ನವದೆಹಲಿ (ಐಎಎನ್ಎಸ್): ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ನಿಯಮಾವಳಿ ಮತ್ತು ಕಟ್ಟಳೆಗಳಿಗೆ ಅನುಗುಣವಾಗಿಯೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ಈ ವಿಷಯದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಲೋಕಸಭೆಯ ಒಟ್ಟು ಬಲದಲ್ಲಿ ಶೇ 10ರಷ್ಟು ಸದಸ್ಯರನ್ನು ಹೊಂದಿರುವ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನಮಾನ ನೀಡುವುದು ಮೊದಲ ಸ್ಪೀಕರ್ ಜಿ.ವಿ.ಮಾಳವಂಕರ್ ಅವಧಿ ಯಿಂದಲೂ ನಡೆದುಕೊಂಡು ಬಂದಿದೆ ಎಂದರು.
ನಿಯಮಾವಳಿ ಬದಲಾಯಿಸಿ 44 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ಗೆ ವಿರೋಧ ಪಕ್ಷದ ಸ್ಥಾನ ನೀಡಿದರೆ, ಮುಂದೆ 30 ಅಥವಾ 20 ಸದಸ್ಯ ಬಲ ಹೊಂದಿರುವ ಪಕ್ಷಕ್ಕೂ ವಿರೋಧ ಪಕ್ಷದ ಸ್ಥಾನಮಾನ ನೀಡಲು ಬದಲಾವಣೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿರೋಧ ಪಕ್ಷದ ನಾಯಕ ಸ್ಥಾನ ನೀಡದೆ ಇದ್ದರೆ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್
ಚಿಂತನೆ ನಡೆಸಿರುವ ಕುರಿತು ಪ್ರಶ್ನಿಸಿದಾಗ, ಕೋರ್ಟ್ಗೆ ಹೋಗಲು ಪ್ರತಿಯೊಬ್ಬರಿಗೂ ಅವಕಾಶ ಇದೆ ಎಂದರು.
ಬ್ರಹ್ಮೋಸ್ ಪ್ರಯೋಗ ಯಶಸ್ವಿ
ಭುವನೇಶ್ವರ (ಐಎಎನ್ಎಸ್): ಸುಮಾರು 290 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯದ, 300 ಕೆ.ಜಿ. ಸಾಂಪ್ರದಾಯಿಕ ಸಿಡಿತಲೆ ಹೊರಬಲ್ಲ ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಮಂಗಳವಾರ ಒಡಿಶಾದ ಸೇನಾ ನೆಲೆಯಿಂದ ಯಶಸ್ವಿಯಾಗಿ ನಡೆಸಲಾಯಿತು.
‘ಭಾರತ ಮತ್ತು ರಷ್ಯ ಜಂಟಿ ಸಹಭಾಗಿತ್ವದಲ್ಲಿ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಸಬ್ಮೆರಿನ್, ಹಡಗು ಮತ್ತು ವಿಮಾನದ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಬಹುದು’ ಎಂದು ಪರೀಕ್ಷಾರ್ಥ ವಿಭಾಗದ ನಿರ್ದೇಶಕ ಎಂ.ವಿ.ಕೆ.ವಿ. ಪ್ರಸಾದ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.