ಬೆಂಗಳೂರು: ರಾಜ್ಯ ಹಜ್ ಸಮಿತಿ ವತಿಯಿಂದ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಜ್ ಯಾತ್ರೆಗೆ ಹೋಗುವವರಿಗೆ ಉಚಿತ ಲಸಿಕೆಗಳನ್ನು ವಿತರಿಸಲಾಯಿತು.
ಹಜ್ ಮತ್ತು ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರು ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಜ್ ಯಾತ್ರಿಕರಿಗೆ ಲಸಿಕೆಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ರೋಷನ್ ಬೇಗ್, ‘ಹಜ್ ಯಾತ್ರೆಗೆ ಬರುವವರು ಪೋಲಿಯೊ, ಮನಿಂಜೈಟಿಸ್ ಮತ್ತು ಸೀಸನಲ್ ಇನ್ಫ್ಲೂಯೆಂಜಾ ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸೌದಿ ಅರೇಬಿಯಾ ಸರ್ಕಾರ ಸೂಚಿಸಿದೆ. ಹೀಗಾಗಿ ಈ ಲಸಿಕೆಗಳನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.
ಈ ಬಾರಿ ರಾಜ್ಯದಿಂದ 5 ಸಾವಿರ ಮಂದಿ ಹಜ್ ಯಾತ್ರೆಗೆ ಹೋಗುತ್ತಿದ್ದಾರೆ. ಆಗಸ್ಟ್ 16ರಂದು ಮೊದಲ ವಿಮಾನ ಮಂಗಳೂರಿನಿಂದ ಹೊರಡಲಿದೆ. ಸೆಪ್ಟೆಂಬರ್ 3ರಂದು ನಗರದಿಂದ 2 ಸಾವಿರ ಯಾತ್ರಿಗಳು ಹೊರಡಲಿದ್ದಾರೆ. ಹಜ್ ಯಾತ್ರೆಗೆ ಹೋಗುವವರಿಗೆ ಆಗಸ್ಟ್ 16 ಮತ್ತು 17ರಂದು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹಜ್ ಯಾತ್ರೆಗೆ ಹೋಗುವ ವಿಮಾನಗಳ ಸಮಯವನ್ನು ಬದಲಾಯಿಸಲಾಗಿದೆ. ಮಧ್ಯಾಹ್ನದ ಬದಲಿಗೆ ರಾತ್ರಿ ವಿಮಾನಗಳು ಹೊರಡಲಿವೆ. ಸಮಯ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.