ಹುಬ್ಬಳ್ಳಿ: ವಿಜಯಪುರದ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ತಾಂತ್ರಿಕ ಸಮಿತಿ ವರದಿ ನೀಡಿದ್ದು, ಕುಲಪತಿ, ಕುಲ ಸಚಿವರು ಮತ್ತು ಎಂಜಿನಿಯರ್ಗಳು ತಪ್ಪಿತಸ್ಥರು ಎಂದು ಹೇಳಿದೆ.
‘ವಿಶ್ವವಿದ್ಯಾಲಯದಲ್ಲಿ 2013–14ರಲ್ಲಿ ₹ 1.51 ಕೋಟಿ ಹಣ ದುರ್ಬಳಕೆಯಾಗಿದ್ದು, ಕುಲಪತಿ ಮೀನಾ ಚಂದಾವರಕರ್, ಆಗಿನ ಕುಲಸಚಿವ ಜಿ.ಆರ್. ನಾಯಕ, ಈಗಿನ ಕುಲಸಚಿವ ಎಸ್.ಎ. ಖಾಜಿ ಮತ್ತು ಸ್ಥಾನಿಕ ಎಂಜಿನಿಯರ್ ವಿ.ಎನ್. ಹಾದಿಮನಿ ಅಕ್ರಮದಲ್ಲಿ ಪಾಲ್ಗೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿವೆ.
ಇವರಲ್ಲದೆ, ಸಹಾಯಕ ಎಂಜಿನಿಯರ್ ಎಸ್.ಸಿ. ಗಡಾದ, ಹಣಕಾಸು ಅಧಿಕಾರಿಗಳಾದ ಆರ್. ಸುಂದರಮ್ಮ ಮತ್ತು ಎಸ್.ಬಿ. ಕಾಮಶೆಟ್ಟಿ ನಿಯಮ ಉಲ್ಲಂಘಿಸಿದ ಆರೋಪವಿದೆ’ ಎಂದು ತನಿಖಾಧಿಕಾ ರಿಗಳು ಹೇಳಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ನಡೆದ ಅಕ್ರ ಮದ ಬಗ್ಗೆ ಸಿಂಡಿಕೇಟ್ ಸದಸ್ಯರಾ ಗಿದ್ದ ರಾಘವೇಂದ್ರ ಸಂಡೂರ ಮತ್ತು ಎಸ್. ಎಲ್. ಚಂದ್ರಶೇಖರ ಲೋಕಾ ಯುಕ್ತಕ್ಕೆ ದೂರು ನೀಡಿದ್ದರು. ಕಳಪೆ ದರ್ಜೆಯ ಕಾಮಗಾರಿ, ಸಾಮಗ್ರಿ ಖರೀದಿಯಲ್ಲಿ ನಿಯಮ ಉಲ್ಲಂಘನೆ ಹಾಗೂ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿ ಕೊಂಡ ಬಗ್ಗೆ ದೂರು ದಾಖಲಿಸಿದ್ದರು.
ಈ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸಲು ತಾಂತ್ರಿಕ ಘಟಕಕ್ಕೆ ಲೋಕಾ ಯುಕ್ತ ಸೂಚಿಸಿತ್ತು. ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಕೆ. ಶ್ರೀನಿವಾಸ್ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ.