ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕದ ಭಾರಿ ಏರಿಳಿತ

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿನ ಸೋಮವಾರದ ವಹಿವಾಟು ಉಬ್ಬರ ಇಳಿತಗಳ ವೇಗಕ್ಕೆ ಕನ್ನಡಿ ಹಿಡಿದಿದೆ. ಅಂದು ದಿನದ ಮಧ್ಯಂತರದಲ್ಲಿ ಸಂವೇದಿ ಸೂಚ್ಯಂಕ 600ಕ್ಕೂ ಹೆಚ್ಚಿನ ಅಂಶಗಳ ಇಳಿಕೆ ತೋರಿ ಮತ್ತೆ ಏರಿಕೆ ಕಂಡು ಅಂತ್ಯದಲ್ಲಿ 166 ಅಂಶಗಳ ಕುಸಿತದಿಂದ ಕೊನೆಗೊಂಡಿತು.

ಈ ರೀತಿಯ ರಭಸದ ಚಟುವಟಿಕೆ ಯಲ್ಲಿ ಸ್ತಳೀಯ ವಿತ್ತೀಯ ಸಂಸ್ಥೆಗಳು ಭಾರಿ ಹೂಡಿಕೆ ಮಾಡಿ ಅವಕಾಶ ಲಾಭ ಪಡೆದುಕೊಂಡಿವೆ. ಅಂದು ₨900 ಕೋಟಿಗಳಷ್ಟು ಹೂಡಿಕೆಯನ್ನು ಸ್ಥಳೀಯ ವಿತ್ತೀಯ ಸಂಸ್ಥೆಗಳು ಮಾಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಗ್ರೀಸ್‌ನಲ್ಲಿನ ಗೊಂದಲದ ಕಾರಣ ಮಾರಾಟದ ಹಾದಿ ಹಿಡಿದು ₨700 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿವೆ. ಅಂದು ಪ್ರಮುಖ ಕಂಪೆನಿಗಳು ಮಧ್ಯಂತರದಲ್ಲಿ ಭಾರಿ ಇಳಿಕೆ ಕಂಡಿದ್ದವು. ಅಂತರರಾಷ್ಟ್ರೀಯ ಅವಲಂಬನೆ ಈ ರೀತಿ ಪ್ರಭಾವ ಬೀರುತ್ತದೆ. ಗ್ರೀಸ್‌ನ ಆರ್ಥಿಕ ಹಿನ್ನಡೆಯು ಭಾರತದ ಮೇಲೆ ಪರೋಕ್ಷ ಪರಿಣಾಮ ಬೀರಬಹುದು.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 280 ಅಂಶಗಳ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚಂಕವನ್ನು 183 ಅಂಶ ಹಾಗೂ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 179 ಅಂಶ ಏರಿಕೆ ಕಾಣುವಂತೆ ಮಾಡಿದೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ಈ ವಾರ ₨1 ಸಾವಿರ ಕೋಟಿಗೂ ಹೆಚ್ಚಿನ ಹೂಡಿಕೆ ಮಾಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ₨256 ಕೋಟಿ ಬೆಲೆ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳಮೌಲ್ಯ  ₨103 ಲಕ್ಷ ಕೋಟಿಯಲ್ಲಿತ್ತು.

ಇಂದ್ರಪ್ರಸ್ಥ ಗ್ಯಾಸ್ ಲಿ.ಗೆ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬಾಡಿ, 2010ರ ಏಪ್ರಿಲ್‌ನಲ್ಲಿ ನೀಡಿದ್ದ ಬೆಲೆ ಕಡಿತ ಆದೇಶ ಆ ಕಂಪೆನಿಯ ಷೇರಿನ ಬೆಲೆಯಲ್ಲಿ ಅತೀವ ಕಡಿತವನ್ನುಂಟು ಮಾಡಿತ್ತು.  ಅಂದು ಷೇರಿನ             ಬೆಲೆ ₨315ರಿಂದ ₨170ರವರೆಗೂ ಕುಸಿದು ನಂತರ ₨229  ರಲ್ಲಿ ಕೊನೆಗೊಂಡಿತ್ತು. 

ಈ ಆದೇಶವನ್ನು ಕಂಪೆನಿ ನ್ಯಾಯಾ ಲಯದಲ್ಲಿ ಪ್ರಶ್ನಿಸಿತ್ತು.  ದೆಹಲಿ ಉಚ್ಚ ನ್ಯಾಯಾಲಯವು ಕಂಪೆನಿಯ ಪರ ತೀರ್ಪನ್ನು ನೀಡಿತ್ತು. ಅದರ ವಿರುದ್ಧ ನಿಯಂತ್ರಣ ಸಂಸ್ಥೆ ಸಲ್ಲಿಸಿದ ಮೇಲ್ಮನವಿ ಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕಾರಣ ಬುಧವಾರ ಷೇರಿನ ಬೆಲೆ ₨486ರವರೆಗೂ ಏರಿಕೆ ಕಂಡು ₨455ರಲ್ಲಿ ಕೊನೆಗೊಂಡಿದೆ.

ಜೆಎಸ್‌ಡಬ್ಲ್ಯು ಕಂಪೆನಿ ವೈವಿಧ್ಯ ಮಯ ಕಾರಣಗಳಿಂದ ಕಳೆದೊಂದು ವರ್ಷದ ಗರಿಷ್ಠ ಮಟ್ಟವಾದ ₨334 ರಿಂದ ₨83.30ಕ್ಕೆ ಶುಕ್ರವಾರ ಕುಸಿದಿದೆ. ಇದು ವಾರ್ಷಿಕ ಕನಿಷ್ಠ ಮಟ್ಟವಾಗಿದೆ. ಶುಕ್ರವಾರ ಸಂಜೆ ಕಂಪೆನಿ ತನ್ನ ಪ್ರಕಟಣೆಯಲ್ಲಿ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ      ಶೇ 38ರಷ್ಟು ಹೆಚ್ಚಿನ ಕಚ್ಚಾ ಉಕ್ಕನ್ನು ಉತ್ಪಾದಿಸಿದೆ ಎಂದಿದೆ. ಇದು ಷೇರಿನ ಬೆಲೆಯಲ್ಲಿ ಚೇತರಿಕೆ ಕಾಣುವಂತೆ ಮಾಡುವುದೇ ಎಂಬುದನ್ನು ಕಾದು ನೋಡಬೇಕು.

ಮ್ಯಾಗಿ ರಪ್ತು: ನೆಸ್ಲೆ ಇಂಡಿಯಾ ಮ್ಯಾಗಿ ಯನ್ನು ಇತರೆ ದೇಶಗಳಿಗೆ ರಪ್ತು ಮಾಡುವುದಕ್ಕೆ ಮುಂಬೈ ಹೈಕೋರ್ಟ್ ಅವಕಾಶ ನೀಡಿದೆ. ಈ ತೀರ್ಪಿನ ಪ್ರಭಾವ ಬುಧವಾರ ನೆಸ್ಲೆ ಷೇರು ಬೆಲೆಯಲ್ಲಿ ಮಿಂಚು ಸಂಚರಿಸುವಂತೆ ಮಾಡಿ ₨6,490ರವರೆಗೂ ಏರಿಕೆ ಕಂಡಿತು. ನಂತರ ₨6,140ರಲ್ಲಿ ಕೊನೆಗೊಂಡಿತು.

ಕೋಟಕ್ ಮಹೀಂದ್ರ ಬ್ಯಾಂಕ್  ಬೋನಸ್ ಷೇರು ವಿತರಣೆಗೆ ದಿನ ಪ್ರಕಟಿಸಿದೆ. ಅಲ್ಲದೆ, ವಿದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆ ಮಿತಿಯನ್ನು ಶೇ 55 ಕ್ಕೆ ಹೆಚ್ಚಿಸಲು ಅನುಮತಿ ಪಡೆದು ಕೊಂಡಿದೆ. ಇದು ಕಂಪೆನಿಯ ಷೇರು ಚೇತರಿಕೊಳ್ಳಲು ಕಾರಣವಾಗಿದೆ.
ಸಟ್ಲೇಜ್ ಟೆಕ್ಸ್‌ಟೈಲ್ಸ್ ಆ್ಯಂಡ್ ಇಂಡಸ್ಟ್ರೀಸ್, ಬಿರ್ಲಾ ಟೆಕ್ಸ್‌ಟೈಲ್ಸ್ ಮಿಲ್ಸ್ ಕಂಪೆನಿಯನ್ನು ಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರ  ಪರಿಣಾಮ ಕಂಪೆನಿ ಷೇರಿನ ಬೆಲೆ ₨502ರ ಗರಿಷ್ಠ ಮಟ್ಟಕ್ಕೆ ಜಿಗಿಯುವಂತಾಯಿತು.

ಈ ಬೆಳವಣಿಗೆ ಕಂಪೆನಿಯ ಷೇರಿನ ಬೆಲೆಯನ್ನು ಕಳೆದೊಂದು ತಿಂಗಳಲ್ಲಿ ₨336ರ ಹಂತದಿಂದ ₨502ರವರೆಗೆ ಏರಿಕೆ ಕಾಣುವಂತೆ ಮಾಡಿತಾದರೂ ಈ ವಾರಾಂತ್ಯದಲ್ಲಿ  ಷೇರಿನ ಬೆಲೆ ₨478ರಲ್ಲಿ ಕೊನೆಗೊಂಡಿದೆ. ಹೊಸ ಷೇರು: ದೆಹಲಿ, ಜೈಪುರ ಮತ್ತು ಮಧ್ಯಪ್ರದೇಶ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿ ರುವ ಕ್ಯಾಪ್‌ಫಿನ್ ಇಂಡಿಯಾ ಜುಲೈ 3ರಿಂದ ಬಿಎಸ್‌ಇ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ದೆಹಲಿ ಮತ್ತು ಲೂಧಿಯಾನ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾ ಗುತ್ತಿರುವ ಸಾಟಿಯಾ ಇಂಡಸ್ಟ್ರೀಸ್ ಲಿ., ಅಹಮದಾಬಾದ್‌ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗು ತ್ತಿರುವ ನೋಬಲ್ ಪೋಲಿಮರ್ಸ್ ಲಿ., ಜುಲೈ 7 ರಿಂದ ಬಿಎಸ್‌ಇನ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.

ಐ ಇನ್ಫೋಟೆಕ್, ಕ್ಯಾಲಿ ಫೋರ್ನಿಯಾ ಸಾಫ್ಟ್ ವೇರ್ ಕಂಪೆನಿ ಲಿ., ಎಫ್.ಜಿ.ಪಿ.ಲಿ., ಗ್ರಾವಿಟಿ ಇಂಡಿಯಾ ಲಿ., ಇಂಡ್ ಬ್ಯಾಂಕ್ ಹೌಸಿಂಗ್ ಲಿ., ಮೊನ್ನೆಟ್ ಇಂಡಸ್ಟ್ರೀಸ್, ರೇನ್ ಬೋ ಡೆನಿಮ್‌ಗಳೂ ಸೇರಿ ಒಟ್ಟು 29 ಕಂಪೆನಿಗಳನ್ನು ಬಿಎಸ್‌ಇ ಜುಲೈ 7 ರಿಂದ ಟಿ ಗುಂಪಿಗೆ ವರ್ಗಾಯಿಸಲಿದೆ.

ಸ್ಯಾಸ್ಕಿನ್ ಕಮ್ಯುನಿ ಕೇಶನ್ ಟೆಕ್ನಾಲಜೀಸ್ ಟೆಂಡರ್ ಆಫರ್ ಮೂಲಕ ₨260ರಂತೆ ಷೇರು ಹಿಂಕೊಳ್ಳುವುದಕ್ಕೆ ಮುಂದಾಗಿದೆ. ಇದಕ್ಕೆ ಜುಲೈ 7 ನಿಗದಿತ ದಿನ.

ಬೋನಸ್ ಷೇರು: ಕೋಟಕ್ ಮಹೀಂದ್ರ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿ., ಮನ್ ವಿಜಯ್ ಡೆವಲಪ್‌ಮೆಂಟ್ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ ಜುಲೈ 9 ನಿಗದಿತ ದಿನ. ಪಿಎಂಸಿ ಫಿನ್ ಕಾರ್ಪ್ ಸಹ 9ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ: ಪ್ರಿಸಿಶನ್ ವೈರಸ್ ಲಿ.,  ಷೇರಿನ ಮುಖಬೆಲೆಯನ್ನು ₨ 10 ರಿಂದ ₨5ಕ್ಕೆ ಸೀಳಲಿದೆ.  ಅಲಂಕಿತ್ 1 ರಂದು ಷೇರಿನ ಬೆಲೆಯನ್ನು ₨10 ರಿಂದ ₨2ಕ್ಕೆ ಸೀಳಲು ತೀರ್ಮಾನಿಸಲಿದೆ.

ವಾರದ ವಿಶೇಷ
ಆರ್ಥಿಕ ಸಾಕ್ಷರತೆ ಸಾಧನೆ ಎಂಬುದು ನಿರಂತರವಾಗಿ ನಡೆಯುತ್ತಿರಬೇಕು.  ಜಾಗತಿಕ ಮಟ್ಟದಲ್ಲಿ ಬೆಳವಣಿಗೆಗಳು ವಿಭಿನ್ನವಾಗಿದ್ದು, ಪ್ರತಿಯೊಂದಕ್ಕೂ ಮಹತ್ವವಿರುತ್ತದೆ.  ಯಾವುದೋ ಒಂದು ಅಂಶದ ಮೇಲೆ ನಿರ್ಧರಿಸುವುದಕ್ಕಿಂತ ವಾಸ್ತವಾಂಶ ಅರಿತು, ಸಂದರ್ಭಕ್ಕೆ, ಅಗತ್ಯಕ್ಕೆ ತಕ್ಕಂತೆ ನಿರ್ಧರಿಸಿದಲ್ಲಿ ಯಶಸ್ಸು ಸಾಧ್ಯ.

ಹೂಡಿಕೆದಾರರಲ್ಲಿ ಸಾಮಾನ್ಯವಾಗಿ ದೀರ್ಘಕಾಲೀನ ಯೋಜನೆಗಳತ್ತ ಒಲವು ಹೆಚ್ಚು. ಇವು ನೀಡುವ ಲಾಭದ ಇಳುವರಿಯನ್ನು ಅಲ್ಪಕಾಲೀನ ಅವಧಿಯಲ್ಲಿ ಪಡೆದರೂ, ಸದಾ ದೀರ್ಘಕಾಲೀನ ಚಿಂತನೆಗೆ ಒಟ್ಟು ನೀಡಲಾಗುವುದು. ಈಕ್ವಿಟಿ ಪೇಟೆ ಗರಿಷ್ಠ ಮಟ್ಟದಲ್ಲಿದ್ದಾಗ ಅಲ್ಪಕಾಲೀನ ಮತ್ತು ಕನಿಷ್ಠ ಮಟ್ಟದಲ್ಲಿರುವಾಗ ದೀರ್ಘಕಾಲೀನ ಹೂಡಿಕೆ ಮಾಡುವುದು ಸರಿ. 

ಅಂತರರಾಷ್ಟ್ರೀಯ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕರ್  ಮಾರ್ಗನ್ ಸ್ಟಾನ್ಲಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಈಕ್ವಿಟಿ ಹೂಡಿಕೆ ಶೇ11 ರಷ್ಟು ಆದಾಯ ಗಳಿಸಿಕೊಟ್ಟರೆ, 20 ವರ್ಷಗಳಲ್ಲಿ ಶೇ 12.9ರ ಆದಾಯ ಗಳಿಕೆಯಾಗಿದ್ದು, ಹತ್ತು ವರ್ಷದ ಹೂಡಿಕೆ ಶೇ17ರಷ್ಟು ಆದಾಯ ಗಳಿಸಿಕೊಟ್ಟಿದೆ. ಕೇವಲ ಒಂದಂಶ ಮತ್ತು ಒಂದು ವಿಶ್ಲೇಷಣೆಯನ್ನು ಆಧರಿಸಿ ನಿರ್ಧರಿಸುವುದು ಸರಿಯಲ್ಲ. ಪೇಟೆಯ ಚಲನೆಯನ್ನು ಆಧರಿಸಿ ಹೂಡಿಕೆಯ ಅವಧಿಯನ್ನು ನಿರ್ಧರಿಸಿದರೆ ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT