ನವದೆಹಲಿ,ಮುಂಬೈ(ಐಎಎನ್ಎಸ್): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿರುವ ಸಾಧನೆ ಮತ್ತು ಕೇಜ್ರಿವಾಲ್ ಜಯಗಳಿಸಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ‘ಸಂತಸ’ ವ್ಯಕ್ತಪಡಿಸಿದ್ದು, ‘ಒಂದು ದಿನ’ ಅವರು ದೆಹಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
‘ಅರವಿಂದ ಕೇಜ್ರಿವಾಲ್ ಅವರು ಪಕ್ಷವನ್ನು ಗೆಲುವಿನ ದಡಕ್ಕೆ ಕೊಂಡೊಯ್ದಿರುವುದರಿಂದ ನಾನು ಸಂತಸಗೊಂಡಿದ್ದೇನೆ’ ಎಂದು ಅಣ್ಣಾ ರಾಳೇಗಣಸಿದ್ದಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ದೆಹಲಿಯಲ್ಲಿ ಮರು ಚುನಾವಣೆಯಾದರೂ ತೊಂದರೆಯಿಲ್ಲ. ಕೇಜ್ರಿವಾಲ್ ಅವರು ಯಾವುದೇ ಪಕ್ಷದ ಬೆಂಬಲ ಪಡೆಯಬಾರದು. ಜನರು ಕಾಂಗ್ರೆಸ್ಗೆ ಪಾಠ ಕಲಿಸಿದ್ದಾರೆ ಎಂಬುದಕ್ಕೆ ದೆಹಲಿ ಚುನಾವಣೆ ಫಲಿತಾಂಶವೇ ತೋರಿಸುತ್ತದೆ. ಅಲ್ಲದೇ, ದೆಹಲಿಯಲ್ಲಿ ನಡೆಸಿದ ಆಂದೋಲನ ಆಮ್ ಆದ್ಮಿ ಪಕ್ಷದ ಗೆಲುವಿಗೆ ಸಹಾಯಕಾರಿಯಾಯಿತು’ ಎಂದು ಅಣ್ಣಾ ಹೇಳಿದ್ದಾರೆ.
‘ಕೇಜ್ರಿವಾಲ್ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಉತ್ತಮ ಕೆಲಸ ಮಾಡಬಹುದು ಮತ್ತು ಸರ್ಕಾರಕ್ಕೆ ಸರಿಯಾದ ದಿಕ್ಕು ತೋರಿಸಬಹುದು. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿರುವುದು ಸಾಮಾನ್ಯ ವಿಚಾರವಲ್ಲ’ ಎಂದು ಅಣ್ಣಾ ನುಡಿದಿದ್ದಾರೆ.