಟರ್ಸ್ ಸಂಸ್ಥೆಯ ಸ್ಥಾಪಕ ಮೈಕಲ್ ಡೆಲ್, ಗ್ರೋವ್ ಅವರ ಚಿಂತನಾಕ್ರಮದಂತೆಯೇ ಹೊಸ ಮಾದರಿಯ ವಹಿ-ವಾಟಿನ ಸ್ವರೂಪ ಅಳವಡಿಸಿಕೊಂಡು ಕಾಂಪ್ಯಾಕ್, ಡಿಜಿಟಲ್ ಮತ್ತು ಎಚ್ಪಿ ಸಂಸ್ಥೆಗಳನ್ನು ಹಿಂದಿಕ್ಕಿ ತಮ್ಮ ವಹಿವಾಟನ್ನು ವಿಸ್ತರಿಸುವಲ್ಲಿ ಯಶಸ್ವಿಯಾದರು.
ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಆರಂಭದಲ್ಲಿ ರಸ್ತೆ ಮತ್ತು ರೈಲು ಸಂಚಾರ ಸೇವೆಯು ಕುದುರೆಗಾಡಿಗಳನ್ನು ನಿರುಪಯುಕ್ತಗೊಳಿಸಿದರೆ, ವಾಹನಗಳ ಉದ್ದಿಮೆಯು, ಕಡಿಮೆ ದೂರದ ರೈಲು ಸಂಚಾರ ಸೇವೆಯನ್ನು ಅನುಪಯುಕ್ತಗೊಳಿಸಿತು. ಅಗ್ಗದ ವಿಮಾನ ಯಾನ ಸೇವೆಯು ಅಮೆರಿಕದಲ್ಲಿ ಬಸ್ಗಳ ಸಂಚಾರವನ್ನೇ ರದ್ದುಪಡಿಸಲು ಕಾರಣವಾಯಿತು. ಡಿಜಿಟಲ್ ಕ್ಯಾಮೆರಾಗಳು, ಕ್ಯಾಮೆರಾಕ್ಕೆ ಅನ್ವರ್ಥನಾಮವಾಗಿದ್ದ ಕೋಡಕ್ ಸಂಸ್ಥೆಯ ಅವನತಿಗೆ ಕಾರಣವಾದವು. ಕ್ಯಾನನ್, ಜೆರಾಕ್ಸ್ ಸಂಸ್ಥೆಯ ವಹಿವಾಟಿಗೆ ಧಕ್ಕೆ ಒದಗಿಸಿತು. ಆ್ಯಪಲ್ ಮತ್ತು ಸ್ಟೀವ್ ಜಾಬ್ಸ್, ಬಹುತೇಕ ಜನರ ಅಚ್ಚುಮೆಚ್ಚಿನ ಸೋನಿ ಸಂಸ್ಥೆಯ ವಹಿವಾಟಿಗೆ ಅಡ್ಡಿಪಡಿಸುವುದರ ಜತೆಗೆ ಅದರ ವಾಕ್ಮನ್ಗಳು ಮಾರುಕಟ್ಟೆಯಿಂದ ಕಣ್ಮರೆಯಾಗಲು ಮತ್ತು ವಿಶ್ವದ ಅತಿ ದೊಡ್ಡ ಮೊಬೈಲ್ ಮಾರಾಟ ಸಂಸ್ಥೆ ನೋಕಿಯಾದ ಅವನತಿಗೆ ಕಾರಣರಾಗುತ್ತಾರೆ. ಅಂತರ್ಜಾಲದ ದೈತ್ಯ ಸಂಸ್ಥೆ ಗೂಗಲ್, ಮೈಕ್ರೊಸಾಫ್ಟ್ನ ಅಭೇದ್ಯ ಕೋಟೆಯಲ್ಲಿ ಬಿರುಕು ಮೂಡಿಸಲಿದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ.
ಮುದ್ರಣ ಯಂತ್ರ, ಉಗಿ ಬಂಡಿ, ರೇಡಿಯೊ, ಸ್ಥಿರ ದೂರವಾಣಿ, ವಿದ್ಯುತ್ ದೀಪ, ವಿಮಾನ ಮುಂತಾದವುಗಳ ಸಂಶೋಧನೆಗಳು ಜಗತ್ತಿನ ಇತಿಹಾಸ ಮತ್ತು ನಮ್ಮ ಬದುಕಿನ ವಿಧಾನವನ್ನೇ ಬದಲಿಸಿವೆ.
ಈ ಎಲ್ಲ ಸಂಶೋಧನೆಗಳು ದಶಕಗಳ ಅಂತರದಲ್ಲಿ ಅಥವಾ ಶತಮಾನಕ್ಕೊಮ್ಮೆ ನಡೆದಿರುವುದೂ ನಿಜ. ಉದ್ದಿಮೆ ವಹಿವಾಟಿನಲ್ಲಿಯೂ ಹೊಸ ಸ್ವರೂಪ, ತಂತ್ರಜ್ಞಾನ ಅಳವಡಿಕೆ ಮೂಲಕ ಸಾಮಾನ್ಯ ಗ್ರಾಹಕರ ಜತೆ ಮುಖಾಮುಖಿಯಾಗುವ ಮೂಲಕ, ಗ್ರಾಹಕರ ನಿಗೂಢ ಮನಸ್ಸನ್ನು ಉದ್ಯಮಶೀಲತಾ ಒಳನೋಟದ ಮೂಲಕ ಅರಿಯುವ ಪ್ರಯತ್ನ ಮಾಡಿ, ಸಂಪೂರ್ಣ ಹೊಸ ರೂಪದಲ್ಲಿ ವಹಿವಾಟು ನಡೆಸುವುದು ಸದ್ಯದ ಮಾರುಕಟ್ಟೆ ತಂತ್ರವಾಗಿದೆ.
ಸ್ಯಾಮ್ ವಾಲ್ಟನ್ ಅವರು ಐವತ್ತು ವರ್ಷಗಳ ಹಿಂದೆಯೇ ಸಣ್ಣ ಅಂಗಡಿಯೊಂದರ ಮೂಲಕ ವಹಿವಾಟು ಆರಂಭಿಸಿ ವಿಶ್ವದ ಅತಿ ದೊಡ್ಡ ರಿಟೇಲ್ ಸರಣಿ ಮಳಿಗೆಗಳ ವಹಿವಾಟಿನವರೆಗೆ ವಿಸ್ತರಿಸಲು ವಿಶಿಷ್ಟ ಬಗೆಯ ಮಾರಾಟ ತಂತ್ರಗಾರಿಕೆ ನೆರವಾಗಿದೆ. ‘ಅತ್ಯಂತ ಕಡಿಮೆ ಬೆಲೆಯೇ ಪ್ರತಿ ದಿನದ ರಿಟೇಲ್ ವಹಿವಾಟಿನ ಮಾದರಿ’ ಎನ್ನುವ ಮಾರಾಟ ತತ್ವದಡಿ, ವಾಲ್ಟನ್ ತಮ್ಮ ವಹಿವಾಟನ್ನು ವಿಸ್ತರಿಸುವಲ್ಲಿ ಸಫಲರಾದರು. ವಾಲ್ಮಾರ್ಟ್ ಈಗ ವಿಶ್ವದಲ್ಲಿಯೇ ಅತಿ ಹೆಚ್ಚು ವರಮಾನ ಗಳಿಸುವ ಉದ್ದಿಮೆ ಸಂಸ್ಥೆಯಾಗಿ ಬೆಳೆದಿದೆ.
‘ಯಾವುದೇ ಒಂದು ಸರಕು ಖರೀದಿಸುವಲ್ಲಿ ಅಕಸ್ಮಾತಾಗಿ ಒಂದು ಡಾಲರ್ ಹೆಚ್ಚಿಗೆ ಕೊಟ್ಟಿದ್ದರೆ ವಾಸ್ತವದಲ್ಲಿ ಅದರಿಂದ ಯಾರೊ ಒಬ್ಬರ ಅದಕ್ಷತೆಯನ್ನೇ ನಾನು ಖರೀದಿಸಿದಂತೆ’ ಎಂದು ಸ್ಯಾಮ್ ವಾಲ್ಟನ್ ಅಭಿಪ್ರಾಯಪಟ್ಟಿದ್ದರು. ದಕ್ಷ ರೀತಿಯಲ್ಲಿ ಸರಕುಗಳ ಖರೀದಿ, ಪೂರೈಕೆ ಸರಣಿ ವ್ಯವಸ್ಥೆಯಲ್ಲಿ ದಕ್ಷತೆ, ಮಾರಾಟದ ಸರಕುಗಳ ಮೇಲೆ ನಿಗಾ ಮತ್ತು ತಂತ್ರಜ್ಞಾನದ ನೆರವಿನ ಮೂಲಕ ವಾಲ್ಟನ್ ಅವರು ತಮ್ಮ ವಹಿವಾಟನ್ನು ಅಸಾಮಾನ್ಯ ಬಗೆಯಲ್ಲಿ ವಿಸ್ತರಿಸುವಲ್ಲಿ ಯಶಸ್ವಿಯಾದರು.
ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ಫ್ಲಿಪ್ಕಾರ್ಟ್ ಮತ್ತು ಸ್ನ್ಯಾಪ್ಡೀಲ್ಗಳ ವಹಿವಾಟಿನ ಮಾದರಿಯನ್ನು ಎಲ್ಲರೂ ಶ್ಲಾಘಿಸಬೇಕಾಗಿದೆ. ಸರ್ಕಾರವೂ ಈ ಸಂಸ್ಥೆಗಳಿಗೆ ಸೂಕ್ತ ಉತ್ತೇಜನ ನೀಡಬೇಕಾಗಿದೆ. ಹೊಸತನ, ಸೂಕ್ತ ತಂತ್ರಜ್ಞಾನದ ಅಳವಡಿಕೆ, ಗ್ರಾಹಕರ ಜತೆ ನೇರ ಮುಖಾಮುಖಿ ಮೂಲಕ ಹಲವಾರು ವೆಚ್ಚಗಳಿಗೆ ಕಡಿವಾಣ ಹಾಕಲು ಈ ಸಂಸ್ಥೆಗಳಿಗೆ ಸಾಧ್ಯವಾಗಿದೆ. ಲಕ್ಷಾಂತರ ಬಗೆಯ ವೈವಿಧ್ಯಮಯ ಉತ್ಪನ್ನಗಳನ್ನು ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ವರ್ಗಾಯಿಸುವಲ್ಲಿ ಈ ಸಂಸ್ಥೆಗಳು ಯಶಸ್ವಿಯಾಗಿವೆ.
ಚಿಲ್ಲರೆ ಅಂಗಡಿಗಳಿಗೆ ಭೇಟಿ ಕೊಡುವುದನ್ನು ತಪ್ಪಿಸಿರುವ ಈ ಇ–ಕಾಮರ್ಸ್ನ ಅಂತರ್ಜಾಲ ಮಾರಾಟ ಸಂಸ್ಥೆಗಳು ಮನೆ ಅಥವಾ ಕಚೇರಿಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್, ಕಂಪ್ಯೂಟರ್, ಲ್ಯಾಪ್ಟಾಪ್ ಮತ್ತು ಐಪಾಡ್ಗಳ ಮೂಲಕವೇ ಸರಕು ಖರೀದಿಸುವ ಅನುಕೂಲ ಒದಗಿಸಿವೆ.
ಗ್ರಾಹಕರನ್ನು ಸೆಳೆಯಲು ಮಳಿಗೆಗಳನ್ನು ಆಕರ್ಷಕವಾಗಿ ಅಲಂಕರಿಸುವ, ಅಚ್ಚುಕಟ್ಟುತನದ ನಿರ್ವಹಣೆ, ವಾತಾನುಕೂಲಿ ಸೌಲಭ್ಯ, ದೀಪಾಲಂಕಾರ, ನೀರು, ಮಾರಾಟ ಸಿಬ್ಬಂದಿಯ ವೇತನ, ಸರಕುಗಳ ಸಂಗ್ರಹಣೆಗೆ ಮಾಡುವ ವೆಚ್ಚ ಮುಂತಾದವು ಇ–ಕಾಮರ್ಸ್ನಲ್ಲಿ ಇರುವುದಿಲ್ಲ. ಇದರಿಂದಾಗಿಯೇ ಸರಕುಗಳನ್ನು ಸಾಂಪ್ರದಾಯಿಕ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಮಾರಲು ಸಾಧ್ಯವಾಗುತ್ತದೆ.
ಇ–ಕಾಮರ್ಸ್ನ ಹೊಸ ಸಂಸ್ಥೆಗಳು ಅಳವಡಿಸಿಕೊಂಡಿರುವ ಸಾಹಸ ಮನೋಭಾವ, ನಿರಂತರ ಆಶಾವಾದ ಮತ್ತು ಉದ್ಯಮಶೀಲತೆಯ ಉತ್ಸಾಹವು ನಮ್ಮ ಕನಸಿನ ಹೊಸ ಭಾರತ ರೂಪುಗೊಳ್ಳಲು ನೆರವಾಗಲಿದೆ.
ಫ್ಲಿಪ್ಕಾರ್ಟ್ ಮತ್ತು ಸ್ನ್ಯಾಪ್ಡೀಲ್ನಂತಹ ಸಂಸ್ಥೆಗಳು ಸೀಮಿತ ಪ್ರಮಾಣದ ಸಂಪನ್ಮೂಲದ ಗರಿಷ್ಠ ಸದ್ಬಳಕೆ ಮೂಲಕ ಅನಿಯಮಿತ ಕನಸುಗಳನ್ನು ಕಾಣುವ ಉದ್ಯಮಶೀಲತೆಯ ಕಲೆಯನ್ನು ಪ್ರದರ್ಶಿಸುವಲ್ಲಿ ಸಫಲವಾಗಿವೆ. ದಶಕಗಳ ಕಾಲ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ 100 ಕೋಟಿ ಡಾಲರ್ (₨ 6000 ಕೋಟಿ) ವಹಿವಾಟು ನಡೆಸಲು ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ದಶಕಗಳನ್ನೇ ತೆಗೆದುಕೊಂಡಿದ್ದರೆ, ಈ ಎರಡೂ ಸಂಸ್ಥೆಗಳು ₨ 12 ಸಾವಿರ ಕೋಟಿಗಳಷ್ಟು ವಹಿವಾಟನ್ನು ಅತ್ಯಲ್ಪ ಅವಧಿಯಲ್ಲಿ ನಡೆಸುವ ಮೂಲಕ ಅಚ್ಚರಿ ಮೂಡಿಸಿವೆ.
ಇದಕ್ಕೆಲ್ಲ ಹೊಸ ಉದ್ಯಮಿಗಳ ಪರಿಶ್ರಮ, ಆಸಕ್ತಿ, ಹೊಸ ಚಿಂತನಾ ಕ್ರಮ, ಬದ್ಧತೆ ಮತ್ತು ಉತ್ಸಾಹಗಳೇ ಕಾರಣ. ಇಂತಹವರ ಸಂತತಿ ಹೆಚ್ಚುವಂತಾಗಲಿ. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವಂತಾಗಲಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.