ಈಗ ನಾಡಿನುದ್ದಗಲಕ್ಕೂ ‘ರಾಷ್ಟ್ರಕವಿ’ ಪುರಸ್ಕಾರ ಸದ್ದು ಮಾಡುತ್ತಿದೆ! ಜಿ.ಎಸ್.ಶಿವರುದ್ರಪ್ಪನವರ ನಿಧನದಿಂದ ತೆರವಾದ ‘ರಾಷ್ಟ್ರಕವಿ’ ಸ್ಥಾನವನ್ನು ತುಂಬಲು ಸರ್ಕಾರ ಕ್ರಮ ಕೈಗೊಂಡು, ಅದಕ್ಕಾಗಿ ಆಯ್ಕೆ ಸಮಿತಿಯೊಂದನ್ನು ರಚಿಸಿದೆ; ಸದರಿ ಸಮಿತಿಯು ಆಯ್ಕೆಯ ಮಾನದಂಡಗಳನ್ನು ನಿಷ್ಕರ್ಷಿಸಿದೆ. ಜೊತೆಗೆ, ಈ ಬಗೆಗೆ ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿದೆ.
‘ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ಕವಿ’ ಒಬ್ಬರನ್ನು ‘ರಾಷ್ಟ್ರಕವಿ’ ಪುರಸ್ಕಾರಕ್ಕೆ ಆಯ್ಕೆ ಮಾಡುವುದು ಸರ್ಕಾರದ ಆಶಯ. (ಮುಂದೆ ಮಾನದಂಡಗಳನ್ನು ಉಲ್ಲೇಖಿಸುವಾಗ ‘ಹಿರಿಯ ಕವಿ’ಯ ಸಾಧನೆಯ ಪ್ರಕಾರಪರಿಧಿಯು ‘ಅಸಾಧಾರಣ, ಗುಣಗಾತ್ರದಲ್ಲಿ ಗಣನೀಯ, ಶಾಶ್ವತ, ಕಾವ್ಯ-, ಗದ್ಯ- ವಿವಿಧ ಪ್ರಕಾರಗಳ ಸಾಹಿತ್ಯ ಸೃಷ್ಟಿ’ಯಾಗಿ ವಿಸ್ತೃತವಾಗಿರುವುದು ಗಮನಾರ್ಹ)
ಆಯ್ಕೆ ಸಮಿತಿ ನಿಷ್ಕರ್ಷೆ ಮಾಡಿರುವ ಮಾನದಂಡಗಳು ಅವಾಸ್ತವ ಎನಿಸುವಷ್ಟು ‘ಬಿಗಿ’ಯಾಗಿವೆ; ಅವುಗಳನ್ನು ಲಕ್ಷಿಸಿದರೆ, ಅಲ್ಲಿ ವಿರೋಧಾಭಾಸ, ಅಸಾಂಗತ್ಯ, ಗೊಂದಲಗಳು ಎದ್ದು ಕಾಣುತ್ತವೆ. ಮಾನದಂಡಗಳನ್ನು ರೂಪಿಸುವಾಗ ಸ್ವತಃ ಆಯ್ಕೆ ಸಮಿತಿಯೇ ಗೊಂದಲದ ಗೂಡಾಗಿ ಕೆಲಸ ಮಾಡಿದಂತೆ ತೋರುತ್ತದೆ!
ಒಟ್ಟಾರೆ ಮಾನದಂಡಗಳನ್ನು ನೋಡಿದರೆ, ಯಾರೂ ಅವುಗಳನ್ನು ಸಂಪೂರ್ಣ ತೃಪ್ತಿಗೊಳಿಸಿ ಯಶಸ್ವಿಯಾಗುವುದು ಸಾಧ್ಯವೇ ಇಲ್ಲ; ಯಾರೇ ಆಗಲಿ, ಒಂದು ಮಾನದಂಡದಲ್ಲಿ ಉತ್ತೀರ್ಣರಾದರೆ ಮತ್ತೊಂದರಲ್ಲಿ ಅನುತ್ತೀರ್ಣರಾಗುವ ವಿಪರ್ಯಾಸಕ್ಕೆ ಆಸ್ಪದವಿದೆ. ಇನ್ನು ಪುರಸ್ಕಾರಕ್ಕೆ ಅರ್ಹತೆಯಾದರೂ ಯಾರಿಗೆ?
ಆಯ್ಕೆ ಸಮಿತಿಯ ಮಾನದಂಡಗಳಾದರೂ ಯಾವುವು? ‘ಕನ್ನಡ ಹಿತರಕ್ಷಣೆಗೆ, ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದವರು, ಸಂಸ್ಕೃತಿ ಉನ್ನತಿಗಾಗಿ ದುಡಿದವರು’ ಎಂಬ ಅರ್ಹತೆಗಳಲ್ಲಿ ವಿಶೇಷವೇನಿಲ್ಲ. ಇನ್ನು, ವಿಶಿಷ್ಟ ಅರ್ಹತೆಗಳಲ್ಲಿ ‘ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ, ಸ್ಪಂದಿಸಿ ಸಾಹಿತ್ಯ ರಚಿಸಿದವರು, ಮೇರು ಸದೃಶ ವ್ಯಕ್ತಿತ್ವದವರು, ವಿಶ್ವಮಾನವ ದೃಷ್ಟಿಯಲ್ಲಿ ನಂಬಿಕೆ ಇರುವಂಥ ದಿವ್ಯಜೀವಿಗಳಾಗಿರಬೇಕು ಎಂಬಂತಹ ಸಂಗತಿಗಳನ್ನು ಮಾನದಂಡಗಳು ಒಳಗೊಂಡಿವೆ. ಇವೆಲ್ಲ ಶುದ್ಧ ಆದರ್ಶಗಳು ಮಾತ್ರ ಎಂಬುದು ಮೇಲ್ನೋಟಕ್ಕೇ ವಿಧಿತ!
ಆಯ್ಕೆ ಮಾನದಂಡ * ಗುಣ ಮತ್ತು ಗಾತ್ರದಲ್ಲಿ ಗಣನೀಯವಾದ, ಶಾಶ್ವತ ಮತ್ತು ಅಸಾಧಾರಣ ಎನಿಸುವ ಕಾವ್ಯ–ಗದ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿರಬೇಕು. * ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸಿ ಸಾಹಿತ್ಯ ರಚಿಸಿದವರು, ರಾಜ್ಯದ ಏಕೀಕರಣಕ್ಕೆ, ಕನ್ನಡದ ಹಿತರಕ್ಷಣೆಗೆ, ನಾಡಿನ ಅಭಿವೃದ್ಧಿಗೆ ಶ್ರಮಿಸಿದವರು, ಸಂಸ್ಕೃತಿಯ ಉನ್ನತಿಗೆ ದುಡಿದವರು, ಗಡಿನಾಡು–ಹೊರನಾಡಿನ ಕನ್ನಡಿಗರಿಗೆ ಸಹಾಯ ಮಾಡಿದವರಾಗಿರಬೇಕು. * ಮೇರುಸದೃಶ ವ್ಯಕ್ತಿತ್ವ, ಆದರ್ಶ ಜೀವನ ಸಾಗಿಸುತ್ತಿರಬೇಕು. ಇಡೀ ಜನಾಂಗ ಅವರ ಮಾತು ಕೇಳುವಂತಿರಬೇಕು. ಅವರು ನಾಡಿನ ಗುರುವಿನಂತೆ ಇರಬೇಕು. * ‘ಮನುಜ ಕುಲ ತಾನೊಂದೆ ವಲಂ’ ಎಂದು ಹೇಳಿದ ಪಂಪನ ಜಾತ್ಯತೀತ ವಿಶ್ವಮಾನವ ದೃಷ್ಟಿ ಇರಬೇಕು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಮಾತಿನಲ್ಲಿ ನಂಬಿಕೆ ಇರುವ ದಿವ್ಯ ಜೀವಿ ಆಗಿರಬೇಕು. * ರಾಷ್ಟ್ರಕವಿ ಗೌರವ ಪಡೆಯುವವರು ಎಂದಿಗೂ ಯಾವುದೇ ಆಪಾದನೆಗೆ ಗುರಿಯಾಗಿರಬಾರದು. |
‘ಮೇರು’ ಸದೃಶ ವ್ಯಕ್ತಿತ್ವದವರು ಎಂಬ ಉಲ್ಲೇಖವನ್ನು ತೆಗೆದುಕೊಂಡರೆ, ‘ರಾಷ್ಟ್ರಕವಿ ಪುರಸ್ಕಾರ’ ಪಡೆದ ಮೊದಲ ಇಬ್ಬರು ಮಹನೀಯರಾದ ಗೋವಿಂದ ಪೈ ಮತ್ತು ಕುವೆಂಪು ‘ಮೇರುಸದೃಶ ವ್ಯಕ್ತಿತ್ವ’ ಉಳ್ಳವರಾಗಿದ್ದರು (ಮೂರನೆಯವರಾದ ಜಿ.ಎಸ್.ಎಸ್ ಉತ್ತಮ ಕವಿಯಾದರೂ ಆ ಎತ್ತರದವರಲ್ಲ); ಅವರ ಬದುಕು ಬರಹ ಎರಡೂ ಉತ್ತುಂಗವಾಗಿದ್ದವು; ಟ್ಯಾಗೋರ್, ಇಕ್ಬಾಲ್ ಮುಂತಾದವರಿಗೆ ಅವರು ಹೆಗಲೆಣೆಯಾಗಿದ್ದರು. ಇಂದು ಅಂಥವರು ಕರ್ನಾಟಕದಲ್ಲಿ ಯಾರಿದ್ದಾರೆ, ಎಲ್ಲಿದ್ದಾರೆ? ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ತ್ಯಾಗಿಗಳು (ಲೇಖಕರಲ್ಲಿ) ಯಾರುಂಟು? ‘ತ್ಯಾಗ’ವೆಂದರೆ ಏನೆಂದು ಕೇಳಬೇಕಾದ ದಿನಗಳಿವು!
ಇನ್ನು, ಇತರ ಮಾನದಂಡಗಳನ್ನು ಪರಿಗಣಿಸಿದರೆ, ಅದರಲ್ಲೂ ‘ದಿವ್ಯಜೀವಿಗಳಾಗಿರಬೇಕು’ ಇತ್ಯಾದಿ. ಹಿಮಾಲಯದ ಬಗೆಗಿನ ಕಾಳಿದಾಸನ ‘ಪೃಥಿವ್ಯಾ ಇವ ಮಾನದಂಡಃ’ ಎಂಬ ಉಕ್ತಿ ನೆನಪಾಗುತ್ತದೆ; ಅಂತೆಯೇ ರಾಮಾಯಣದ ಆದಿಯಲ್ಲಿ ಬರುವ ರಾಮನ ಗುಣಗಳ ಪಟ್ಟಿ ಕೂಡ!
ಈಗ ಅಂತಹ ಉದಾತ್ತ ಚೇತನಗಳನ್ನು ಎಲ್ಲಿ ತರೋಣ? ಭವಿಷ್ಯದಲ್ಲಾದರೂ ಅಂತಹವರನ್ನು ನಿರೀಕ್ಷಿಸಬಹುದೆ? ‘ಇಡೀ ಜನಾಂಗ ಅವರ ಮಾತನ್ನು ಕೇಳಬೇಕು’ ಎಂಬುದಂತೂ ನಗು ಬರಿಸುತ್ತದೆ: ಈಗ ಯಾರ ಮಾತನ್ನು ಯಾರು ಕೇಳುತ್ತಾರೆ?
ಸರ್ಕಾರ ಪುರಸ್ಕಾರ ಸಂಬಂಧವಾಗಿ ಸಾರ್ವಜನಿಕರ ಅಭಿಪ್ರಾಯಗಳನ್ನು ಕರೆದಿದೆ (ಈ ಜನಮತ ಸಂಗ್ರಹ ನೆಪಮಾತ್ರಕ್ಕೆ ಎನಿಸುತ್ತದೆ). ಪರಿಣಾಮವಾಗಿ, ಲಕ್ಷಾಂತರ ಪತ್ರಗಳು ಅಭಿಮತಗಳನ್ನು ಹೊತ್ತು ಸರ್ಕಾರವನ್ನು ತಲುಪುತ್ತವೆ. ಅವುಗಳ ರಾಶಿಯಿಂದ ದೊಡ್ಡ ತಲೆನೋವಿನ ಹೊರತು ಅನ್ಯ ಪ್ರಯೋಜನವಿಲ್ಲ!
ಇನ್ನು ಪುರಸ್ಕಾರಕ್ಕಾಗಿ ಸಹಜವಾಗಿಯೇ ಪರಮ ‘ಲಾಬಿ’, ‘ಸಾಹಿತ್ಯಕ ರಾಜಕೀಯ’ ನಡೆಯುವುದನ್ನು ಅಲ್ಲಗಳೆಯುವಂತಿಲ್ಲ. ಜಾತಿ, ಮತ, ಪ್ರಾಂತ, ಪ್ರದೇಶ ಮೊದಲಾದ ಪರಿಗಣನೆಗಳು ಖಂಡಿತಾ ಮುಂದೆ ಬಂದು ಕಾಡು-ತ್ತವೆ! ಒಟ್ಟಿನಮೇಲೆ ‘ರಾಷ್ಟ್ರಕವಿ’ಯ ಆಯ್ಕೆ ಸುಗಮವಾಗಿ ನಡೆಯದೆ ಕಗ್ಗಂಟಾಗುತ್ತದೆ; ಕನಸಿನ ಗಂಟಾಗಲೂಬಹುದು! (ಆದರೆ ಮಾನದಂಡಗಳನ್ನು ಸಡಿಲಿಸುವುದೂ ಅಪೇಕ್ಷಣೀಯವಲ್ಲ) ಇದೆಲ್ಲ ವಿಷಯದ ಒಂದು ಮುಖ. ಇನ್ನೊಂದು ಮುಖ್ಯವಾದ ಮನನಯೋಗ್ಯ ಮುಖವಿದೆ. ಮೂಲಭೂತವಾಗಿ ‘ರಾಷ್ಟ್ರಕವಿ’ ಅಭಿದಾನದಲ್ಲಿರುವ ‘ರಾಷ್ಟ್ರ’ ಶಬ್ದಕ್ಕೆ ರಾಜ್ಯದಲ್ಲಿ ಈ ಹೊತ್ತು ಅರ್ಥವಿದೆಯೆ?
(ಮಹಾ‘ರಾಷ್ಟ್ರ’ವೊಂದು ಅಪವಾದ!) ಜ್ಞಾನಪೀಠ ಪ್ರಶಸ್ತಿಯಲ್ಲಿ ಈ ಆಭಾಸವಿಲ್ಲ. ಬೇಕಾದರೆ ‘ರಾಜ್ಯಕವಿ’ ಎನ್ನಬಹುದು. ಆದರೆ ಅದಕ್ಕೆ ಸಂವಾದಿಯಾಗಿ ‘ಕರ್ನಾಟಕ ರತ್ನ’ ಇದೆಯಷ್ಟೆ. ಈ ಎಲ್ಲ ಕಾರಣಗಳಿಂದ, ವಿವಾದಗ್ರಸ್ತ (ವಾಗುವ) ‘ರಾಷ್ಟ್ರಕವಿ’ ಪ್ರಶಸ್ತಿಯನ್ನು ಸರ್ಕಾರ ರದ್ದು ಮಾಡುವುದೇ ಲೇಸು; ವಿದ್ವಾಂಸರೊಬ್ಬರು ಅಭಿಪ್ರಾಯ ಪಟ್ಟಿರುವಂತೆ ಆಯ್ಕೆ ಪ್ರಕ್ರಿಯೆ ಮುಂದೆ ಹಾಕುವುದಲ್ಲ. (ಅದರಿಂದ ‘ಮಾನ ದಂಡ’ವಾಗುವುದು ತಪ್ಪಬಹುದು!) ರದ್ದತಿಯಿಂದ ಯಾರಿಗೂ ನಷ್ಟವಿಲ್ಲ, ಆರ್ಥಿಕವಾಗಿ ಕೂಡ!
ರಾಜ್ಯಶಾಹಿ ವ್ಯವಸ್ಥೆ
ರಾಷ್ಟ್ರಕವಿ ಎಂಬ ಪದವಿಯನ್ನೇ ತೆಗೆದುಹಾಕಬೇಕು. ಅದು ಅನವಶ್ಯಕ. ಯಾವ ರಾಜ್ಯದಲ್ಲಿಯೂ ಈ ಪದ್ಧತಿ ಇಲ್ಲ. ಕವಿಗಳಲ್ಲಿ ಶ್ರೇಷ್ಠರು–ಕನಿಷ್ಠರು ಎಲ್ಲರೂ ಇರುತ್ತಾರೆ. ಒಬ್ಬರನ್ನು ಮೇಲೆ ತಂದು ಕೂರಿಸಿದರೆ ಏನು ಪ್ರಯೋಜನ? ಎಲ್ಲರೂ ತಮ್ಮ ಅಭಿಪ್ರಾಯ ಕೊಡುತ್ತಾರೆ. ಹತ್ತಾರು ಮಂದಿಯ ಹೆಸರು ಸೂಚಿಸುತ್ತಾರೆ. ಅಂತಿಮವಾಗಿ ಯಾರನ್ನೋ ಒಬ್ಬರನ್ನು ಆಯ್ಕೆ ಮಾಡಿದಾಗ, ಇನ್ನೊಬ್ಬರಿಗೆ ನಿರಾಶೆಯಾಗುತ್ತದೆ. ಅದೆಂತಹ ರಾಷ್ಟ್ರಕವಿ ಪಟ್ಟ? ಈ ಪದವಿ ಕೊಡುವುದು ಅರ್ಥಹೀನ. ಎಲ್ಲರೂ ತಮ್ಮ ತಮ್ಮ ಯೋಗ್ಯತೆಗೆ ತಕ್ಕ ಸ್ಥಾನಮಾನ ಪಡೆದಿದ್ದಾರೆ. ಅವರಿಗೆ ಕವಿಗಳು ಎಂಬ ಗೌರವ ಕೊಡಬೇಕಷ್ಟೇ. ರಾಜ್ಯಶಾಹಿಯ ವ್ಯವಸ್ಥೆ ಇದು. ಆಸ್ಥಾನ ಕವಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನ ಇಲ್ಲ.
–ಚಂದ್ರಕಾಂತ ಕುಸನೂರ, ಸಾಹಿತಿ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.