ಉಳ್ಳಾಲ: ಬಂಟಿಂಗ್ಸ್ ಹಾಕುವುದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆ ರಸ್ತೆ ಬದಿಯ 13 ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಕೊನೆಗೊಂಡ ಘಟನೆ ಉಳ್ಳಾಲದ ತೊಕ್ಕೊಟ್ಟಿನಲ್ಲಿ ಗುರುವಾರ ನಡೆದಿದೆ.
ತೊಕ್ಕೊಟ್ಟು ಜಂಕ್ಷನ್ನಲ್ಲಿ ರೈಲ್ವೆ ಹಳಿ ಸಮೀಪ ಇದ್ದಂತಹ 13 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇದಕ್ಕೆ ಮೊದಲು ಕೆ.ಸಿ.ರೋಡ್ ಸಮೀಪ ಎರಡು ತಂಡಗಳ ನಡುವಣ ಘರ್ಷಣೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕೆ.ಸಿ.ರೋಡ್ ಜಂಕ್ಷನ್ನಲ್ಲಿ ಬುಧವಾರ ರಾತ್ರಿ ತಂಡವೊಂದು ಬಂಟಿಂಗ್ಸ್ ಹಾಗೂ ಧ್ವಜಗಳನ್ನು ಕಟ್ಟುತ್ತಿತ್ತು. ಇದನ್ನು ವಿರೋಧಿಸಿದ ಗುಂಪೊಂದು ಸ್ಥಳದಲ್ಲಿದ್ದ ದಾರಿದೀಪಗಳನ್ನು ಆರಿಸಿ ಸೋಡಾ ಬಾಟಲಿ ಸಹಿತ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಕಾರೊಂದು ಜಖಂಗೊಂಡಿತು.
ಕಾಸರಗೋಡು–ಮಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೂ ತೊಂದರೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಉಳ್ಳಾಲ ಠಾಣೆಯ ಪೊಲೀಸ್ ಸಿಬ್ಬಂದಿ ಚಂದ್ರ ನಾಯ್ಕ್, ಕಮಾಲಾಕ್ಷ, ಎಎಸ್ಐ ಮೋಹನ್ ದಾಸ್ ಅವರು ಕಲ್ಲು ತೂರಾಟದಿಂದ ಗಾಯಗೊಂಡರು. ಸ್ಥಳದಲ್ಲಿದ್ದ ದಿನೇಶ್, ಮಾಧವ ಹಾಗೂ ಕೆಲವು ಕೆಎಸ್ಆರ್ಪಿ ಸಿಬ್ಬಂದಿಗೂ ಗಾಯಗಳಾಗಿವೆ.