ಭಾರತದ ಪ್ರಜಾಸತ್ತೆಯನ್ನು ಬಲಪಡಿಸುವಲ್ಲಿ ಸುಶಿಕ್ಷಿತರ ಪಾತ್ರ ಮಹತ್ವದ್ದಾಗಿದೆ. ಅವರ ಜವಾಬ್ದಾರಿ ಬೇರೆಯವರ ಜವಾಬ್ದಾರಿಗಿಂತ ಗುರುತರವಾಗಿದೆ. ಹೀಗಿದ್ದೂ ಇದೇ 17ರಂದು ರಾಜ್ಯದಲ್ಲಿ ನಡೆದ ಮತದಾನದಲ್ಲಿ ಬಹಳಷ್ಟು ಜನ ಸರ್ಕಾರಿ ನೌಕರರು ಮತ ಚಲಾಯಿಸಿಲ್ಲ ಎನ್ನುವುದು ಕಳವಳಕಾರಿ ಸಮಾಚಾರ.
ಅಂದು ಅವರಿಗೆ ಕೊಟ್ಟ ರಜೆಯನ್ನು ಅವರು ಪರಸ್ಥಳಗಳಿಗೆ ಹೋಗುವುದಕ್ಕೊ ತಮ್ಮ ಇನ್ನಿತರ ಕೆಲಸಕ್ಕೊ ಬಳಸಿಕೊಂಡರೇ ಹೊರತು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದಕ್ಕೋಸ್ಕರ ಅಲ್ಲ. ಅದು ಅವರಿಗೆ ಸಂಬಳ ಸಹಿತ ರಜಾ ದಿನವಾಗಿತ್ತು. ಆದರೆ ಅದು ಷರತ್ತುರಹಿತ ರಜೆಯಾಗಿರಲಿಲ್ಲ. ಮತ ಹಾಕಬೇಕು ಎನ್ನುವುದು ಮೊದಲನೆಯ ಅಂತರ್ಗತ ಷರತ್ತು. ಈ ಷರತ್ತನ್ನು ಪಾಲಿಸಿದವರಿಗೆ ಸಂಬಳದ ಸೌಲಭ್ಯವೂ ಲಭ್ಯ ಎನ್ನುವುದು ಎರಡನೆಯ ಅಂತರ್ಗತ ಷರತ್ತು. ಮೊದಲನೆಯ ಷರತ್ತನ್ನು ಪಾಲಿಸದವರಿಗೆ ಸಂಬಳದ ಸೌಲಭ್ಯವನ್ನು ಪಡೆಯುವ ಹಕ್ಕು ಪ್ರಾಪ್ತವಾಗಲಾರದು. ತಮ್ಮ ಕರ್ತವ್ಯವನ್ನು ನಿರ್ವಹಿಸದೆ, ಕರ್ತವ್ಯಕ್ಕೆ ಅಂಟಿಕೊಂಡ ಸೌಲಭ್ಯವನ್ನು ಕೇಳುವ ನೈತಿಕ ಹಕ್ಕು ಕರ್ತವ್ಯ ನಿರ್ಲಕ್ಷಿಸಿದ ನೌಕರರಿಗೆ ಸಿಕ್ಕಲಾರದು.
ಮತ ಚಲಾಯಿಸಿದ ಪುರಾವೆಯನ್ನೊದಗಿಸಿದ ನೌಕರನಿಗೆ ಮಾತ್ರ ಆ ದಿನದ ಸಂಬಳವನ್ನು ಕೊಡುವ ಬಗ್ಗೆ ಸರ್ಕಾರವು ಗಂಭೀರವಾಗಿ ಆಲೋಚಿಸಬೇಕು. ಸರ್ಕಾರದ ಖಜಾನೆಯಲ್ಲಿರುವುದು ಸಾರ್ವಜನಿಕರ ಹಣ. ಅದನ್ನು ತಪ್ಪಿತಸ್ಥರಿಗೆ ನೀಡಲಾಗದು. ನೀಡಿದರೆ ಅದು ಬೇಜವಾಬ್ದಾರಿತನವನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ.