ಬಸವಕಲ್ಯಾಣ: ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಹುಮನಾಬಾದ್ ತಾಲ್ಲೂಕಿನ ಮದರಗಾಂವನ ರೈತ ಈಶ್ವರ ಮಾಣಿಕಪ್ಪ ಬಿರಾದಾರ ಅವರ ಕುಟುಂಬಕ್ಕೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಬಿಎಸ್ಪಿ ಜಿಲ್ಲಾ ಘಟಕದಿಂದ ಬುಧವಾರ ಇಲ್ಲಿನ ಉಪ ವಿಭಾಗಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ತಂದೆ ಮಾಣಿಕಪ್ಪ ಅವರ ಹೆಸರಲ್ಲಿ 6 ಎಕರೆ ಜಮೀನಿದೆ. ಪುತ್ರ ಈಶ್ವರ ಎಲ್ಲ ವ್ಯವಹಾರ ನೋಡಿಕೊಳ್ಳುತಿದ್ದ. ಮೃತನ ಹೆಸರಲ್ಲಿ ಜಮೀನು ಇಲ್ಲ ಎಂದು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಇಂಥದ್ದೇ ಪ್ರಕರಣದಲ್ಲಿ ತಂದೆಯ ಹೆಸರಲ್ಲಿ ಪರಿಹಾರ ಧನ ವಿತರಿಸಲಾಗಿದೆ. ಆದರೆ, ಇಲ್ಲಿನ ರೈತನಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಧಿಕಾರಿಗಳು ಕಟುಂಬಕ್ಕೆ ಸಾಂತ್ವನ ಹೇಳಿರುವುದು ಬಿಟ್ಟರೆ ಪರಿಹಾರ ನೀಡಿಲ್ಲ. ಪರಿಹಾರ ನೀಡದಿದ್ದರೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ. ಮೃತ ರೈತನ ಪತ್ನಿ ಸರಸ್ವತಿ ಈಶ್ವರ ಬಿರಾದಾರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ ಗೋಖಲೆ, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮಂಠಾಳಕರ್, ವೀರಣ್ಣ ಬಿರಾದಾರ, ಕಲ್ಯಾಣರಾವ ಬುಡಕೆ, ರಾಮಣ್ಣ ಪೋಸ್ತಾರ್, ಮಾರುತಿ ಕಾಂಬಳೆ, ಮಸ್ತಾನಸಾಬ್, ಜ್ಞಾನೇಶ್ವರ ಶಿಂಗಾರೆ ಉಪಸ್ಥಿತರಿದ್ದರು.