ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂ ಭಟ್ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ನಡೆ ವಿಚಿತ್ರ ಎನಿಸುತ್ತದೆ. ಕೆಪಿಎಸ್ಸಿ ಖಜಾನೆಯ ಕಾವಲಿಗೆ ಒಬ್ಬ ದಕ್ಷ ವ್ಯಕ್ತಿಯನ್ನು ನಿಯೋಜಿಸುವುದು ಬಿಟ್ಟು, ಭ್ರಷ್ಟಾಚಾರದ ಆರೋಪ ಹೊತ್ತಿರುವವರನ್ನು ನಿಯೋಜಿಸುವುದರಿಂದ ಕೆಪಿಎಸ್ಸಿಯು ಲೋಕಾಯುಕ್ತ ಮಾದರಿಯಲ್ಲೇ ವಿನಾಶದ ಹಾದಿ ಹಿಡಿಯುತ್ತದೆ ಎನಿಸುತ್ತದೆ.
ಈ ಹಿಂದೆ ಕೆಪಿಎಸ್ಸಿಯಲ್ಲಿ ನಡೆದಿರುವ ಹಗರಣಗಳಿಂದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳ ಬದುಕಿಗೆ ಕೊಡಲಿ ಪೆಟ್ಟು ಬಿದ್ದಿದೆ. ಸಂಸ್ಥೆ ಮೇಲಿನ ಜನರ ನಂಬಿಕೆ ಕೂಡ ಕಡಿಮೆಯಾಗಿದೆ.
ಕೆಪಿಎಸ್ಸಿ ನಡೆಸುವ ಪರೀಕ್ಷೆಗಳೆಂದರೆ ಉಳ್ಳವರ ಪಾಲಿನ ಪ್ರಸಾದ ಎನ್ನುವಂತಾಗಿದೆ. ಇಂತಹದ್ದೊಂದು ಸಂಸ್ಥೆಯಲ್ಲಿ ಎಗ್ಗಿಲ್ಲದೇ ಭ್ರಷ್ಟಾಚಾರ ನಡೆದು ಲಕ್ಷಾಂತರ ಜನರ ಭವಿಷ್ಯದ ಮೇಲೆ ಬರೆ ಎಳೆಯಲಾಗಿದೆ. ಈಗ ಮತ್ತೆ ಆರೋಪ ಹೊತ್ತವರನ್ನೇ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವುದು ಎಷ್ಟು ಸರಿ?