ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯಲ್ಲಿ ಲಾಭ ಗಳಿಕೆ ಮಾರಾಟ

Last Updated 13 ಜುಲೈ 2014, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ವಿಸ್ಮಯಕಾರಿ ಗುಣ ಎಂದರೆ ಕಣ್ಣಿಗೆ ಕಾಣದ್ದಕ್ಕೆ ಆಸೆ ಪಡು ವುದು. ಇದರಿಂದಾಗಿ ಕೈಲಿರುವುದಕ್ಕೆ ಬೆಲೆ ಇಲ್ಲದೇ ಇರುವಂತಾಗಿದೆ.

ಅಂದರೆ ಭವಿಷ್ಯದಲ್ಲಿನ ಬೆಳವಣಿಗೆಗಳನ್ನು ಭಟ್ಟಿ ಇಳಿಸಿ ಅವಕ್ಕೆ ಮೌಲ್ಯ ನಿಗದಿಪಡಿಸಿ ವ್ಯವಹರಿಸ ಲಾಗುತ್ತದೆ. ಆದರೆ ಆ ಬೆಳವಣಿಗೆ ನಡೆದಾಗ ಅದಕ್ಕೆ ಮಾನ್ಯತೆ ನೀಡುವುದಿಲ್ಲ. ಹಾಗೆಯೇ ಕೇಂದ್ರದಲ್ಲಿನ ಹೊಸ ಸರ್ಕಾರದ ಮೊದಲ ಮುಂಗಡ ಪತ್ರ ಮಂಡನೆಗೂ ಮುನ್ನ ಅನೇಕ ವಿಶ್ಲೇಷಣೆಗಳು, ನಿರೀಕ್ಷೆಗಳು ಇದ್ದವು. ಈ ನಿರೀಕ್ಷೆ ಗಳಿಗೆ ಅನುಗುಣವಾಗಿ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು, ಮಂಗಳವಾರ 26,190 ಅಂಶಗಳವರೆಗೂ ದಿನದ ವಹಿವಾಟಿನ ಆರಂಭದ ಸಮಯದಲ್ಲಿ ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ದಾಖಲೆ ನಿರ್ಮಿಸಿತ್ತು. ಅದೇ ವಾರ ದಲ್ಲಿ ಶುಕ್ರವಾರ ದಿನದ ವಹಿವಾಟಿನ ಮಧ್ಯಾಂತರ ವೇಳೆಯ ಚಟುವಟಿಕೆಯಲ್ಲಿ 24,978 ಅಂಶಗಳವರೆಗೂ ಕುಸಿದು 25,024 ಅಂಶಗಳಲ್ಲಿ ಕೊನೆಗೊಂಡಿತು.

ಅಂದರೆ ಈ ವಾರ ಸಂವೇದಿ ಸೂಚ್ಯಂಕವು ಒಟ್ಟಾರೆಯಾಗಿ 938 ಅಂಶಗಳಷ್ಟು ಇಳಿಕೆ ಕಂಡಿದೆ. ವಾಸ್ತವವಾಗಿ ಕೇಂದ್ರದ ಮುಂಗಡ ಪತ್ರವು ಜನಸಾಮಾನ್ಯರ, ಉದ್ಯಮಗಳ ಅಗತ್ಯಗಳ ದೃಷ್ಟಿಯಿಂದ ಸಕಾರಾತ್ಮಕವಾಗಿದೆ. ಇದುವರೆ ವಿಗೂ ಕೇವಲ ವೆಚ್ಚ ಮಾಡುವುದರತ್ತಲೇ ಸಾಗು ತ್ತಿದ್ದ ದಾರಿಯಿಂದ ಉಳಿತಾಯ ಆಶ್ರಿತ ಯೋಜನೆ ಗಳತ್ತ ತಿರುಗಿರುವುದು ಸ್ವಾಗತಾರ್ಹ.

ದೇಶದ ಆರ್ಥಿಕ ಬೆಳವಣಿಗೆಗೆ ಮುಖ್ಯವಾಗಿ ಅಗತ್ಯವಿರುವುದು ನಾಗರಿಕರಲ್ಲಿ ಕೊಳ್ಳುವ ಸಾಮರ್ಥ್ಯ ಹೆಚ್ಚುವಂತಾಗುವುದು. ಈ ಅಂಶ ವನ್ನು ಅರ್ಥಮಾಡಿಕೊಂಡಂತೆಯೇ ಸರ್ಕಾರದ ಅನೇಕ ಕ್ರಮಗಳು ಈ ದಿಕ್ಕಿನಲ್ಲಿ ಸರಿಯಾಗಿಯೇ ಇವೆ.

ಆದಾಯ ತೆರಿಗೆಯ ವಿನಾಯ್ತಿ ಮಟ್ಟವನ್ನು (ಸ್ಟ್ಯಾಂಡರ್ಡ್‌ ಡಿಡಕ್ಷನ್‌) ರೂ2 ಲಕ್ಷದಿಂದ ರೂ2.50 ಲಕ್ಷಕ್ಕೆ ಹೆಚ್ಚಿಸಿರುವುದು ಒಂದೆಡೆಯಾದರೆ, ಸೆಕ್ಷನ್‌ 80ಸಿ ಅಡಿಯಲ್ಲಿನ ಉಳಿತಾಯದ ಹೂಡಿಕೆಗಳ ಮೇಲಿನ ತೆರಿಗೆ ರಿಯಾಯ್ತಿ ಮಿತಿಯನ್ನು ರೂ1.50 ಲಕ್ಷಕ್ಕೆ ಹೆಚ್ಚಿಸಿರುವುದು ಇನ್ನೊಂದೆಡೆ ಗಮನಾರ್ಹ ವಾಗಿದೆ.

ಈ ಅಂಶವು ಜನರಲ್ಲಿನ ಖರೀದಿ ಸಾಮರ್ಥ್ಯ ವನ್ನು ಹೆಚ್ಚಿಸುವಂತಹವೇ ಆಗಿವೆ. ‘ಕಿಸಾನ್‌ ವಿಕಾಸ್‌ ಪತ್ರ’ದ ಯೋಜನೆಯನ್ನು ಮರಳಿ ಜಾರಿ ಗೊಳಿಸಿರುವುದು ಉಳಿತಾಯಕ್ಕೆ ಪ್ರೋತ್ಸಾಹ ನೀಡುವಂತಹುದೇ ಆಗಿದೆ. ಅದರ ಜೊತೆಗೇ ಹಿರಿಯ ನಾಗರಿಕರು, ಮತ್ತು ನಿವೃತ್ತರಿಗೆ  ಸುಭದ್ರ ಹೂಡಿಕೆಗೆ ಸೂಕ್ತವಾದಂತಹ ಉಳಿತಾಯ ಹೂಡಿಕೆ ಯೋಜನೆಯನ್ನೂ ದೊರಕಿಸಿ ಕೊಟ್ಟಂತಾಗಿದೆ.

ಸಾರ್ವಜನಕರ ಭವಿಷ್ಯ ನಿಧಿ (ಪಬ್ಲಿಕ್‌ ಪ್ರಾವಿ ಡೆಂಟ್‌ ಫಂಡ್‌: ಪಿಪಿಎಫ್‌) ಹೂಡಿಕೆಯ ಮಿತಿ ಯನ್ನೂ ಹೆಚ್ಚಿಸಿರುವುದು ಮತ್ತಷ್ಟು ಹಣದ ಉಳಿತಾಯಕ್ಕೆ ಪ್ರೋತ್ಸಾಹಕರವೇ ಆಗಿದೆ. ಇದೂ ಸಹ ಹಣಕಾಸು ಮಾರುಕಟ್ಟೆ ದೃಷ್ಟಿಯಿಂದ ಸ್ವಾಗತಾರ್ಹವೇ ಆಗಿದೆ.

ಮುಂಗಡಪತ್ರಕ್ಕೆ ಎಲ್ಲಾ ವಲಯಗಳಿಂದಲೂ ಸಕಾರಾತ್ಮಕವಾದ ಸ್ಪಂದನ ದೊರಕಿದ್ದರೂ ಷೇರುಪೇಟೆ ಸೂಚ್ಯಂಕಗಳು ಮಾತ್ರ ಇಳಿಕೆ ದಾಖ ಲಿಸಿವೆ. ಈ ವರ್ಷದ ಜನವರಿ 31ಕ್ಕೆ ಅಂತ್ಯಗೊಂಡ ವಾರದಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿದ್ದ 619 ಅಂಶಗಳ ಕುಸಿತದ ನಂತರದಲ್ಲಿ ಈ ವಾರದಲ್ಲಿನ 937 ಅಂಶಗಳ ಒಟ್ಟಾರೆ ಪತನವೇ ಅತಿ ಹೆಚ್ಚಿನದಾಗಿದೆ.

ಈ ಕುಸಿತದ ಹಿಂದೆ ಭಾರಿ ಮಟ್ಟದ ಲಾಭದ ನಗದೀಕರಣದ ಮೇಲಾಟವೇ ಮುಖ್ಯವಾಗಿದೆ. ಉಳಿದಂತೆ ಪೋರ್ಚ್‌ಗೀಸ್‌ ಬ್ಯಾಂಕ್‌ನ ಗೊಂದಲ, ‘ಗಾರ್‌’ (ಜನರಲ್ ಆಂಟಿ ಅವಾಯ್ಡೆನ್ಸ್‌ ರೂಲ್‌; ಜಿಎಎಆರ್) ಹಾಗೂ ಪೂರ್ವಾನ್ವಯ ಜಾರಿಯ ತೆರಿಗೆ ನೀತಿ ಮೊದಲಾದವು ನೆಪಮಾತ್ರವಾಗಿವೆ.

ಇದೇ 9ರಂದು (ಬುಧವಾರ) ಬ್ಯಾಂಕೆಕ್ಸ್ (ಬ್ಯಾಂಕಿಂಗ್‌ ವಲಯದ ಷೇರುಗಳು) 18,099 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ, 11ರಂದು ಮಧ್ಯಾಂತರ ವಹಿವಾಟಿನಲ್ಲಿ 16,498 ಅಂಶಗಳಿಗೆ ಕುಸಿಯಿತು. ಅಂದರೆ ಸುಮಾರು 1600 ಅಂಶಗಳ ಕುಸಿತವು ಸಹಜ ವಾದುದೇನೂ ಆಗಿರಲಿಲ್ಲ.

ಜೂನ್‌ ಅಂತ್ಯದ ತ್ರೈಮಾಸಿಕ ಫಲಿತಾಂಶಗಳು ಹೊರಬೀಳುವ ಮುನ್ನ ಮತ್ತೊಮ್ಮೆ ಈ ಬ್ಯಾಂಕಿಂಗ್‌ ವಲಯದ ಷೇರುಗಳು ಬೆಲೆ ಪುಟಿದೇಳಬಹುದು.

ಸಾರ್ವಜನಿಕ ವಲಯದ ಕಂಪೆನಿಗಳ ಸೂಚ್ಯಂಕ, ರಿಯಾಲ್ಟಿ, ಪವರ್‌, ಕ್ಯಾಪಿಟಲ್‌ ಗೂಡ್‌್ಸ ಇಂಡೆಕ್‌್ಸ ಭಾರಿ ಕುಸಿತಕ್ಕೊಳಗಾಗಿವೆ.
ಸುಭದ್ರ ಎನಿಸುವ ಕಂಪೆನಿಗಳ ಷೇರುಗಳಲ್ಲಿನ ಕುಸಿತ, ಹೆಚ್ಚಿನ ಹಣ ಹೂಡಿಕೆಗೆ ಉತ್ತಮ ಅವ ಕಾಶ ಕಲ್ಪಿಸಿದೆ. ಒಟ್ಟು 937 ಅಂಶಗಳ ಕುಸಿತ ದಿಂದ ಸಂವೇದಿ ಸೂಚ್ಯಂಕಕ್ಕೆ ಮಧ್ಯಮ ಶ್ರೇಣಿ ಸೂಚ್ಯಂಕ 670 ಅಂಶ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 820 ಅಂಶಗಳಷ್ಟು ಇಳಿಕೆಯಿಂದ ಬೆಂಬಲಿಸಿವೆ. ಈ ಸೋಮವಾರ ಪೇಟೆಯ ಬಂಡವಾಳೀಕರಣ ಮೌಲ್ಯ ರೂ92.38 ಲಕ್ಷ ಕೋಟಿ ತಲುಪಿ ಗರಿಷ್ಠ ದಾಖಲೆ ನಿರ್ಮಿಸಿತಾದರೂ ವಾರಾಂತ್ಯದಲ್ಲಿ ರೂ86.28 ಲಕ್ಷ ಕೋಟಿಗೆ ಇಳಿಯಿತು.

ವಾರದ ವಿಶೇಷ
ಮೀಸಲು ದರ ಪದ್ಧತಿ ಜಾರಿ ಉತ್ತಮ

ಕೇಂದ್ರ ಸರ್ಕಾರವು ಬಂಡವಾಳ ಪೇಟೆಯ ಸುಧಾರಣೆಗೆ ಹಲವಾರು ಕ್ರಮ ಕೈಗೊಂಡಿದೆ. ಮ್ಯೂಚುಯಲ್‌ ಫಂಡ್‌ನ ಡೆಟ್‌ ಫಂಡ್‌ಗಳ  ಹೂಡಿಕೆಯನ್ನು ಕಡೆಗಣಿಸಲಾಗಿದೆ. ಈ ಹೂಡಿಕೆಯಲ್ಲಿ ಲಭ್ಯವಾಗುತ್ತಿದ್ದ ಲಾಭಕ್ಕೆ ‘ಲಾಂಗ್‌ಟರ್ಮ್ ಕ್ಯಾಪಿಟಲ್‌ ಗೇನ್‌್ಸ’ ನಿಯಮದಡಿ ತೆರಿಗೆ ರಿಯಾಯ್ತಿ ಬೇಕಿದ್ದಲ್ಲಿ ಕನಿಷ್ಠ ಮೂರು ವರ್ಷ ಹೂಡಿಕೆ ಮಾಡಿರಬೇಕು ಹಾಗೂ ಅದರ ಮೇಲೆ ಕಟ್ಟಬೇಕಾದ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಈಗಿನ ಶೇ 10ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ.

ವಿದೇಶಿ ಹಣಕಾಸು ಸಂಸ್ಥೆಗಳ ಹೂಡಿಕೆಗೂ ‘ಲಾಂಗ್‌ಟರ್ಮ್ ಕ್ಯಾಪಿಟಲ್‌ ಗೇನ್‌್ಸ’ನ ಅವಕಾಶ ಕಲ್ಪಿಸಿಕೊಟ್ಟಿರುವುದು ಷೇರುಪೇಟೆಯ ದೃಷ್ಟಿಯಿಂದ ಉತ್ತಮ ಕ್ರಮವಾಗಿದೆ. ‘ಮುಂಗಡಪತ್ರ’ದ ದಿನದಂದು ಷೇರುಪೇಟೆಯು ಸುಮಾರು 800 ಅಂಶಗಳ ಏರಿಳಿತ ಪ್ರದರ್ಶಿಸಿದೆ. ಇಂತಹ ಹರಿತವಾದ ಏರಿಳಿತಗಳು ಸಣ್ಣ ಹೂಡಿಕೆದಾರರನ್ನು ಪೇಟೆಯಿಂದ ದೂರ ತಳ್ಳಿವೆ.

ಶುಕ್ರವಾರ ಸಹ 430 ಅಂಶಗಳ ಏರಿಳಿತ ಪ್ರದರ್ಶಿಸಿ ಪೇಟೆಯ ಸೂಕ್ಷ್ಮತೆಯನ್ನು ಪ್ರದರ್ಶಿಸಿದೆ. ಇಂತಹ ಬೃಹತ್‌ ಏರಿಳಿತಗಳಿಗೆ ಮುಖ್ಯವಾದ ಅಂಶವೆಂದರೆ ಸಣ್ಣ ಹೂಡಿಕೆದಾರರು ಪೇಟೆಯತ್ತ ತಿರುಗಿ ಬರುತ್ತಿಲ್ಲ ಹಾಗೂ ಚಟುವಟಿಕೆಯು ಹೆಚ್ಚಿನ ಭಾಗ ವಿತ್ತೀಯ ಸಂಸ್ಥೆಗಳದ್ದೇ ಆಗಿರುವುದಾಗಿದೆ.

ಸಂವೇದಿ ಸೂಚ್ಯಂಕವು 31 ಸಾವಿರದ ಗಡಿಯನ್ನು ಮುಟ್ಟಲಿದೆ ಎಂಬ ಸುದ್ದಿಯು ಹೂಡಿಕೆದಾರರನ್ನು ಪ್ರೇರೇಪಿಸಿದರೆ, ನಂತರದ ದಿನಗಳಲ್ಲಿ ಮೂಲಾಧಾರಿತ ಪೇಟೆಯ ಅಂಕಿ ಅಂಶಗಳು ಪೇಟೆಯನ್ನು ಕುಸಿಯುವಂತೆ ಮಾಡುತ್ತವೆಂಬ ಸುದ್ದಿಯು ಹೂಡಿಕೆದಾರರಲ್ಲಿ ಗೊಂದಲ ಮೂಡುವಂತೆ ಮಾಡಿವೆ.

ಸರ್ಕಾರ ಬಂಡವಾಳ ಹಿಂತೆಗೆತಕ್ಕೆ ಆದ್ಯತೆ ನೀಡಿದೆ ಮುಂದಿನ ದಿನಗಳಲ್ಲಿ ಹೆಚ್ಚು ಕಂಪೆನಿಗಳು ಷೇರು ವಿತರಣೆಗೆ ಮುಂದಾಗುವುದನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ‘ಭಾರತೀಯ ಷೇರುಪೇಟೆ ನಿಯಂತ್ರಣ ಸಂಸ್ಥೆ’ (ಸೆಬಿ) ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆಯಾದರೂ, ಸಣ್ಣ ಹೂಡಿಕೆದಾರರಿಗೆ ಬೇಕಾಗಿರುವುದು ಸುರಕ್ಷಿತ ಮಾದರಿ.  ಕಂಪೆನಿಗಳು ವಿತರಿಸಲಿರುವ ಷೇರಿನ ವಿತರಣೆ ಬೆಲೆಯೂ ಮುಖ್ಯ. ಈ ನಿಟ್ಟಿನಲ್ಲಿ ‘ಫ್ರೀ ಪ್ರೈಸಿಂಗ್‌’ ಎಂದು ಕೈಚೆಲ್ಲುವುದು ಸರಿಯಲ್ಲ.
ಸಣ್ಣ ಹೂಡಿಕೆದಾರರಿಗೆ ಪ್ರತ್ಯೇಕವಾದ ಮೀಸಲು ದರ ಪದ್ಧತಿ ಜಾರಿಯಾದರೆ ಉತ್ತಮ ಪರ್ಯಾಯ ವಾಗಬಹುದು.

ಸಣ್ಣ ಹೂಡಿಕೆದಾರರಲ್ಲಿ ನಂಬಿಕೆ ಉಂಟು ಮಾಡಿ ಅವರನ್ನು ಪೇಟೆಯತ್ತ ಕರೆತಂದಲ್ಲಿ ಮಾತ್ರ ಪೇಟೆಯಲ್ಲಿ ಸ್ಥಿರತೆ ಕಾಣಲು ಸಾಧ್ಯ. ಈ ವಿಚಾರದಲ್ಲಿ ಏನಿದ್ದರೂ ಈಗ ಚೆಂಡು ‘ಸೆಬಿ’ ಅಂಗಳದಲ್ಲಿದೆ ಎನ್ನಬಹುದು.

ಒಟ್ಟಿನಲ್ಲಿ ಸಮತೋಲನದ ಬಜೆಟ್, ಕೈಗಾರಿಕೆ ಉತ್ಪಾದನಾ ಸೂಚ್ಯಂಕ ಮೇ ತಿಂಗಳಲ್ಲಿ ಶೇ 4.7ಕ್ಕೆ ತಲುಪಿರುವುದು, ವಿತ್ತೀಯ ಸಂಸ್ಥೆಗಳ ಆಸಕ್ತಿ ಮುಂತಾದವುಗಳನ್ನು ಆಧರಿಸಿ ಪರಿಶೀಲಿಸಿದಾಗ ಷೇರುಪೇಟೆಯು ಉತ್ತಮ ಅವಕಾಶಗಳನ್ನು ಕಲ್ಪಿಸುವುದೆಂಬುದನ್ನು ದೃಢಪಡಿಸುತ್ತದೆ.

ಏರಿಕೆ–ಇಳಿಕೆಗಳ ಉಯ್ಯಾಲೆಯಲ್ಲಿ ಹೂಡಿಕೆಗೆ ಮುನ್ನ ಅರಿತು ಹೂಡಿಕೆ ಮಾಡಿರಿ ಅನುಸರಿಸಬೇಡಿರಿ ಎಂಬುದು ನೆನಪಿನಲ್ಲಿರಲಿ.

ಹೊಸ ಷೇರು
*ಗೋಲ್ಡ್ ಕಾಯಿನ್‌ ಹೆಲ್ತ್ ಫುಡ್‌ ಲಿ. ಕಂಪೆನಿಯು ಅಹ್ಮದಾಬಾದ್‌ ಸ್ಟಾಕ್‌ ಎಕ್‌್ಸಚೇಜ್‌ ನಲ್ಲಿ ವಹಿವಾಟಾಗುತ್ತಿರುವ ಕಂಪೆನಿಯಾಗಿದ್ದು ಜುಲೈ 11ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಏಂಜೆಲ್‌ ಎಂಟರ್‌ ಪ್ರೈಸಸ್‌ ಲಿ. ಇದೇ 11ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ಉತ್ತರಪ್ರದೇಶ ಮತ್ತು ದೆಹಲಿ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಓಮನ್ಸ್ ಎಂಟರ್‌ಪ್ರೈಸಸ್‌ ಲಿ. ಜು. 11ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ತಪಾರಿಯಾ ಪ್ರಾಜೆಕ್ಟ್ಸ್ ಲಿ. ಕಂಪೆನಿಯು ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಕಂಪೆನಿಯಾಗಿದ್ದು ಇದೇ 11ರಿಂದ ‘ಬಿಎಸ್‌ಇ’ಯ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

*ರಾಮಚಂದ್ರ ಲೀಸಿಂಗ್‌ ಅಂಡ್‌ ಫೈನಾನ್ಸ್ ಲಿ., ಕಂಪೆನಿಯು ಅಹ್ಮದಾಬಾದ್‌ ಮತ್ತು ವಡೋದರ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದು ಜುಲೈ 11ರಿಂದ ‘ಬಿಎಸ್‌ಇ’ಯ ‘ಟಿ’ ಗುಂಪಿನಲ್ಲಿ ವಹಿವಾಟಾಗುತ್ತಿದೆ.

*ಪ್ರತಿ ಷೇರಿಗೆ ರೂ30ರಂತೆ ವಿತರಿಸಿದ ಕಂಪೆನಿಗ ಳಾದ ಓಯಸಿಸ್‌ ಟ್ರೇಡ್‌ ಲಿಂಕ್‌ ಲಿ ಮತ್ತು ಬನ್ಸಾಲ್‌ ರೂಫಿಂಗ್‌ ಪ್ರಾಡಕ್ಟ್ಸ್ ಕಂಪೆನಿಗಳು, ನಾಲ್ಕು ಸಾವಿರ ಷೇರುಗಳ ವಹಿವಾಟು ಗುಚ್ಛದೊಂದಿಗೆ ಇದೇ 14ರಿಂದ ‘ಎಸ್‌ಎಂಇ’ ವಿಭಾಗದ ಎಂ.ಟಿ. ಗುಂಪಿನಲ್ಲಿ ವಹಿವಾಟಾಗಲಿವೆ.

*ವೆಲ್‌ಸ್ಪನ್‌ ಕಾರ್ಪ್ ಕಂಪೆನಿಯ ಮೂಲ ಸೌಕರ್ಯ ವಿಭಾಗ, ಸ್ಟೀಲ್‌ ವ್ಯವಹಾರ, ಆಯಿಲ್‌ ಅಂಡ್‌ ಗ್ಯಾಸ್‌ ವಿಭಾಗ ಹಾಗೂ ಎನರ್ಜಿ ವೆಂಚರ್‌ನ ಹೂಡಿಕೆಯನ್ನು ಬೇರ್ಪಡಿಸಿ ವೆಲ್‌ ಸ್ಪನ್‌ ಎಂಟರ್‌ಪ್ರೈಸಸ್‌ಗೆ ವರ್ಗಾಯಿಸಲಾಗಿತ್ತು ಪ್ರತಿ 20 ಷೇರು ವೆಲ್‌ಸ್ಪನ್‌ ಕಾರ್ಪ್ ಷೇರಿಗೆ ರೂ10ರ ಮುಖಬೆಲೆಯ ಒಂದು ಷೇರನ್ನು ನೀಡಲಾ ಗಿದೆ. ಈ ಷೇರು 11ರಿಂದ ಮುಂಬೈ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್‌ ಷೇರು
*ಶ್ರೀನೂಜ್‌ ಅಂಡ್‌ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ ಷೇರಿಗೆ 17ನೇ ಜುಲೈ ನಿಗದಿತ ದಿನವಾಗಿದೆ; 15ರಿಂದ ಬೋನಸ್‌ ಷೇರು ನಂತರದ ವಹಿವಾಟು ಆರಂಭವಾಗಲಿದೆ.

*ಎಸ್‌ಎಂಇ ವಿಭಾಗದ ಕವಿತಾ ಫ್ಯಾಬ್ರಿಕ್ಸ್ ಲಿ. ಕಂಪೆನಿ ವಿತರಿಸಲಿರುವ 2:1ರ ಬೋನಸ್‌ ಷೇರಿಗೆ 21ನೇ ಜುಲೈ ನಿಗದಿತ ದಿನವಾಗಿದೆ.

*ಇಂಡಿಯಾ ಇನ್ಫೊಟೆಕ್‌ ಸಾಫ್‌್ಟವೇರ್‌ ಲಿ. ಕಂಪೆನಿಯು ತನ್ನ ರೂ1ರ ಮುಖಬೆಲೆ ಷೇರಿಗೆ ಬೋನಸ್‌ ಷೇರು ವಿತರಣೆಯನ್ನು 21ರಂದು ಪರಿಶೀಲಿಸಲಿದೆ.

ಹಕ್ಕಿನ ಷೇರು ವಿತರಣೆ
*ಶ್ರೀರಾಂ ಇಪಿಸಿ ಲಿ. ಕಂಪೆನಿಯು ಜು. 15ರಂದು ಹಕ್ಕಿನ ಷೇರು ವಿತರಣೆಯನ್ನು ಪರಿಶೀಲಿಸಲಿದೆ.

*ಲಕ್ಷ್ಮಿ ವಿಲಾಸ್‌ ಲಿ. ಕಂಪೆನಿಯು ಇದೇ 16 ರಂದು ತಾನು ವಿತರಿಸಲಿರುವ ಹಕ್ಕಿನ ಷೇರಿನ ಗಾತ್ರ ಮತ್ತು ವಿತರಣೆಯ ನಿಯಮ, ಅನುಪಾತ, ಪ್ರೀಮಿಯಂ ಮುಂತಾದವನ್ನು ನಿರ್ಧರಿಸಲಿದೆ.

ವಹಿವಾಟಿನಿಂದ ಹಿಂದಕ್ಕೆ
ಪಿರಮಲ್‌ ಗ್ಲಾಸ್‌ ಲಿಮಿಟೆಡ್‌ ಕಂಪೆನಿಯು ಇದೇ 28ರಿಂದ ಷೇರು ವಿನಿಮಯ ಕೇಂದ್ರದ ವಹಿವಾಟಿನಿಂದ ಹಿಂದೆ ಸರಿಯಲಿದೆ. ಈ ಡಿ ಲೀಸ್ಟಿಂಗ್‌ ಪ್ರಕ್ರಿಯೆಯ ಕಾರಣ ಇದೇ 21ರಿಂದ ಷೇರು ವಿನಿಮಯ ಕೇಂದ್ರದ ವಹಿವಾಟಿನಿಂದ ಸ್ಥಗಿತಗೊಳ್ಳಲಿದೆ. ಷೇರು ಹೊಂದಿರುವವರು ಷೇರನ್ನು ಹಿಂದಿರುಗಿಸಲಿಚ್ಚಿಸಿದಲ್ಲಿ ಮುಂದಿನ ಒಂದು ವರ್ಷದವರೆಗೂ ಪ್ರತಿ ಷೇರಿಗೆ ರೂ140ರಂತೆ ಹಿಂಕೊಳ್ಳಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT