ಬೆಂಗಳೂರು: ಕಾಡುಗೋಡಿಯ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ಕಚೇರಿ ಸಹಾಯಕನೊಬ್ಬ ಮಂಗಳವಾರ ರಾತ್ರಿ ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಗೌತಮಿ (17) ಮೃತಪಟ್ಟಿದ್ದು, ಆಕೆಯ ಸಹಪಾಠಿ ಸಿರೀಷಾ (16) ಗಂಭೀರ ಗಾಯಗೊಂಡಿದ್ದಾಳೆ.
ಆರೋಪಿ ಮಹೇಶ್ನನ್ನು (38) ಪೊಲೀಸರು ಬಂಧಿಸಿದ್ದಾರೆ. ಮೂಲತಃ ಆಗುಂಬೆಯ ಕೆಂದಾಳಬೈಲು ಗ್ರಾಮದ ಮಹೇಶ್, ಎರಡು ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಹಾಸ್ಟೆಲ್ ಕೊಠಡಿಗೆ ನುಗ್ಗಿದ್ದ ಈತ, ದೇಶಿ ನಿರ್ಮಿತ ಪಿಸ್ತೂಲಿನಿಂದ (.9ಎಂಎಂ) ಗೌತಮಿಯ ತಲೆಗೆ ಹಾಗೂ ಸಿರೀಷಾಳ ಮುಖಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದ.
ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಬಂದ ಹಾಸ್ಟೆಲ್ ಸಿಬ್ಬಂದಿ, ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಗೌತಮಿ ಕೊನೆಯುಸಿರೆಳೆದಳು. ಪ್ರಾಥಮಿಕ ಚಿಕಿತ್ಸೆ ನಂತರ ಸಿರೀಷಾಳನ್ನು ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಗುಂಡೇಟಿನಿಂದ ಆಕೆಯ ಕೆನ್ನೆ ಛಿದ್ರವಾಗಿದೆ ಎಂದು ಪೊಲೀಸರು ಹೇಳಿದರು.