ಶಿಕ್ಷಣ ವ್ಯವಸ್ಥೆ ಇಂದು ತಳವೆಲ್ಲಾ ತೂತು ಹಿಡಿದ ಕಡಾಯಿಯಂತಾಗಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಹೊಸ ವಿಧಾನಗಳು, ಕಾಯ್ದೆಗಳು ಶಿಕ್ಷಣದ ಗುಣಮಟ್ಟ ಕುಸಿಯಲು, ಶಿಕ್ಷಕರ ಮನೋಧೋರಣೆ ಬದಲಾಗಲು ಕಾರಣವಾಗಿವೆ. 18 ವರ್ಷಗಳಿಂದ ಗಣಿತ ಮತ್ತು ವಿಜ್ಞಾನ ಕಲಿಸುತ್ತಿರುವ ಶಿಕ್ಷಕಿಯಾಗಿ ಯೋಚಿಸಿದಾಗ ಬೋಧನೆಯ ಜೊತೆಗೇ ಒಳ್ಳೆಯ ನಡವಳಿಕೆ ಕಲಿಸಿಕೊಡುವಲ್ಲಿ ಶಿಕ್ಷಕರೂ, ಕಲಿಯುವಲ್ಲಿ ವಿದ್ಯಾರ್ಥಿಗಳೂ, ಇದಕ್ಕೆ ಅನುಕೂಲಿಸುವಲ್ಲಿ ಇಲಾಖೆಯೂ ವಿಫಲವಾಗುತ್ತಿದೆ ಎನಿಸುತ್ತದೆ.
ದೇಶದ ಭವಿಷ್ಯ ತರಗತಿ ಕೋಣೆಗಳಲ್ಲಿ ರೂಪಿತವಾಗುತ್ತದೆಂದು ತಿಳಿದಿದ್ದರೂ ಕೇವಲ ಪಠ್ಯ ಪುಸ್ತಕದಲ್ಲಿರುವುದನ್ನು ವಿದ್ಯಾರ್ಥಿಗಳ ತಲೆಗೆ ತುರುಕುವುದು, ಇಲಾಖೆ ಕೇಳುವ ದಾಖಲೆಗಳನ್ನಿಡುವುದಷ್ಟೇ ನಮ್ಮ ಕೆಲಸ. ಇದರ ಹೊರತಾಗಿ ಯಾವ ವಿದ್ಯಾರ್ಥಿಯ ಹಣೆಬರಹ ವನ್ನೂ ಬದಲಿಸಲು ಆಗದು ಎನ್ನುವ ಧೋರಣೆ ನಮ್ಮಲ್ಲಿ ಎಷ್ಟು ಜನಕ್ಕಿಲ್ಲ ಎಂಬ ಬಗ್ಗೆ ಆತ್ಮವಿಮರ್ಶೆ ಖಂಡಿತಾ ಬೇಕು.
ಇಂದಂತೂ ಶಾಲೆಗಳಲ್ಲಿ ನಿರಂತರ ವ್ಯಾಪಕ ಮೌಲ್ಯಮಾಪನ ಪದ್ಧತಿ ಜಾರಿಗೆ ಬಂದಿದ್ದು, ಚಟುವಟಿಕೆಗಳು, ಅವುಗಳ ಮೌಲ್ಯಮಾಪನ, ಅದಕ್ಕೆ ಮಾನದಂಡಗಳು, ಯಾವ ಮಾನದಂಡಕ್ಕೆ ಎಷ್ಟು ಅಂಕ ಎನ್ನುವುದರ ಬಗ್ಗೆ ಶಿಕ್ಷಕರು ತಲೆಬಿಸಿ ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಶಿಕ್ಷಕರನ್ನು ಮೌಲ್ಯಮಾಪನ ಮಾಡಲು ಬರುವ ಇಲಾಖೆಯವರು ಕೇಳುವುದು ಕೇವಲ ದಾಖಲೆಗಳನ್ನಷ್ಟೆ! ತರಗತಿ ಕೊಠಡಿಯಲ್ಲಿ ಶಿಕ್ಷಕರ ಬೋಧನೆಯನ್ನಾಗಲೀ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನಾಗಲೀ ಗಮನಿಸುವುದು ಇಂದು ಅರ್ಥವಿಲ್ಲದ ಮಾತಾಗಿದೆ.
ಇನ್ನು ವಿದ್ಯಾರ್ಥಿಗಳ ನಡವಳಿಕೆಯ ಬಗ್ಗೆ ಶಿಕ್ಷಕರ ಮಾತು, ವರ್ತನೆ ಯಾವುದೂ ವಿದ್ಯಾರ್ಥಿಗೆ ನೋವನ್ನುಂಟುಮಾಡಬಾರದು ಎನ್ನುವ ಕಾನೂನು, ‘ಎಲ್ಲಾದರೂ ಹೋಗಲಿ ನಮಗೇನು? ಇಲ್ಲದ ತಲೆನೋವು ಯಾಕೆ?’ ಎಂಬ ಮನೋಧೋರಣೆಯನ್ನು ಶಿಕ್ಷಕರಲ್ಲಿ ಮೂಡಿಸಿದ್ದರೆ ತಪ್ಪಲ್ಲ. ವಿದ್ಯಾರ್ಥಿಗಳೊಂದಿಗೆ ಅಮಾನವೀಯವಾಗಿ ವರ್ತಿಸುವುದು ನಿಜಕ್ಕೂ ಅಪರಾಧ. ಆದರೆ ಒಳ್ಳೆಯ ಮಾತುಗಳಿಗೆ, ತಿಳಿವಳಿಕೆಗೆ ದಾರಿಗೆ ಬಾರದ ಮಕ್ಕಳನ್ನು ಹೇಗೆ ತಿದ್ದುವುದು?
ಪೋಷಕರು ‘ಶಾಲೆಗೆ ಹೋಗು’ ಎಂದು ಒತ್ತಾಯಿಸಿದ್ದಕ್ಕೆ, ಶಿಕ್ಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಓಡಿ ಹೋಗುವ, ಆತ್ಮಹತ್ಯೆಯ ಬಗೆ ಆಲೋಚಿಸುವ ಕೆಟ್ಟ ಬೆಳವಣಿಗೆಗಳಾಗುತ್ತಿರುವಾಗ ಶಿಕ್ಷಕರು ಬಯಸಿದರೂ, ಶ್ರಮಿಸಿದರೂ ಎಲ್ಲರಲ್ಲಿ ನೈತಿಕ ಮೌಲ್ಯಗಳನ್ನಾಗಲೀ, ಜವಾಬ್ದಾರಿಯನ್ನಾಗಲೀ, ಸದ್ವರ್ತನೆಯನ್ನಾಗಲೀ ಕಲಿಸಲು ವಿಫಲರಾದರೆ ಯಾರನ್ನು ದೂರುವುದು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.