ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾನ್‌ಬ್ಯಾಕ್ಸಿ: ತಪ್ಪಿದ ಹಾದಿ

ಭಾರತೀಯ ಕಂಪೆನಿಗಳ ಕಡಿಮೆ ಬೆಲೆಯ ಜೆನೆರಿಕ್ಸ್‌ಗಳ ಬಗೆಗೆ ಬಹುರಾಷ್ಟ್ರೀಯ ಕಂಪೆನಿಗಳು ಈಗಾಗಲೇ ಕತ್ತಿ ಮಸೆಯುತ್ತಿವೆ.
Last Updated 13 ಜೂನ್ 2013, 19:59 IST
ಅಕ್ಷರ ಗಾತ್ರ

ಐಪಿಎಲ್ ಕ್ರಿಕೆಟ್‌ನ ಮ್ಯೋಚ್ ಫಿಕ್ಸಿಂಗ್, ಕಲ್ಲಿದ್ದಲು ಗಣಿ ಹಗರಣ, ರೈಲ್ವೇ ನೇಮಕಾತಿ ಹಗರಣ ಇಂತಹ ದಿನನಿತ್ಯದ ಗಲಾಟೆಯಲ್ಲಿ ಭಾರತೀಯ ಔಷಧ ಕಂಪೆನಿಯೊಂದರ ಕರಾಳ ಅಧ್ಯಾಯ ಜನರ ಗಮನಕ್ಕೆ ಬಾರದೇ ಹೋಯಿತು.

ಇತ್ತೀಚೆಗೆ ಭಾರತೀಯ ಮೂಲದ ರ‍್ಯಾನ್‌ಬ್ಯಾಕ್ಸಿಲಿಮಿಟೆಡ್ ಎನ್ನುವ ಹೆಸರಾಂತ ಔಷಧ ಕಂಪನಿ ತನ್ನ ದುರ್ವ್ಯವಹಾರಗಳಿಗಾಗಿ ಅಮೆರಿಕಾ ಸರ್ಕಾರಕ್ಕೆ 500 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ2750 ಕೋಟಿ  ದಂಡವನ್ನು ಕೊಡಲು ಒಪ್ಪಿಕೊಂಡಿತು. ಭಾರತೀಯ ಕಂಪನಿಯಿಂದ ಭಾರತದಲ್ಲಿ ತಯಾರಾಗಿ ಅಮೆರಿಕಾಗೆ ರಫ್ತಾದ ಔಷಧಗಳು ಕಳಪೆ ಗುಣಮಟ್ಟದ್ದಾಗ್ದ್ದಿದಕ್ಕಾಗಿ ದಂಡವನ್ನು ವಿಧಿಸಲಾಗಿದೆ. ಇದರಲ್ಲಿ ಅಮೆರಿಕಾದ ಕಾನೂನು ವ್ಯವಸ್ಥೆಯ ದಕ್ಷತೆ ಎದ್ದು ಕಾಣುವುದೇನೋ ಸರಿ, ಆದರೆ ಇದೆಲ್ಲಾ ನಡೆಯುವಾಗ ನಮ್ಮ ಸರ್ಕಾರೀ ವ್ಯವಸ್ಥೆ ಎತ್ತಕಡೆ ಮುಖ ತಿರುಗಿಸಿಕೊಂಡಿತ್ತು ಎನ್ನುವುದು ಹೆಚ್ಚು ಪ್ರಸ್ತುತವಾದ ಪ್ರಶ್ನೆ.

ಮೊದಲು ಘಟನೆಯ ವಿವರಗಳನ್ನು ನೋಡೋಣ. ರ‍್ಯಾನ್‌ಬ್ಯಾಕ್ಸಿ ಕಂಪೆನಿಯ ಹಿಮಾಚಲ ಪ್ರದೇಶ್ ಮತ್ತು ಮಧ್ಯಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ಸಾರ್ಟೆಟ್ (ಮೊಡವೆಗಳಿಗಾಗಿ ಉಪಯೋಗಿಸುವ ಔಷಧ), ಗ್ಯಾಬಾಪ್ಯಾಂಟಿನ್ (ನರಸಂಬಂಧೀ ರೋಗಗಳ ಔಷಧ), ಮತ್ತು ಸಿಪ್ರೊಪ್ರೊಕ್ಸಸಿನ್ (ಆಂಟಿಬಯೋಟಿಕ್) ಗಳನ್ನು ತಯಾರಿಸಿ ಅಮೆರಿಕಾಕ್ಕೆ ರಫ್ತು ಮಾಡುತ್ತಿತ್ತು. 2005-06ರಲ್ಲಿ ತಯಾರಿಸಲಾದ ಕೆಲ ಬ್ಯಾಚ್‌ನ ಔಷಧಗಳು ಕಳಪೆ ಗುಣಮಟ್ಟದ್ದಾಗಿತ್ತು. ದಿನೇಶ್ ಥಾಕೂರ್ ಎನ್ನುವ ಕಂಪನಿಯ ನಿರ್ದೇಶಕನೊಬ್ಬ ಅಮೆರಿಕಾದ ಔಷಧ ನಿಯಂತ್ರಕರಾದ ಎಫ್‌ಡಿಎ ಸಂಸ್ಥೆಗೆ ಇದರ ಬಗೆಗೆ ಮಾಹಿತಿ ನೀಡಿದ. ಇವನನ್ನು `ವಿಷಲ್ ಬ್ಲೋಯರ್' ಎಂದು ಪರಿಗಣಿಸಿದ ಅಮೆರಿಕಾದ ಅಧಿಕಾರಿಗಳು ತನಿಖೆ ಆರಂಭಿಸಿದರು. ಅವರು ಭಾರತಕ್ಕೆ ಭೇಟಿ ನೀಡಿದಾಗ ರ‍್ಯಾನ್‌ಬ್ಯಾಕ್ಸಿ ಕಂಪನಿಯವರು ಅವರಿಗೆ ಸುಳ್ಳು ದಾಖಲೆ ಮತ್ತು ತಪ್ಪು ಮಾಹಿತಿ ನೀಡಿದರು. ವಾಸ್ತವವಾಗಿ ಈ ಔಷಧಗಳಲ್ಲಿ ಕೆಲವು ಕಲಬೆರೆಕೆಯಾಗಿದ್ದಲ್ಲದೆ, ಇನ್ನು ಕೆಲವದರ ಗುಣಮಟ್ಟ, ಜೀವಿತಾವಧಿ ಮುಂತಾದವುಗಳನ್ನು ಪರೀಕ್ಷಿಸಿಯೇ ಇರಲಿಲ್ಲ. ಇದೆಲ್ಲದರ ಬಗೆಗೆ ಕಂಪೆನಿ ಸಂಪೂರ್ಣವಾದ ಮತ್ತು ನಿಖರವಾದ ದಾಖಲೆಗಳನ್ನೂ ಇಟ್ಟಿರಲಿಲ್ಲ. ಕಾರ್ಖಾನೆಗಳಲ್ಲಿ ಔಷಧ ತಯಾರಿಕೆ ಮತ್ತು ಗುಣಮಟ್ಟ  ಪರೀಕ್ಷೆಗಳಿಗೆ ಬೇಕಾದ ವ್ಯವಸ್ಥೆ ಕೂಡ ಇರಲಿಲ್ಲ. ಅಂತರರಾಷ್ಟ್ರೀಯವಾಗಿ ಮನ್ನಣೆ ಪಡೆದ ತಯಾರಿಕಾ ವಿಧಾನಗಳನ್ನು ಅನುಸರಿಸಿರಲಿಲ್ಲ ಮತ್ತು ಈ ಬಗೆಗೆ ನೀಡಲಾದ ಸಲಹೆಗಳನ್ನು ಕಂಪೆನಿ ಕಡೆಗಣಿಸಿತ್ತು. ಇವೆಲ್ಲವನ್ನು ಒಟ್ಟುಗೂಡಿಸಿ ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಯಿತು. ಕಂಪೆನಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಿ, ತನ್ನ ಸಿವಿಲ್ ಮತ್ತು ಕ್ರಿಮಿನಲ್ ಅಪರಾಧಕ್ಕಾಗಿ 500 ಮಿಲಿಯನ್ ಡಾಲರ್ ದಂಡ ಕೊಡಲು ಸಮ್ಮತಿ ಸೂಚಿಸಿತು.

ರ‍್ಯಾನ್‌ಬ್ಯಾಕ್ಸಿ ಕಂಪೆನಿಯ ಅವಾಂತರಗಳು ಇಷ್ಟೇ ಆಗಿದ್ದರೆ ಕಡೆಗಣಿಸಬಹುದಿತ್ತು. ಇತ್ತೀಚೆಗೆ ಅದರ ಇನ್ನೊಂದು ದುರಾಚಾರ ಕೂಡ ವರದಿಯಾಯಿತು. ಅಮೆರಿಕಕ್ಕೆ ರಫ್ತಾದ ಅಟೋರ್ವೋಸ್ಟಾಟಿನ್ (ರಕ್ತದಲ್ಲಿನ ಕೊಬ್ಬಿನ ಅಂಶ-ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ನೀಡುವ ಮಾತ್ರೆ) ಎನ್ನುವ ರಾಸಾಯನಿಕದ ಜೆನೆರಿಕ್ ರೂಪದ ಔಷಧವಾದ ಲಿಪಿಟಾರ್ ಮಾತ್ರೆಗಳು ಕಲಬೆರಕೆಯಾಗಿದ್ದವು. ಈ ಮಾತ್ರೆಗಳಲ್ಲಿ ಗಾಜಿನ ಅಂಶ ಪತ್ತೆಯಾಯಿತು. ಇದನ್ನು ಒಪ್ಪಿಕೊಂಡ ಕಂಪೆನಿ, ಆ ಎಲ್ಲಾ ಬ್ಯಾಚ್‌ನ ಔಷಧವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿತು.

ಇದೇ ಕಂಪೆನಿ ಭಾರತದ ಔಷಧ ಮಾರುಕಟ್ಟೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಕಂಪೆನಿಯ ಅನುಮಾನಾಸ್ಪದ ವ್ಯವಹಾರಗಳು ಪದೇಪದೇ ವರದಿಯಾಗುತ್ತಿದ್ದರೂ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಕಂಪೆನಿಯೇ ಅದನ್ನು ಒಪ್ಪಿಕೊಂಡಿದ್ದರೂ ನಮ್ಮ ಸರ್ಕಾರ ಈ ಕಂಪೆನಿಯ ಬಗೆಗೆ ಏನು ಕ್ರಮ ಕೈಗೊಂಡಿದೆ ಎನ್ನುವ ಬಗೆಗೆ ಮಾಹಿತಿ ಇಲ್ಲ. ಅಮೆರಿಕಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಕಂಪೆನಿಯ ಹಲವಾರು ದುರ್ವ್ಯವಹಾರಗಳು ಬೆಳಕಿಗೆ ಬಂದವು.

ದಿನೇಶ್ ಥಾಕೂರ್ ಅವರು ನ್ಯಾಯಾಲಯದಲ್ಲಿ ಹೇಳಿದ ಪ್ರಕಾರ ಕಂಪೆನಿಯ ಮ್ಯೋನೇಜ್‌ಮೆಂಟ್‌ನವರು ಅಲ್ಲಿನ ವಿಜ್ಞಾನಿಗಳಿಗೆ ಜೆನರಿಕ್ ಔಷಧ ತಯಾರಿಸಲು ಕಡಿಮೆ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಲು ಅದೇಶ ನೀಡಿದ್ದರು ಮತ್ತು ಔಷಧಗಳ ಗುಣಮಟ್ಟದ ಪರೀಕ್ಷೆಗಾಗಿ ಈ ಜೆನರಿಕ್‌ಗಳ ಬದಲಾಗಿ ಕಂಪೆನಿಯ ಉತ್ತಮ ಗುಣಮಟ್ಟದ ಬ್ರಾಂಡೆಡ್ ಔಷಧಗಳನ್ನು  ಕಳಿಸಲು ಸೂಚನೆ ನೀಡಿದ್ದರು. ಕಂಪೆನಿಯ ಮತ್ತೊಬ್ಬ ಉನ್ನತ ಅಧಿಕಾರಿ ಡಾ. ಕ್ಯಾಥೀ ಸ್ಪ್ರೀನ್ ಅಲ್ಲಿನ ದುರಾಚಾರಗಳನ್ನು ತಡೆಯಲು ವಿಫಲರಾಗಿ ರಾಜೀನಾಮೆ ನೀಡಿದ್ದರು. ನ್ಯಾಯಾಲಯದಲ್ಲಿ ಆಕೆ ನೀಡಿದ ಹೇಳಿಕೆಯ ಪ್ರಕಾರ, ಆಫ್ರಿಕಾಗೆ ರಫ್ತಾಗುವ ಕಂಪನಿಯ ಏಡ್ಸ್ ಔಷಧಗಳ ಗುಣಮಟ್ಟದ ಬಗೆಗೆ ಆಕೆ ಆತಂಕ ವ್ಯಕ್ತಪಡಿಸಿದಾಗ ಉನ್ನತ ಅಧಿಕಾರಿಯೊಬ್ಬರ ಉತ್ತರ ಹೀಗಿತ್ತು, `ಅದಕ್ಕೆ ಯಾರು ತಲೆಕೆಡಿಸಿಕೊಳ್ಳುತ್ತಾರೆ. ಸಾಯುವವರು ಹೇಗೂ ಕಪ್ಪು ಜನರು ತಾನೆ?' ಎಂತಹ ಅಮಾನವೀಯವಾದ ಮತ್ತು ಉದ್ದಟತನದ ಮಾತುಗಳು!

ಇಷ್ಟೆಲ್ಲಾ ಸಾಕ್ಷಿಗಳಿದ್ದರೂ ಭಾರತ ಸರ್ಕಾರ ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿ ಕುಳಿತಂತಿದೆ. ಇಂತಹ ಕರಾಳ ಇತಿಹಾಸವಿರುವ ಕಂಪೆನಿಯಿಂದ ಭಾರತದಲ್ಲಿ ಮಾರಾಟ ಮಾಡಲಾಗುವ ಔಷಧಗಳು ಉತ್ತಮ ಗುಣಮಟ್ಟದ್ದು ಎನ್ನುವುದಕ್ಕೆ ಏನು ಖಾತ್ರಿಯಿದೆ? ಸರ್ಕಾರೀ ಸಂಸ್ಥೆಗಳು ಈ ಕಂಪೆನಿಯ ಔಷದಗಳ ಬಗೆಗೆ ಹೆಚ್ಚಿನ ನಿಗಾವಹಿಸುತ್ತಿವೆಯೇ?

ಕಂಪೆನಿಯ ಎಲ್ಲಾ ಕಾರ್ಖಾನೆಗಳನ್ನು ಸಂಪೂರ್ಣ ತನಿಖೆಗೆ ಏಕೆ ಒಳಪಡಿಸುತ್ತಿಲ್ಲ? ನಮ್ಮ ಸರ್ಕಾರೀ ಸಂಸ್ಥೆಗಳು ಎಚ್ಚರ ವಹಿಸಿದ್ದರೆ ಭಾರತೀಯ ಕಾನೂನಿನಡಿಯಲ್ಲಿ ಕಂಪೆನಿಯ ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿತ್ತಲ್ಲವೇ? ಇಂತಹ ಸಾವಿರಾರು ಪ್ರಶ್ನೆಗಳನ್ನು ಗ್ರಾಹಕರು ಯಾರಲ್ಲಿ ಕೇಳಬೇಕು? 

ಕಂಪೆನಿಯ ಹೆಚ್ಚಿನ ದುರ್ವವ್ಯವಹಾರಗಳು ನಡೆದಿದ್ದು ಅದರ ಹಿಂದಿನ ಒಡೆಯರಾದ ಮಲ್ವಿಂದರ್ ಸಿಂಗ್ ಮತ್ತು ಶಿವಿಂದರ್ ಸಿಂಗ್ ಅವರ ಆಡಳಿತಾವಧಿಯಲ್ಲಿ. ಇವರಿಬ್ಬರೂ 2008ರಲ್ಲಿ ಕಂಪೆನಿಯನ್ನು ಜಪಾನಿನ ಇನ್ನೊಂದು ಕಂಪೆನಿಗೆ 2 ಬಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಿ ಕೈತೊಳೆದುಕೊಂಡರು. ಇಂತಹ ದುಷ್ಟರನ್ನು ಅವರ ಕ್ರಿಮಿನಲ್ ಅಪರಾಧಗಳಿಗಾಗಿ ಈಗಲೂ ಶಿಕ್ಷೆಗೆ ಒಳಪಡಿಸಬಹುದಲ್ಲವೇ?

ಭಾರತೀಯ ಕಂಪೆನಿಗಳ ಕಡಿಮೆ ಬೆಲೆಯ ಜೆನೆರಿಕ್ಸ್‌ಗಳ ಬಗೆಗೆ ಬಹುರಾಷ್ಟ್ರೀಯ ಕಂಪೆನಿಗಳು ಈಗಾಗಲೇ ಕತ್ತಿ ಮಸೆಯುತ್ತಿವೆ. ನೊವ್ರಾಟಿಸ್ ಕಂಪೆನಿ ತನ್ನ ಗ್ಲಿವೇಕ್ ಔಷಧದ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪೇಟೆಂಟ್ ದಾವೆಯಲ್ಲಿ ಸೋತನಂತರ ಭಾರತೀಯ ಕಂಪೆನಿಗಳ ಜೆನೆರಿಕ್ಸ್‌ಗಳನ್ನು ತಡೆಯಲು ಬಹುರಾಷ್ಟ್ರೀಯ ಕಂಪೆನಿಗಳು ಹೊಂಚು ಹಾಕುತ್ತಿವೆ. ಇಂತಹ ಸಂದರ್ಭದಲ್ಲಿ ರ‍್ಯಾನ್‌ಬ್ಯಾಕ್ಸಿ ಅವ್ಯವಹಾರ ಅವರಿಗೆ ಹೊಸ ಆಯುಧಗಳನ್ನು ಒದಗಿಸುತ್ತದೆ.  ಇಷ್ಟೆಲ್ಲಾ ಸೂಕ್ಷ್ಮಗಳು ಸರ್ಕಾರೀ ವ್ಯವಸ್ಥೆಗೆ ಗೊತ್ತಿದ್ದರೂ ಅವರ ಮೌನಕ್ಕೆ ಬೇರೆಯದೇ ಕಾರಣಗಳಿರಬಹುದೇ?

ಇನ್ನೊಂದು ವಿಶೇಷವನ್ನು ಇಲ್ಲಿ ದಾಖಲಿಸಲೇಬೇಕು. ದೊಡ್ಡವರ ದುರಾಚಾರಗಳನ್ನು ಬಯಲಿಗೆಳೆಯುವ ವಿಷಲ್ ಬ್ಲೋಯರ್‌ಗಳು ಭಾರತದಲ್ಲಿ ಕೊಲೆಯಾಗುತ್ತಿರುವಾಗ ಅಮೆರಿಕಾದ ನ್ಯಾಯಾಲಯ ದಿನೇಶ್ ಥಾಕೂರ್‌ಗೆ ರೂ248 ಕೋಟಿ ಪರಿಹಾರ ಕೊಡಬೇಕೆಂದು ಆದೇಶಿಸಿದೆ! ಕಂಪನಿ ಕೊಡಬೇಕಾದ ದಂಡದಲ್ಲಿ ಇದೂ ಸೇರಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT