ಢಾಕಾ (ಪಿಟಿಐ): ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ‘ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಬೆಂಬಲ ನೀಡಿದವರಿಗೆ’ ನೀಡುವ ಪ್ರಶಸ್ತಿ ಕೊಡುವ ಮೂಲಕ ಗೌರವಿಸಲು ಬಾಂಗ್ಲಾದೇಶ ಸರ್ಕಾರ ನಿರ್ಧರಿಸಿದೆ.
ಬಾಂಗ್ಲಾದೇಶ ಸ್ವಾತಂತ್ರ್ಯ ಹೊಂದಲು ಬೆಂಬಲ ನೀಡಿದ ವಿದೇಶಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪಾಕಿಸ್ತಾನದ ಹಿಡಿತದಲ್ಲಿದ್ದ ಬಾಂಗ್ಲಾವು 1971ರಲ್ಲಿ ಸ್ವತಂತ್ರ ರಾಷ್ಟ್ರವಾಯಿತು. ಆ ಸಮಯದಲ್ಲಿ ವಾಜಪೇಯಿ ಅವರು ಲೋಕಸಭಾ ಸದಸ್ಯರಾಗಿದ್ದರು. ಬಾಂಗ್ಲಾದ ವಿಮೋಚನೆಯನ್ನು ವಾಜಪೇಯಿ ಬೆಂಬಲಿಸಿದ್ದರು.
‘ಜೂನ್ ಆರರಿಂದ ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಾಜಪೇಯಿ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ’ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಹೇಳಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ವಾಜಪೇಯಿ ಅವರಿಗೆ ಬಾಂಗ್ಲಾಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ‘ವಾಜಪೇಯಿ ಬಾಂಗ್ಲಾ ವಿಮೋಚನಾ ಹೋರಾಟಕ್ಕೆ ಆರಂಭದಿಂದಲೇ ಬೆಂಬಲ ನೀಡಿದ್ದರು. ಭಾರತೀಯ ಜನಸಂಘದ ಅಧ್ಯಕ್ಷರು ಮತ್ತು ಲೋಕಸಭಾ ಸದಸ್ಯರಾಗಿದ್ದುಕೊಂಡು ಅವರು ಭಾರತ ಹಾಗೂ ಅಂತರರಾಷ್ಟ್ರೀಯ ವಲಯದಲ್ಲಿ ಬಾಂಗ್ಲಾ ಜನರ ಹಕ್ಕುಗಳಿಗೆ ಹೋರಾಟ ನಡೆಸಿದ್ದರು’ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಬಾಂಗ್ಲಾದ ಸ್ವಾತಂತ್ರ್ಯ ಹೋರಾಟದ ವೇಳೆ ಪ್ರಾಣ ತೆತ್ತ ಭಾರತದ ಸೈನಿಕರ ಕುಟುಂಬದ ಸದಸ್ಯರನ್ನು ಗೌರವಿಸುವ ಪ್ರಸ್ತಾಪಕ್ಕೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೂ ಬಾಂಗ್ಲಾ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂದಿರಾ ಗಾಂಧಿ ಪರವಾಗಿ ಸೋನಿಯಾ ಗಾಂಧಿ 2012 ರಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೂ ಈ ಗೌರವ ಲಭಿಸಿತ್ತು.