ನವದೆಹಲಿ: ಹದಿನೆಂಟು ತಿಂಗಳ ಅವಧಿ ಗಾಗಿ ಸಿದ್ಧಪಡಿಸಿರುವ ರಾಜ್ಯದ 85 ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನುಮೋದನೆ ಬಳಿಕ ಹೆಸರುಗಳು ಅಧಿಕೃತವಾಗಿ ಪ್ರಕಟವಾ ಗಲಿವೆ. ಕೆಲವು ತಿಂಗಳಿಂದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ನಿಗಮ, ಮಂಡಳಿಗಳ ಸದಸ್ಯರ ಹೆಸರುಗಳೂ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಸದಸ್ಯರ ಪಟ್ಟಿಗೆ ಹೈಕಮಾಂಡ್ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ದೆಹಲಿಯಲ್ಲಿ ಶುಕ್ರವಾರ ರಾಹುಲ್ ಗಾಂಧಿ ಅವ ರನ್ನು ಭೇಟಿಯಾಗಿ ನಿಗಮ, ಮಂಡಳಿ ಅಧ್ಯಕ್ಷರ ಪಟ್ಟಿಗೆ ಒಪ್ಪಿಗೆ ಪಡೆದರು. ಕಾಂಗ್ರೆಸ್ ಉಪಾಧ್ಯಕ್ಷರೇ ಖುದ್ದು ಪಟ್ಟಿಯನ್ನು ಸೋನಿಯಾ ಅವರ ಬಳಿ ಕೊಂಡೊಯ್ದು ಅನುಮೋದನೆ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಿಗಮ, ಮಂಡಳಿಗಳಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು, ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ಕೊಡಲಾಗಿದೆ. ಹಾಲಿ ಶಾಸಕರು, ಚುನಾವಣೆಯಲ್ಲಿ ಸೋತವರಿಗೆ ಮಣೆ ಹಾಕಿಲ್ಲ.
ಕಳೆದ ಚುನಾವಣೆಯಲ್ಲಿ ಕಣದಿಂದ ದೂರ ಉಳಿದ ಕೆಲವು ಮಾಜಿ ಶಾಸಕರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಾಸಕರಿಗೆ ನಿಗಮ ಮತ್ತು ಮಂಡಳಿಗಳಲ್ಲಿ ಅವಕಾಶ ಕೊಡುವುದು ಬೇಡ. ಅವರು ಕ್ಷೇತ್ರಗಳಲ್ಲಿ ಕೆಲಸ ಮಾಡಲಿ ಎಂದು ರಾಹುಲ್ ಸೂಚಿಸಿದ್ದಾರೆ.
ಈಗ ನೇಮಕಗೊಳ್ಳುವ ಅಧ್ಯಕ್ಷರು, ಸದಸ್ಯರ ಅವಧಿ 18 ತಿಂಗಳು. ಉಳಿದ ಅವಧಿಗೆ ಇನ್ನಷ್ಟು ಮುಖಂಡರು, ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ವಿವರಿಸಿವೆ.
ಸಾಮಾಜಿಕ ನ್ಯಾಯ ಸಿದ್ಧಾಂತ ಪಾಲನೆ: ಕಾಂಗ್ರೆಸ್ ಮೊದಲಿನಿಂದಲೂ ನಂಬಿರುವ ಸಾಮಾಜಿಕ ನ್ಯಾಯ ಸಿದ್ಧಾಂತವನ್ನು ನಿಗಮ, ಮಂಡಳಿ ನೇಮಕದಲ್ಲೂ ಪಾಲಿಸಲಾಗಿದೆ. ಎಲ್ಲ ಜಿಲ್ಲೆ, ಜಾತಿಗಳಿಗೂ ಪ್ರಾತಿನಿಧ್ಯ ಕೊಡಲಾಗಿದೆ. ಅಲ್ಪಸಂಖ್ಯಾತ ಮುಸ್ಲಿಂ, ಕ್ರೈಸ್ತ ಮತ್ತು ಜೈನ ಸಮಾಜಕ್ಕೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಮಾನ ಕಲ್ಪಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಮತ್ತು ಪಿಸಿಸಿ ಅಧ್ಯಕ್ಷರು ಜತೆಗೂಡಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಆರು ಜಿಲ್ಲಾ ಅಧ್ಯಕ್ಷರಿದ್ದಾರೆ. ಕೆಲವು ಜಿಲ್ಲಾ ಅಧ್ಯಕ್ಷರು ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಚುನಾವಣೆಯಲ್ಲಿ ಅನೇಕರು ಸೋತಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಲ್ಲಿ ಸುಮಾರು 14 ಜನರಿಗೆ ಅವಕಾಶ ಸಿಕ್ಕಿದೆ. 40 ಪದಾಧಿಕಾರಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೆಲವರು ಚುನಾವಣೆಯಲ್ಲಿ ಸೋತಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಪ್ರತಿಯೊಂದು ಜಾತಿಯನ್ನು ಗಮನದಲ್ಲಿ ಇಟ್ಟುಕೊಂಡು ನೇಮಕ ಮಾಡಲಾಗಿದೆ. ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಬೆಳಗಾವಿ, ತುಮಕೂರು ಹಾಗೂ ಮೈಸೂರು ಸೇರಿ ಕೆಲವು ಜಿಲ್ಲೆಗಳಿಗೆ ಸಹಜವಾಗಿಯೇ ಹೆಚ್ಚು ಸ್ಥಾನ ನೀಡಲಾಗಿದೆ. ಯುವಕರಿಗೆ ಮತ್ತು ಮಹಿಳೆಯರಿಗೆ ತಲಾ ಶೇ. 25ರಷ್ಟು ಸ್ಥಾನಗಳನ್ನು ಒದಗಿಸಲಾಗಿದೆ. ಸಾಮಾಜಿಕವಾಗಿ ಪ್ರಬಲವಾಗಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮಾಜಕ್ಕೆ ಶೇಕಡಾವಾರು ಜನಸಂಖ್ಯೆಗಿಂತ ಕಡಿಮೆ ಸ್ಥಾನಗಳನ್ನು ಕೊಡಲಾಗಿದೆ.
ಲಿಂಗಾಯತರಿಗೆ ಶೇ 13 (ಜನಸಂಖ್ಯೆ ಶೇ. 16) ಒಕ್ಕಲಿಗರಿಗೆ ಶೇ 11 (ಜನಸಂಖ್ಯೆ ಶೇ 14) ರಷ್ಟು ಅವಕಾಶ ಸಿಕ್ಕಿದೆ. ಸಚಿವ ಸಂಪುಟದಲ್ಲಿ ಇವೆರಡೂ ಸಮುದಾಯಗಳು ಅರ್ಧಕ್ಕಿಂತ ಹೆಚ್ಚು ಪಾಲು ಪಡೆದುಕೊಂಡಿವೆ. ಈ ಉದ್ದೇಶದಿಂದ ನಿಗಮ, ಮಂಡಳಿಗಳಲ್ಲಿ ಕಡಿಮೆ ಆದ್ಯತೆ ದೊರೆತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಪಟ್ಟಿ ಅಂತಿಮಗೊಂಡ ಬಳಿಕವೂ ಕಾಂಗ್ರೆಸ್ ಆಕಾಂಕ್ಷಿಗಳ ಗುಂಪು ದೆಹಲಿ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರನ್ನು ಮುತ್ತಿಕೊಂಡಿತ್ತು. ಒಂದೆರಡು ದಿನದಲ್ಲಿ ಹೆಸರು ಪ್ರಕಟವಾಗಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.