ವಾಷಿಂಗ್ಟನ್ (ಪಿಟಿಐ, ಐಎಎನ್ಎಸ್): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಅಮೆರಿಕ ತಿಳಿಸಿದೆ.
ತನ್ನ ರಾಜತಾಂತ್ರಿಕ ಅಧಿಕಾರಿಯ ಬಂಧನಕ್ಕೆ ಪ್ರತೀಕಾರವಾಗಿ ಭಾರತವು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಿದ್ದ ಕೆಲವು ವಿನಾಯ್ತಿ ಸೌಲಭ್ಯಗಳನ್ನು ರದ್ದುಪಡಿಸಿ ಹಾಗೂ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸುತ್ತ ಭದ್ರತೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ತಿರುಗೇಟು ನೀಡಿದ ಬಳಿಕ ಅಮೆರಿಕ ಈ ಹೇಳಿಕೆ ನೀಡಿದೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್, ‘ಹೆಚ್ಚಿನ ಭಾರತೀಯರಿಗೆ ಇದೊಂದು ಸೂಕ್ಷ್ಮ ವಿಚಾರ ಎಂಬುದು ನಮಗೆ ಅರ್ಥವಾಗುತ್ತದೆ. ಈ ಬಂಧನ ಪ್ರಕರಣದಲ್ಲಿ ಅನುಸರಿಸಲಾದ ನಿಯಮಗಳ ಬಗ್ಗೆ ನಾವು ಪರಾಮರ್ಶೆ ನಡೆಸುತ್ತೇವೆ’ ಎಂದು ಹೇಳಿದರು.
‘ಇದೊಂದು ಕಾನೂನು ಜಾರಿಗೆ ಸಂಬಂಧಿಸಿದ ವಿಚಾರವಾಗಿದ್ದು, ಅಧಿಕೃತ ಕಾನೂನುಗಳ ಮೂಲಕ ಮತ್ತು ನಿರ್ದಿಷ್ಟ ಮಾನದಂಡಗಳ ಅನುಸಾರ ವಿಶ್ಲೇಷಿಸಬೇಕಾಗಿದೆ. ಭಾರತದೊಂದಿಗೆ ನಾವು ಹೊಂದಿರುವ ಉತ್ತಮ ಬಾಂಧವ್ಯದ ಅಡಿಯಲ್ಲಿ ಈ ವಿಚಾರವನ್ನು ಚರ್ಚಿಸುತ್ತೇವೆ’ ಎಂದು ಹಾರ್ಫ್ ಹೇಳಿದರು.
‘ವಿವಸ್ತ್ರಗೊಳಿಸಿ ಶೋಧನೆ ನಡೆಸಿದ್ದು ನಿಜ’: ಈ ಮಧ್ಯೆ, ಬಂಧನದ ಅವಧಿಯಲ್ಲಿ ನಿಯಮಗಳಿಗೆ ಅನುಗುಣವಾಗಿ ದೇವಯಾನಿ ಅವರನ್ನು ವಿವಸ್ತ್ರಗೊಳಿಸಿ ಶೋಧನೆ ನಡೆಸಲಾಗಿದೆ ಎಂಬುದನ್ನು ಅಮೆರಿಕದ ಮಾರ್ಷಲ್ಗಳ ಸೇವಾ ಇಲಾಖೆ ಒಪ್ಪಿಕೊಂಡಿದೆ.
ಸೇಡಿನ ಕ್ರಮ– ಮಾಧ್ಯಮಗಳ ಬಣ್ಣನೆ: ದೇವಯಾನಿ ಖೋಬ್ರಾಗಡೆ ಬಂಧನವನ್ನು ಪ್ರತಿಭಟಿಸಿ ಭಾರತವು ಅಮೆರಿಕ ರಾಜತಾಂತ್ರಿಕರಿಗೆ ನೀಡಿದ್ದ ವಿನಾಯ್ತಿ ಸೌಲಭ್ಯಗಳನ್ನು ರದ್ದುಗೊಳಿಸಿರುವುದು ಮತ್ತು ನವದೆಹಲಿಯ ರಾಯಭಾರಿ ಕಚೇರಿ ಸುತ್ತಮುತ್ತ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದು ‘ಪ್ರತೀಕಾರ’ ಹಾಗೂ ‘ಸೇಡಿನ’ ಕ್ರಮ ಎಂದು ಅಮೆರಿಕದ ಪ್ರಮುಖ ಮಾಧ್ಯಮಗಳು ಬಣ್ಣಿಸಿವೆ.
‘ಇದೊಂದು ಸೇಡಿನ ಕ್ರಮ’ ಎಂದು ದ ಹಿಲ್ ವರದಿ ಮಾಡಿದ್ದರೆ, ದ ನ್ಯೂಯಾರ್ಕ್ ಟೈಮ್ಸ್ ಮತ್ತು ದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ‘ಪ್ರತೀಕಾರದ ಕ್ರಮಗಳು’ ಎಂದು ಬರೆದಿವೆ.
ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ಇತರ ಪ್ರಮುಖ ಪತ್ರಿಕೆಗಳು, ಆನ್ಲೈನ್ ಮಾಧ್ಯಮಗಳು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿವೆ.
‘ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ನ್ಯೂಯಾರ್ಕ್ನಲ್ಲಿ ಭದ್ರತಾ ಅಧಿಕಾರಿಗಳು ನಡೆಸಿಕೊಂಡ ರೀತಿಗೆ ಆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಕ್ಷಭೇದ ಮರೆತು ಎಲ್ಲಾ ರಾಜಕಾರಣಿಗಳು ಅಮೆರಿಕದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕ ರಾಯಭಾರಿ ಕಚೇರಿಯ ರಕ್ಷಣೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ದೆಹಲಿ ಪೊಲೀಸರು ಪ್ರತೀಕಾರ ತೀರಿಸಿದ್ದಾರೆ’ ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ದೇವಯಾನಿ ಅವರ ಬಂಧನದಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ ಎಂದು ದ ಸ್ಲೇಟ್ ಆನ್ಲೈನ್ ನಿಯತಕಾಲಿಕ ಹೇಳಿದೆ.
ಭಾರತೀಯ ಸಮುದಾಯದ ಖಂಡನೆ: ದೇವಯಾನಿ ಅವರ ಬಂಧನವನ್ನು ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರು ತೀವ್ರವಾಗಿ ಖಂಡಿಸಿದ್ದಾರೆ.
ದೇವಯಾನಿ ಬಂಧನ ಹಾಗೂ ಅವರನ್ನು ವಿವಸ್ತ್ರಗೊಳಿಸಿ ಶೋಧನೆ ನಡೆಸಿರುವುದನ್ನು ಸಮರ್ಥಿಸಿ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್ ಅವರು ನೀಡಿರುವ ಹೇಳಿಕೆಯನ್ನು ಅಮೆರಿಕ –ಭಾರತ ರಾಜಕೀಯ ಕ್ರಿಯಾ ಸಮಿತಿ (ಯುಎಸ್ಐಎನ್ಪಿಎಸಿ) ಖಂಡಿಸಿದೆ.
‘ಹಾರ್ಫ್ ಅವರ ಹೇಳಿಕೆ ಮನನೋಯಿಸುವಂತಹದ್ದು’ ಎಂದು 30 ಲಕ್ಷ ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿಕೆಯಲ್ಲಿ ಹೇಳಿದೆ.
ದೇವಯಾನಿ ಬಂಧನಕ್ಕೆ ಅನುಸರಿಸಲಾದ ನಿಯಮಗಳನ್ನು ಸಮಿತಿಯು ಪರಿಶೀಲಿಸುತ್ತಿದೆ. ಒಂದು ವೇಳೆ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆದರೆ ಅದು ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳಿಗೆ ಹಾನಿ ಮಾಡಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ಸುದ್ದಿಗಳು:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.