ಗಜೇಂದ್ರಗಡ: ‘ವಿಜ್ಞಾನ ಶಿಕ್ಷಕ ಅಶೋಕ ಉಂಡಿ ತಮ್ಮ ಪರಿಶ್ರಮದಿಂದ ನಿರ್ಮಿಸಿದ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಶಿಕ್ಷಕ ಸಮೂಹಕ್ಕೆ ಮಾದರಿ’ ಎಂದು ಜಿಲ್ಲಾ ವಿಜ್ಞಾನ ವಿಷಯ ಪರಿವೀಕ್ಷಕ ಜಿ.ಡಿ.ದಾಸರ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಸೂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಗಂಡು ಮಕ್ಕಳ ಶಾಲೆಯ ‘ವಿಜ್ಞಾನ ಮತ್ತು ಗಣಿತ’ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಅವರು, ‘ಮಕ್ಕಳ ಕಲಿಕೆಯ ಹಿತ ದೃಷ್ಟಿಯಿಂದ ಶಾಲೆಗೆ ದೇಣಿಗೆ ರೂಪ ದಲ್ಲಿ ನೀಡುವ ಹತ್ತಿಪ್ಪತ್ತು ರೂಪಾಯಿ ಗಳೊಂದಿಗೆ ಸ್ವಂತ ಹಣ ಹಾಕಿ ಶಾಲೆಯಲ್ಲಿ ವ್ಯವಸ್ಥಿತ ಪ್ರಯೋಗಾಲಯ ನಿರ್ಮಿಸಿರುವ ಇವರ ಕಾರ್ಯ ಶ್ಲಾಘನೀಯ’ ಎಂದರು
‘ಹಸಿರು, ಬಳವಡಕ, ಮಣ್ಣಮುಕ್ಕ, ನಾಗರಹಾವು, ಕಪ್ಪು ಮತ್ತು ಕೆಂಪು ಬಣ್ಣದ ಚೇಳುಗಳನ್ನು ಜೀವಂತವಾಗಿ ಇರಿಸಲಾಗಿದೆ. ಎತ್ತು, ಎಮ್ಮೆ, ಬಾತು ಕೋಳಿ, ಹೃದಯಗಳು, ಎತ್ತು, ಮೇಕೆಯ ಯಕೃತ್ತುಗಳು, ಎತ್ತು–ಎಮ್ಮೆ ಮರಿಗಳ ಕಣ್ಣುಗಳು, ಎತ್ತು ಆಡುಗಳ ಮೂತ್ರ ಜನಕಾಂಗಗಳನ್ನು ರಾಸಾ ಯನಿಕಗಳನ್ನು ಬೆರೆಸಿ ಸಂಗ್ರಹಿಸಿ ಇಡಲಾಗಿದೆ.
ಪರಿಣಾಮಕಾರಿ ಕಲಿಕೆಗೆ ನೆರವಾಗಲು ವಿವಿಧ ಪ್ರಾಣಿಗಳ ಆಯ್ಕೆ ಭಾಗಗಳನ್ನು ಸಹ ಪ್ರಯೋಗಾಲಯ ಒಳಗೊಂಡಿದೆ. ಶಿಕ್ಷಕ ಉಂಡಿ ಅವರು ಸಿದ್ಧಗೊಳಿಸಿದ ವಿಜ್ಞಾನ ಪ್ರಯೋ ಗಾಲಯ ವೀಕ್ಷಿಸಲು ರಾಜ್ಯದ ಮೂಲೆ–ಮೂಲೆಗಳಿಂದ ವಿದ್ಯಾರ್ಥಿಗಳು, ವಿವಿಧ ಪ್ರತಿಷ್ಠಾನಗಳು, ಶಿಕ್ಷಣ ತತ್ಞರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಶಿಕ್ಷಕರ ಶ್ರಮಕ್ಕೆ ಹಿಡಿದ ಕೈಗನ್ನಡಿ ಎಂದರು.
ಹಲವು ವಿದ್ಯಾರ್ಥಿಗಳು ಕಬ್ಬಿಣದ ಕಡೆಲೆಕಾಯಿ ಎಂದೇ ತಿಳಿದುಕೊಂಡಿ ರುವ ಗಣಿತ ಮತ್ತು ವಿಜ್ಞಾನ ವಿಷಯ ಗಳನ್ನು ಸುಲಭದಲ್ಲಿ ತಿಳಿಸಿಕೊಡುವಲ್ಲಿ ಇವರು ಯಶಸ್ವಿಯಾಗಿದ್ದಾರೆ ಎಂದರು.
ಪಠ್ಯಕ್ಕೆ ಸಂಬಂಧಿಸಿದ ಪ್ರಯೋಗ ಗಳನ್ನು ಜೀವಂತ ಪ್ರಾಣಿಗಳನ್ನು ತಂದು ಬೋಧನೆ ಮಾಡಿ ವಿದ್ಯಾರ್ಥಿಗಳು ಅಧ್ಯಯನದ ಕಡೆ ವಿಶೇಷ ಆಸ್ಥೆ ವಹಿಸುವಂತೆ ಮಾಡುವುದು ಇವರ ವಿಶೇಷತೆ. ಅಶೋಕ ಅವರ ಪ್ರಯೋಗ ಶೀಲತೆಯಿಂದ ಸೂಡಿಯ ವಿದ್ಯಾರ್ಥಿ ಗಳೆಲ್ಲ ಬಾಲ ವಿಜ್ಞಾನಿಗಳಾಗಿದ್ದಾರೆ ಎಂದರು.
ಹಾವು, ಚೇಳು, ತೋಳ, ಉಡ, ಕಪ್ಪೆ ಮುಂತಾದ ಪ್ರಾಣಿಗಳನ್ನು ಜೀವಂತ ವಾಗಿ ಹಿಡಿಯುವ ಕಲೆಯನ್ನು ಮಕ್ಕಳಿಗೆ ಇವರು ಕರಗತ ಮಾಡಿಸುತ್ತಾರೆ. ಪ್ರಾಣಿಗಳ ಮೇಲೆ ಮಕ್ಕಳಿಂದಲೇ ಪ್ರಯೋಗ ಮಾಡಿಸುತ್ತಾರೆ. ಇದರಿಂದ ಮಕ್ಕಳಿಗೆ ವಿಷಯಗಳ ಮೇಲೆ ಹೆಚ್ಚಿನ ಆಸಕ್ತಿ ಹುಟ್ಟಿ ಕಲಿಕೆ ಪರಿಣಾಮ ಕಾರಿಯಾಗುತ್ತದೆ ಎಂದರು.
ವಿವಿಧ ವಿಜ್ಞಾನ ಸಂಸ್ಥೆಗಳು ಹಾಗೂ ಪ್ರತಿಷ್ಠಾನಗಳ ಮೂಲಕ ‘ವಿಜ್ಞಾನ ಜಾತ್ರೆ’, ‘ವಿಜ್ಞಾನ ಮೇಳ’, ಪವಾಡ ರಹಸ್ಯ ಬಯಲು ಕಾರ್ಯಕ್ರಮ ಆಯೋಜಿಸುತ್ತಾರೆ. ಇದರಲ್ಲಿ ಶಾಲೆಯ 200 ವಿಜ್ಞಾನ ಮಾದರಿಗಳು ಹಾಗೂ ವಿವಿಧ ವಿಜ್ಞಾನ ಸಂಸ್ಥೆ, ಪ್ರತಿಷ್ಠಾನಗಳ 500 ವಿಜ್ಞಾನ ಮಾದರಿಗಳ ಪ್ರದರ್ಶನದ ಜತೆಗೆ ಶಾಲಾ ಮಕ್ಕಳೇ ವಿಜ್ಞಾನ ಮಾದರಿಗಳ ಕುರಿತು ವಿಶ್ಲೇಷಣೆ ಮಾಡುವುದು ಮಕ್ಕಳಿಗೆ ಪ್ರಯೋಗಾತ್ಮಕ ಕಲಿಕೆ ಮೇಲಿನ ಕಾಳಜಿಯನ್ನು ಹೆಚ್ಚಿಸಿದೆ ಎಂದರು.
ಮುಖ್ಯೋಪಾಧ್ಯಾಯ ಎಸ್.ಡಿ. ನಡುವಿನಮನಿ, ಸಹ ಶಿಕ್ಷಕರಾದ ಅಶೋಕ ಉಂಡಿ, ಎಚ್.ಜಿ. ಕುರುವಿನ ಶೆಟ್ಟಿ, ಎಸ್.ಸಿ.ಬಾಗೂರ, ಪಿ.ಎಸ್. ಕುಂಟೋಜಿ, ವಿ.ಎಂ. ಹೊನ್ನ ಬಿಂದಗಿ, ಜೆ.ಡಿ.ಮ್ಯಾಗೇರಿ, ಎಂ.ಬಿ. ಮಡಿವಾಳರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.