ಮಧುಗಿರಿ: ರಾಜ್ಯದ 6.50 ಲಕ್ಷ ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಒತ್ತಾಯಿಸಿದರು.
ಪಟ್ಟಣದ ಮಾಲೀಮರಿಯಪ್ಪ ರಂಗಮಂದಿರದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸರ್ಕಾರಿ ನೌಕರರ ನಾಗರಿಕ ಸೇವಾ ನಿಯಮಗಳು ಮತ್ತು ಜ್ಯೋತಿ ಸಂಜೀವಿನಿ ರೂಪುರೇಖೆಗಳ ಕಾರ್ಯಾಗಾರದಲ್ಲಿ ಮಾತನಾಡಿ, ಸರ್ಕಾರಿ ನೌಕರರು ಕಾನೂನು ಪರಿಣತಿ ಹೊಂದಿದ್ದರೆ ಸುಲಲಿತ ಆಡಳಿತ ನೀಡಲು ಸಾಧ್ಯ ಎಂದು ತಿಳಿಸಿದರು.
ಶಾಸಕ ಕೆ.ಎನ್.ರಾಜಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳು ವಿದ್ಯಾವಂತರಾದಾಗ ಕುಟುಂಬ ಆರ್ಥಿಕವಾಗಿ ಸದೃಢವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ಸರ್ಕಾರಿ ನೌಕರರು ನೆಲದ ಋಣ ತೀರಿಸಬೇಕು. ಕೇವಲ ಅಧಿಕಾರಿಗಳು, ರಾಜಕಾರಣಿಗಳು ಪ್ರಾಮಾಣಿಕರಾದರೆ ಸಾಲದು. ಮತದಾರರೂ ಪ್ರಾಮಾಣಿಕರಾದಾಗ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜಿ.ಆರ್.ಹರ್ಷಿಣಿ, ಎಸ್ಎಸ್ಎಲ್ಸಿ– ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 190 ವಿದ್ಯಾರ್ಥಿಗಳು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಆಡಳಿತ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಆದಿಶೇಷ ಮೂರ್ತಿ, ಸರ್ಕಾರಿ ನೌಕರರ ನಾಗರಿಕ ಸೇವಾ ನಿಯಮಗಳು ಮತ್ತು ಜ್ಯೋತಿ ಸಂಜೀವಿನಿ ರೂಪು–ರೇಖೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭೆ ಅಧ್ಯಕ್ಷ ಮಹಮದ್, ಅಯೂಬ್, ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ತಹಶೀಲ್ದಾರ್ ಜಿ.ಎಸ್.ಅನಂತರಾಮು, ಬಿಇಒ ವೈ.ಎನ್.ರಾಮಕೃಷ್ಣಯ್ಯ, ಸಾಹಿತಿ ಮ.ಲ.ನ. ಮೂರ್ತಿ, ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಟಿ.ಜಯಪ್ರಕಾಶ್, ಎಇಇ ವಾಸುದೇವನ್, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಎಂ.ಎಸ್.ಚಂದ್ರಶೇಖರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್, ಪದಾಧಿಕಾರಿಗಳಾದ ಆರ್.ಪ್ರಭಾಕರ್, ಎಸ್.ಎನ್.ಹನುಮಂತರಾಯಪ್ಪ, ಹೆಂಜಾರಪ್ಪ, ಶಿವರಾಮಯ್ಯ, ಟಿ.ಸುನಂದ, ಸಂಜಯ್, ಬಸವರಾಜು , ರಾಮಕೃಷ್ಣಯ್ಯ , ವಿ.ಎಚ್.ವೆಂಕಟೇಶಯ್ಯ, ರಾಜಣ್ಣ ಇದ್ದರು.