ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಡಾಗಳ ಬಳ್ಳಾರಿ ಮಾದರಿ

Last Updated 1 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಈಚೆಗೆ ರಂಗಭೂಮಿಯಲ್ಲಿ ಮಂಗಳಮುಖಿಯರ ಬದುಕಿನ ಗಮನಾರ್ಹ ಪ್ರಯೋಗಳು ನಡೆಯುತ್ತಿವೆ. ಹಿಂದೆ ಎನ್.ಎಸ್,ಡಿ ಯ ವಾಮನ ಕೇಂದ್ರೆ ‘ಜಾನೆಮನ್’ ನಾಟಕ ರೂಪಿಸಿದ್ದರು. ಅದು ಹಿಜಡಾಗಳ ಬದುಕಿನ ಚದುರಿದ ಚಿತ್ರದಂತಿತ್ತು. ಈಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹರಾಷ್ಟ್ರದ ಸಾಗರ್ ಲೋಧಿ ಅವರು ನಿರ್ಧೇಶಿಸಿದ ‘ಹಿಜಡಾ’ ನಾಟಕ ಹಿಜ್ಡಾಗಳ ಬದುಕನ್ನು ಸಶಕ್ತವಾಗಿ ತೆರೆದಿಟ್ಟಿದೆ.

ಅಂತೆಯೇ ತಮಿಳುನಾಡಿನ ರೇವತಿಯ ಬದುಕನ್ನು ಆಧರಿಸಿ ಹೆಗ್ಗೋಡಿನ ಎಂ.ಗಣೇಶ್ ಅವರು ‘ಬದುಕು ಬಯಲು’ ನಾಟಕ ರೂಪಿಸಿದ್ದರು.
ಹಾಗೆ ನೋಡಿದರೆ ಯಲ್ಲಮ್ಮನ ಪರಂಪರೆಯ ಜೋಗತಿಯರು ತಮ್ಮದೇ ಆದ ರಂಗಭೂಮಿ ಹೊಂದಿದ್ದಾರೆ. ಜೋಗತಿ ನೃತ್ಯ ಮತ್ತು ಯಲ್ಲಮ್ಮನ ನಾಟಕಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಂಜಮ್ಮ ಜೋಗತಿ ತಂಡ ಯಲ್ಲಮ್ಮನ ನಾಟಕದ ನೂರಾರು ಪ್ರದರ್ಶನಗಳನ್ನು ನೀಡಿದೆ.

ಹೀಗೆ ಯಲ್ಲಮ್ಮನ ನಾಟಕಕ್ಕಷ್ಟೆ ಸೀಮಿತವಾದ ಮಂಜಮ್ಮನ ತಂಡ ಈಚೆಗೆ ‘ಮೋಹಿನಿ ಭಸ್ಮಾಸುರ’ ಎಂಬ ಪೌರಾಣಿಕ ನಾಟಕವನ್ನು, ಅಕ್ಕಮಹಾದೇವಿ ಕುರಿತ ರಂಗ ರೂಪಕವನ್ನೂ ಪ್ರದರ್ಶಿಸಿ ರಂಗಭೂಮಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅಂತೆಯೇ ಮುಂಬೈನ ಹಿಜಡಾ ಸಂಸ್ಕೃತಿಯ ವಕ್ತಾರರಾದ ಬಳ್ಳಾರಿ ನಗರದ ಮಂಗಳಮುಖಿಯರು ಭಿಕ್ಷೆ, ಲೈಂಗಿಕ ಚಟುವಟಿಕೆಯ ಆಚೆಗೂ ರಂಗಭೂಮಿಯಲ್ಲಿ ಭರತನಾಟ್ಯ, ನೃತ್ಯ, ಫ್ಯಾಷನ್ ಶೋನಂಥ ಪ್ರಯೋಗಕ್ಕೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ

ಬಳ್ಳಾರಿ ಜಿಲ್ಲೆಯ ಮಂಗಳಮುಖಿಯರು ಏಳು ನೂರರಷ್ಟು ದಾಖಲೆಗೆ ಸಿಕ್ಕಿದ್ದಾರೆ. ಇದರಲ್ಲಿ ಐದು ನೂರರಷ್ಟು ಮಂಗಳಮುಖಿಯರು ೧೮–೩೫ ವರ್ಷದ ಒಳಗಿನವರೇ ಆಗಿದ್ದಾರೆ. ಈ ಮಂಗಳಮುಖಿಯರಲ್ಲಿ ಯಲ್ಲಮ್ಮ, ಹುಲಿಗೆಮ್ಮನ ಭಕ್ತೆಯರಿದ್ದಾರೆ. ಮುಂಬೈನ ಹಿಜಡಾ ಸಂಸ್ಕೃತಿ ಪಾಲಿಸುವವರಿದ್ದಾರೆ. ಈ ಎರಡನ್ನೂ ಒಳಗೊಂಡಂತೆ ಬಳ್ಳಾರಿಗೇ ವಿಶಿಷ್ಟವಾದ ಸ್ಥಳೀಯ ಸಂಸ್ಕೃತಿಯೊಂದನ್ನು ರೂಢಿಸಿಕೊಂಡಿದ್ದಾರೆ.

ಮಂಜಮ್ಮನ ತಂಡದವರು ಯಲ್ಲಮ್ಮನ ಸಂಪ್ರದಾಯದ ಜೋಗತಿ ನೃತ್ಯ ಹಾಡು ಪರಂಪರೆ ಮತ್ತು ನಾಟಕವನ್ನು ಜೀವಂತವಿಟ್ಟಿದ್ದಾರೆ. ಯಲ್ಲಮ್ಮನ ನಾಟಕವನ್ನು ಕರ್ನಾಟಕದಾದ್ಯಂತ ಅಭಿನಯಿಸುವ ಮೂಲಕ ಜಾನಪದ ರಂಗಭೂಮಿಯಲ್ಲಿ ಈ ನಾಟಕಕ್ಕೆ ಹೊಸ ಆಯಾಮವನ್ನು ಒದಗಿಸಿದ್ದಾರೆ. ಇದನ್ನು ಗುರುತಿಸಿ ಮಂಜಮ್ಮ ಜೋಗತಿಗೆ ಮಹಾರಾಷ್ಟ್ರದ ನಾಗಪುರ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ೨೦೧೦--–೧೧ರಲ್ಲಿ ‘ಗುರುಶಿಷ್ಯ’ ಪರಂಪರೆಯ ಯೋಜನೆ ನೀಡಿತ್ತು. ಈ ಯೋಜನೆಯ ಭಾಗವಾಗಿ ೧೫ ಜನ ಯುವ ಜೋಗತಿಯರಿಗೆ ಜೋಗತಿ ನೃತ್ಯ ಮತ್ತು ನಾಟಕದ ತರಬೇತಿ ನೀಡಿದ್ದಾರೆ.

‘ಜನರು ಕೀಳಾಗಿ ಕಾಣುವ ನಮ್ಮ ಗಂಡು ಜೋಗತಿ/ಮಂಗಳಮುಖಿ ಸಮುದಾಯ ಕಲೆಯಿಂದಲೂ ಗೌರವ ಪಡೆಯಲು ಸಾಧ್ಯವಿದೆ’ ಎನ್ನುವುದು ಮಂಜಮ್ಮ ಜೋಗತಿಯವರ ನಿಲುವು. 

ಬಹುಪಾಲು ಮಂಗಳಮುಖಿಯರನ್ನೊಳಗೊಂಡ ‘ಮೋಹಿನಿ ಭಸ್ಮಾಸುರ’ ಪೌರಾಣಿಕ ನಾಟಕ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜನರನ್ನು ಅಚ್ಚರಿಗೊಳಿಸಿತ್ತು. ಧಾರ್ಮಿಕ ಆವರಣದ ಸಾಂಪ್ರದಾಯಿಕ ವೃತ್ತಿಯಲ್ಲಿರುವ ಕಾರಣ ಮಂಜಮ್ಮನ ತಂಡದವರು ಮಂಗಳಮುಖಿ ಎನ್ನುವುದಕ್ಕಿಂತ, ಜೋಗತಿ ಎಂತಲೇ ಗುರುತಿಸಿಕೊಳ್ಳುತ್ತಾರೆ.

ಮಂಜಮ್ಮ ಜೋಗತಿ ಭಸ್ಮಾಸುರನ ಪಾತ್ರ ಮಾಡಿದರೆ, ಬ್ರಹ್ಮದೇವನಾಗಿ ರಾಮವ್ವ ಜೋಗತಿ, ದೇವೇಂದ್ರನಾಗಿ ಗೌರಿ ಜೋಗತಿ, ಗಣಪನಾಗಿ ಕವಿತಾ, ಷಣ್ಮುಖನಾಗಿ ಗಂಗಮ್ಮ, ಲಕ್ಷ್ಮಿಯಾಗಿ ಯಲ್ಲಮ್ಮ, ಋಷಿಮುನಿಯಾಗಿ ದುರುಗಮ್ಮ ಮತ್ತು ಸಂಗಡಿಗರು. ಈ ಏಳು ಜನ ಮಂಗಳಮುಖಿಯರು ಈ ಪೌರಾಣಿಕ ನಾಟಕದಲ್ಲಿ ಸಮರ್ಥವಾಗಿ ಅಭಿನಯಿಸಿದ್ದರು. ಸುರಪುರ ತಾಲೂಕಿನ ಕೊಡೇಕಲ್ಲು ಗ್ರಾಮದ ಬಸವರಾಜ ಪಂಚಗಲ್ ಅವರ ರಚನೆಯ ಈ ನಾಟಕವನ್ನು ಮರಿಯಮ್ಮನ ಹಳ್ಳಿಯ ರಂಗ ಸಾಧಕಿ ಡಾ. ಕೆ.ನಾಗರತ್ನಮ್ಮ ಮತ್ತು ಇಳಕಲ್ ಉಮಾರಾಣಿ ನಿರ್ದೇಶಿಸಿದ್ದರು. ಈ ಇಬ್ಬರು ಹಿರಿಯ ರಂಗಕಲಾವಿದೆಯರ ಒತ್ತಾಸೆಯೇ ಇಂತಹದ್ದೊಂದು ಪ್ರಯೋಗ ನಡೆಯಲಿಕ್ಕೆ ಕಾರಣವಾಗಿತ್ತು.

ನಾಟಕಕ್ಕೆ ಮೊದಲು, ಭಸ್ಮಾಸುರನಂತಹ ರೌದ್ರರಸದ ಪಾತ್ರವನ್ನು ಮಂಜಮ್ಮ ಜೋಗತಿ ಹೇಗೆ ನಿರ್ವಹಿಸುತ್ತಾಳೆ ಎನ್ನುವ ಕೊಂಕು ನುಡಿ ಕೇಳಿಸಿತ್ತು. ಅಂತೆಯೇ ಮಂಗಳಮುಖಿಯರು ಯಲ್ಲಮ್ಮನ ನಾಟಕ ಮಾಡಬಲ್ಲರು. ಆದರೆ, ಅವರಿಂದ ಭಸ್ಮಾಸುರನಂಥ ನಾಟಕ ಮಾಡಿಸಬಹುದೆ? ಎಂದು ಸಂಪ್ರದಾಯವಾದಿ ಪುರುಷರು ಈ ನಾಟಕವನ್ನು ವಿರೋಧಿಸಿದ್ದರು. ನಾಟಕದ ಗಂಡುಪಾತ್ರಗಳನ್ನು ಮಂಗಳಮುಖಿಯರನ್ನು ನಿರ್ವಹಿಸುವಾಗ ನಡಿಗೆ ಮತ್ತು ಭಾಷಾ ಬಳಕೆಯಲ್ಲಿ ಹೆಣ್ಣಿನ ಛಾಯೆ ಕಾಣಿಸಿದರೆ ಗಂಡು ಪಾತ್ರಕ್ಕೆ ಅವಮಾನ ಮಾಡಿದಂತೆ ಎನ್ನುವುದು ಈ ವಿರೋಧದ ಅಂತರಂಗ. ಈ ಬಗೆಯ ವಿರೋಧ, ಕೊಂಕು ನುಡಿಗಳಿಗೆ ಉತ್ತರವೆಂಬಂತೆ ಈ ನಾಟಕ ಯಶಸ್ವಿಯಾಯಿತು. ನಾಟಕ ಮುಗಿದಾದ ಮೇಲೆ ಈ ಬಗೆಯ ಎಲ್ಲಾ ಆರೋಪ ಅನುಮಾನಗಳು ಹುರುಳಿಲ್ಲದಂತಾಗಿದ್ದವು.

ಮಾ.ಬ. ಸೋಮಣ್ಣ ಅವರ ರಚನೆಯ ಶರಣರ ಆಯ್ದ ವಚನಗಳನ್ನು ಆಧರಿಸಿದ ‘ಶರಣ ಸಂಪದ’ ಎನ್ನುವ ರೂಪಕದಲ್ಲಿ ಮಂಗಳಮುಖಿ ಗೌರಿ ಅಕ್ಕಮಹಾದೇವಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರ ಎಷ್ಟು ಯಶಸ್ವಿಯಾಗಿತ್ತೆಂದರೆ ಗೌರಿಯನ್ನು ಕೆಲವರು ಅಕ್ಕಮಹಾದೇವಿ ಅಂತಲೇ ಕರೆಯುತ್ತಾರೆ.

ಬಳ್ಳಾರಿ ನಗರದಲ್ಲಿರುವ ಮಂಗಳಮುಖಿಯರು ಮಂಜಮ್ಮನ ತಂಡಕ್ಕಿಂತ ಭಿನ್ನರಾದವರು. ಇವರು ಮುಂಬೈನ ಹಿಜಡಾ ಪರಂಪರೆಯಲ್ಲಿ ತರಬೇತಿ ಪಡೆದವರು. ಇವರನ್ನೆಲ್ಲಾ ರೇಣುಕಾ ರೂರಲ್ ಡೆವಲಪ್‌ಮೆಂಟ್ ಎನ್.ಜಿ.ಓ.ದ
ಎಸ್. ಪ್ರೇಮಾ ಅವರು ಒಟ್ಟಾಗಿಸಿದ್ದಾರೆ. ಅವರುಗಳಿಗೆ ಗುರುತಿನ ಚೀಟಿ ಮಾಡಿಸಿ ಬೇರೆ ಬೇರೆ ಕೆಲಸಗಳಿಗೆ ತೊಡಗಿಸಬಹುದಾದ ಸಾಧ್ಯತೆಗಳತ್ತ ಪ್ರಯತ್ನಿಸುತ್ತಿದ್ದಾರೆ. ಕೆಲವರು ಡ್ರೈವಿಂಗ್ ಕಲಿಯುತ್ತಿದ್ದರೆ, ಮತ್ತೆ ಕೆಲವರು ಮೇಣದಬತ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಉಳಿದಂತೆ ಬಹುಪಾಲು ಮಂಗಳಮುಖಿಯರ ಆಸೆಯಂತೆ ಸ್ಥಳೀಯ ಡಾನ್ಸ್ ಮಂಜು ಅವರಿಂದ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ನೃತ್ಯ ತರಬೇತಿಯನ್ನು ಕೊಡಿಸಿದ್ದಾರೆ.

ನೃತ್ಯ ತರಬೇತಿ ಪಡೆದ ಮಂಗಳಮುಖಿಯರ ಮೊದಲ ರಂಗ ಪ್ರವೇಶ ೨೦೧೩ರ ಗಣೇಶೋತ್ಸವದಲ್ಲಿ ಬಳ್ಳಾರಿಯಲ್ಲಿ ನಡೆಯಿತು. ಈ ನೃತ್ಯಕ್ಕೆ ಸಿಕ್ಕ ಜನರ ಪ್ರೋತ್ಸಾಹವನ್ನು ಗಮನಿಸಿ ಇನ್ನಷ್ಟು ಸಿದ್ಧತೆಯೊಂದಿಗೆ ೨೦೧೪ರ ಜನವರಿ ೨ರಂದು ‘ಚಿಯರ್‌ಅಪ್’ ಎನ್ನುವ ನೃತ್ಯ ಕಾರ್ಯಕ್ರಮವನ್ನು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಆಯೋಜಿಸಲಾಗಿತ್ತು. ರಂಗಮಂದಿರ ಜನರಿಂದ ಕಿಕ್ಕಿರಿದಿತ್ತು. ಸಾಂಪ್ರದಾಯಿಕ ಭರತ ನಾಟ್ಯ ಒಳಗೊಂಡಂತೆ ಕನ್ನಡ, ತೆಲುಗು, ಹಿಂದಿ ಸಿನಿಮಾದ ಹಾಡುಗಳಿಗೆ ಮಾಡಿದ ನೃತ್ಯ ಜನರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ‘ಇವರ ತಂಡವನ್ನು ಸಾಂಸ್ಕೃತಿಕ ತಂಡವೆಂದು ಗುರುತಿಸಿ ಸರ್ಕಾರಿ ಉತ್ಸವದಂತಹ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಿದರೆ, ಪೂರ್ಣಪ್ರಮಾಣದ ಸಾಂಸ್ಕೃತಿಕ ತಂಡವಾಗಿ ಈ ಮಂಗಳಮುಖಿಯರು ರೂಪು ಪಡೆಯುತ್ತಾರೆ. ಇತರರಿಗೂ ಮಾದರಿಯಾಗುತ್ತಾರೆ’ ಎನ್ನುವುದು ಪ್ರೇಮಾ ಅವರ ಅನಿಸಿಕೆ.

ಬಳ್ಳಾರಿಯಲ್ಲಿ ಮುಖ್ಯವಾಗಿ ಮಂಗಳಮುಖಿಯರನ್ನು ಚಾಂದಿನಿ ಮತ್ತು ಅಂಬಿಕಾ, ಈರೇಶಮ್ಮ ಅವರ ಎರಡು ಮನೆಗಳ ಮೂಲಕ ಗುರುತಿಸಬಹುದು. ಈ ಎರಡು ಮನೆಗಳಿಗೂ ಸೂಕ್ಷ್ಮವಾದ ಫರಕುಗಳಿವೆ. ಚಾಂದಿನಿ ತಂಡದಲ್ಲಿ ಗುರುತಿಸಿಕೊಳ್ಳುವವರು ಆಧುನಿಕ ಸೌಂದರ್ಯವರ್ಧಕಗಳಿಗೆ ತೆರೆದುಕೊಂಡವರು. ನಗರದ ಕಲಿತ ಮಧ್ಯಮವರ್ಗದ ಮಹಿಳೆಯರ ಹಾಗೆ ತೋರ್ಪಡಿಸಿಕೊಳ್ಳುತ್ತಾರೆ. ಅಂತೆಯೇ ಅಂಬಿಕಾ, ಈರೇಶಮ್ಮ ಜತೆ ಗುರುತಿಸಿಕೊಳ್ಳುವವರು ಸಾಮಾನ್ಯವಾಗಿ ಗ್ರಾಮೀಣ ಭಾಗದ ಹಳ್ಳಿ ಹೆಣ್ಣುಮಕ್ಕಳನ್ನು ಅನುಕರಿಸುವ ಮಾದರಿಯವರು. ಹಾಗಾಗಿ ಡಾನ್ಸ್ ಪ್ರೋಗ್ರಾಮಿನಲ್ಲಿ ಹೆಚ್ಚಾಗಿ ಚಾಂದಿನಿ ಮತ್ತು ಜಿಂದಾಲ್ ರಾಣಿ ತಂಡದ ಸದಸ್ಯೆಯರು ತೊಡಗಿಸಿಕೊಂಡಿದ್ದರು. ಉಳಿದಂತೆ ಈ ಕಾರ್ಯಕ್ರಮದ ಉಸ್ತುವಾರಿ ಮತ್ತು ಮೇಲ್ವಿಚಾರಣೆಯನ್ನು ಅಂಬಿಕಾ, ಈರೇಶಮ್ಮನ ಮನೆಯವರು ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಬಂದವರಲ್ಲಿ ನೂರಕ್ಕೆ ತೊಂಬತ್ತರಷ್ಟು ಮಂದಿ ಯುವಕರು. ಅವರು ಸಹಜವಾಗಿ ಹೆಣ್ಣಿಗೆ ಸ್ಪಂದಿಸುವ ರೀತಿಯಲ್ಲಿಯೇ ಮಂಗಳಮುಖಿಯರಿಗೂ ಸ್ಪಂದಿಸಿದ್ದರು.

ಬಳ್ಳಾರಿ ಭಾಗದ ಯುವ ಮಂಗಳಮುಖಿಯರ ಈ ಎರಡು ಭಿನ್ನ ರಂಗಪ್ರವೇಶಗಳು ಸಾಂಪ್ರದಾಯಿಕ ನಡೆಗಿಂತ ಬೇರೆ ರೀತಿಯವು. ಮುಂಬೈ–ಬೆಂಗಳೂರಿನಂತಹ ನಗರಗಳಲ್ಲಿ ಹಿಜಡಾಗಳಿಗೆ ಇರುವ ಅವಕಾಶಕ್ಕೂ, ಮರಿಯಮ್ಮನಹಳ್ಳಿ–ಬಳ್ಳಾರಿಯಂತಹ ನಗರಗಳಲ್ಲಿನವರ ಅವಕಾಶಗಳಿಗೂ ಭಿನ್ನತೆಗಳಿವೆ. ಅಂತೆಯೇ ಬಜಾರು ಭಿಕ್ಷೆ ಮತ್ತು ಸೆಕ್ಸ್ ವರ್ಕ್ ಆಚೆಗೆ ರಂಗಭೂಮಿಯಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಈ ಪ್ರಯೋಗದ ವಿಶೇಷವಾಗಿದೆ.

ರೇಣುಕಾ ರೂರಲ್ ಡೆವಲಪ್‌ಮೆಂಟ್‌ನ ಪ್ರೇಮ ಅವರು ಹಿಜಡಾಗಳಲ್ಲಿ ಬದಲಾವಣೆ ತರಬೇಕೆಂಬ ಪ್ರಾಮಾಣಿಕ ಕಾಳಜಿಯಿಂದ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಈ ಭಾಗದ ಮಂಗಳಮುಖಿಯರು ಸ್ಪಂದಿಸಬೇಕಷ್ಟೆ. ಮಂಗಳಮುಖಿರ ಪ್ರತಿನಿಧಿಯಾಗಿ ಪರ್ವೀನಾ ಭಾನು ಪುರಸಭೆಯ ಕಾರ್ಪೋರೇಟರ್‌ ಆಗಿಯೂ ಆಯ್ಕೆಯಾಗಿದ್ದಾರೆ. ಕ್ರಿಯಾಶೀಲವಾಗಿ ಕೆಲಸವನ್ನೂ ಮಾಡುತ್ತಿದ್ದಾರೆ. ಗಂಡು ಹೆಣ್ಣಿನ ಲೋಕದಲ್ಲಿ ಭಿಕ್ಷೆ ಮತ್ತು ಲೈಂಗಿಕ ಚಟುವಟಿಕೆಯನ್ನು ಹೊರತುಪಡಿಸಿ ಮಂಗಳಮುಖಿಯರಿಗೆ ಅವಕಾಶವೇ ಇಲ್ಲ ಎನ್ನುವ ನಂಬಿಕೆಯ ಆಚೆಗೆ ಬದುಕಿನ ಹೊಸ ಸಾಧ್ಯತೆಗಳನ್ನು ಬಳ್ಳಾರಿ ಭಾಗದ ಯುವ ಮಂಗಳಮುಖಿಯರು ತೋರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT