ಸಚಿವ ಸತೀಶ್ ಜಾರಕಿಹೊಳಿಯವರಿಗೆ ‘ರಾಜಿನಾಮೆ ನೀಡಲು ನಾನೇ ಸೂಚಿಸಿದೆ’ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿರುವ ಮಾತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರ ಮನಸ್ಸಿಗೆ ಗಾಸಿ ಮಾಡುವಂತಹ ವಿಚಾರವಾಗಿದೆ.
ಸಚಿವರನ್ನಾಗಿ ಮಾಡುವುದು, ಖಾತೆಗಳನ್ನು ನೀಡುವುದು ಮುಖ್ಯವಾಗಿ ಮುಖ್ಯಮಂತ್ರಿ ಹಾಗೂ ಅವರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ತಮ್ಮ ಸಮುದಾಯದ ಇನ್ನೂ ಮೂವರಿಗೆ ಅವಕಾಶ ನೀಡಿದರೆ ರಾಜೀನಾಮೆ ವಾಪಸು ಪಡೆಯಲು ಸೂಚಿಸಲಾಗುವುದು. ಇಲ್ಲವಾದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಹದಿನೈದೂ ಮಂದಿ ವಿಧಾನಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಲಾಗುವುದು ಎಂದಿರುವುದು ಬ್ಲ್ಯಾಕ್ಮೇಲ್ ತಂತ್ರ ಎನ್ನಿಸದೆ ಇರದು.
ಯಾವುದೇ ಸಮಾಜದ ಜಗದ್ಗರುಗಳು ಆಯಾ ಸಮಾಜದ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕೆ ಹೊರತು ಈ ರೀತಿಯ ಒತ್ತಡದ ತಂತ್ರವನ್ನು ಅನುಸರಿಸುವುದು ಒಳ್ಳೆಯದಲ್ಲ. ಧರ್ಮಗುರುಗಳು ಧರ್ಮಪ್ರಸಾರ ಮಾಡುತ್ತಾ ಇಡೀ ಸಮುದಾಯದ ಬಗ್ಗೆ ಚಿಂತಿಸಬೇಕು.
ವಿಧಾನಸಭೆಯ ಯಾವ ಸದಸ್ಯರೂ ಕೇವಲ ಒಂದು ವರ್ಗ–ಜಾತಿಯ ಮತಗಳಿಂದ ಆರಿಸಿಬಂದಿಲ್ಲ. ಅವರ ಮೇಲೆ ಇಡೀ ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆ ಇದೆ. ಧರ್ಮಗುರುಗಳು ತಪ್ಪು ಮಾರ್ಗದರ್ಶನ ಮಾಡಬಾರದು. ಎಲ್ಲವನ್ನೂ ಮೀರಿದ ಅವರು ತ್ಯಾಗಿಗಳಾಗಿರಬೇಕು.
ಸಚಿವರು ತಮ್ಮನ್ನು ಆರಿಸಿದ ಜನರಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಉತ್ತರದಾಯಿಗಳಾಗಬೇಕೆ ವಿನಾ ತಮ್ಮನ್ನು ಜಾತಿ–ಧರ್ಮಕ್ಕೆ ಸೀಮಿತಗೊಳಿಸಿಕೊಳ್ಳಬಾರದು.