ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ವಿಪರೀತ ಎನ್ನಿಸುವಾಗ ‘ನಮ್ಮ ಮೆಟ್ರೊ’ ಸಂಚಾರ ಆರಂಭವಾಗಿದ್ದು ಸಂತಸದ ಸಂಗತಿ. ಆದರೆ ‘ನಮ್ಮ ಮೆಟ್ರೊ’ದ ಸಿಟಿ ರೈಲ್ವೆ ಸ್ಟೇಷನ್ ಜನಸ್ನೇಹಿಯಾಗಿಲ್ಲ. ಮೆಟ್ರೊದಲ್ಲಿ ಬಂದವರು ‘ಸಿಟಿ ರೈಲ್ವೆ ಸ್ಟೇಷನ್ ನಿಲ್ದಾಣದಲ್ಲಿ ಇಳಿದು, ಹೊರ ಬಂದರೆ ದಂಡ ತೆರಬೇಕು!
ಏಕೆಂದರೆ ಮೆಟ್ರೊ ನಿಲ್ದಾಣದಿಂದ ಹೊರ ಬಂದಕೂಡಲೇ ಪ್ರಯಾಣಿಕರು ನೇರವಾಗಿ ರೈಲ್ವೆ ಪ್ಲಾಟ್ಫಾರಂ ಸೇರುತ್ತಾರೆ. ಅಲ್ಲಿ ಪ್ಲಾಟ್ಫಾರಂ ಟಿಕೆಟ್ ಮಾರುವ ಕೌಂಟರ್ ಇಲ್ಲ.
ಮೆಟ್ರೊದಲ್ಲಿ ಬಂದವರು ಎಂದರೂ ಭಾರತೀಯ ರೈಲ್ವೆ ಸಿಬ್ಬಂದಿ ಕೇಳುವುದಿಲ್ಲ. ಬಿಡದೆ ಹಿಡಿದು ದಂಡ ಕಟ್ಟಿಸಿಕೊಳ್ಳುತ್ತಾರೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳನ್ನು ಕೇಳಿದರೆ, ನೀವು ಓಕಳಿಪುರಕ್ಕೆ ಹೋಗಿ ಅಲ್ಲಿಂದ ಬಸ್ನಲ್ಲಿ ರೈಲು ನಿಲ್ದಾಣಕ್ಕೆ ಬರಬೇಕು ಎನ್ನುತ್ತಾರೆ.
ಮೆಟ್ರೊ ಅಧಿಕಾರಿಗಳನ್ನು ಕೇಳಿದರೆ ಸ್ಕೈವಾಕರ್ ನಿರ್ಮಾಣ ಹಂತದಲ್ಲಿ ಇದೆ. ಅದು ಆರಂಭವಾದರೆ ಸರಿ ಹೋಗುತ್ತದೆ ಎನ್ನುತ್ತಾರೆ. ಆದರೆ ಈ ಯಾವ ಮಾಹಿತಿಯೂ ಇರದ ಬಡಪಾಯಿ ಪ್ರಯಾಣಿಕ ಮಾತ್ರ ತಾನು ಮಾಡದ ತಪ್ಪಿಗೆ ₹300 ದಂಡ ಕಟ್ಟುವಂತಾಗಿದೆ.