ಅತ್ಯಾಚಾರ ಸಂತ್ರಸ್ತೆಯೊಡನೆ ಅತ್ಯಾಚಾರಿಯ ಮದುವೆ ಮಾಡಿಸಿ ರಾಜಿ ಮಾಡಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಮಹಿಳೆಯ ಘನತೆ–ಗೌರವವನ್ನು ಎತ್ತಿಹಿಡಿದಿರುವುದು ಅತ್ಯಂತ ಸ್ವಾಗತಾರ್ಹ.
ನಮ್ಮ ದೇಶದ ಹಳ್ಳಿ ಪಂಚಾಯ್ತಿ ನ್ಯಾಯದಿಂದ ಹಿಡಿದು ಹೈಕೋರ್ಟ್ (ಮದ್ರಾಸ್)ವರೆಗೂ ಅತ್ಯಾಚಾರಿಯ ಪರ ಸಹಾನುಭೂತಿ (ಅಥವಾ ಸಂತ್ರಸ್ತೆಗೆ ಬಾಳು ಕೊಡಿಸುವ!?) ತೋರಿ ತಿಪ್ಪೆ ಸಾರಿಸುತ್ತಿದ್ದ ಪ್ರಕರಣಗಳಿಗೆ ಸುಪ್ರೀಂಕೋರ್ಟ್ ಚಾಟಿ ಏಟು ನೀಡಿದೆ.
ಹಿಂದೆ ಯಾರೋ ನವಾಬನೊಬ್ಬ ‘ನಾಯಿ ಮುಟ್ಟದ ಮಡಕೆಯನ್ನು ಏನು ಮಾಡಬೇಕು?’ ಎಂದು ನ್ಯಾಯ ಕೇಳಿದ ಸಂದರ್ಭದಲ್ಲಿ ‘ಅದನ್ನು ನಾಯಿಯ ಕೊರಳಿಗೇ ಕಟ್ಟಿ’ ಎಂದು (ಅ)ನ್ಯಾಯ ತೀರ್ಪು ನೀಡಿದ್ದನಂತೆ. ಇಂತಹ ಎಷ್ಟೋ ತೀರ್ಪುಗಳು ನಮ್ಮಲ್ಲಿ ಬಂದು ಮಹಿಳೆಯನ್ನು ಕಾಲಕಸವನ್ನಾಗಿ ಮಾಡಿವೆ. ನಾಯಿ ಒಂದೇ ಮಡಕೆಯನ್ನು ಮುಟ್ಟುತ್ತದೆಯೇ? ನೂರಾರು ಮಡಕೆ ಮುಟ್ಟಿದರೆ ಏನು ಗತಿ?
ಅಂತೂ ಅಟ್ಟದಿಂದ ಬಿದ್ದವರಿಗೆ ದಢಿ ಏಟು ಕೊಟ್ಟಂತೆ ಬರುತ್ತಿದ್ದ ಇಂತಹ ಕೆಟ್ಟ ತೀರ್ಪುಗಳು ಸುಪ್ರೀಂಕೋರ್ಟ್ ಆದೇಶದಂತೆ ಕೊನೆಗಾಣಲಿ. ಸಂವಿಧಾನದತ್ತ ಸಮಾನತೆ ಸಾಕಾರಗೊಳ್ಳಲಿ.