ಕೆರೂರ: ಮಂಗಳವಾರದ ಇಲ್ಲಿನ ಸಂತೆಯಲ್ಲಿ ಕೊತ್ತಂಬರಿ ಸೊಪ್ಪು ಬೆಲೆ ಕಳೆದುಕೊಂಡ ಕಾರಣ ಸಂತೆಗೆ ಸೊಪ್ಪು ತಂದ ಬೆಳೆಗಾರರು ಸಪ್ಪೆ ಮೋರಿ ಹಾಕಿಕೊಂಡು ಮನೆಗೆ ಹೋಗಬೇಕಾಯಿತು.
ಕೂಗಿ ಕರೆದರೂ ಸೊಪ್ಪು ಕೊಳ್ಳುವವರೇ ಇಲ್ಲವಾದರು. ದಟ್ಟ ಕಟ್ಟನ್ನು ಕೇವಲ ₹3 ಕ್ಕೆ ಕೊಡುತ್ತೇವೆಂದರೂ ವ್ಯಾಪಾರವಾಗಲಿಲ್ಲ. ತಾಜಾ ತರಕಾರಿ ವ್ಯಾಪಾರಕ್ಕೆ ಈ ಸಂತೆ ಹೆಸರುವಾಸಿ. ಹೀಗಾಗಿ ಮೂರು–ನಾಲ್ಕು ವಾರಗಳಿಂದ ಬೇರೆ ಬೇರೆ ಊರುಗಳಿಂದಲೂ ಬೆಳೆಗಾರರು ಸೊಪ್ಪು ತರುತ್ತಿದ್ದಾರೆ.
ಸಂತೆಗೆ ಭಾರಿ ಪ್ರಮಾಣದಲ್ಲಿ ಸೊಪ್ಪು ಬಂದಿದೆ. ಬೇರೆ ಬೇರೆ ಭಾಗಗಳಿಂದ ವಾಹನಗಳಲ್ಲಿ ರಾಶಿಗಟ್ಟಲೆ ಸೊಪ್ಪು ತರಲಾಗಿದೆ. ಇದರಿಂದ ಬೆಲೆ ಕುಸಿಯಿತು ಎಂದು ವರ್ತಕ ರಾಜೇಸಾಬ್ ಹೇಳಿದರು.
ಗುಂಟೆ ಬೆಳೆ: ಈ ಹಿಂದೆ ಕೊತ್ತಂಬರಿ ಸೊಪ್ಪಿಗೆ ಬೆಲೆ ಇದ್ದ ಕಾರಣ ಪಟ್ಟಣ ಹಾಗೂ ಪಟ್ಟಣದ ಸುತ್ತಮುತ್ತ ಗುಂಟೆಯಲ್ಲಿ ಜನರು ಸೊಪ್ಪು ಬೆಳೆಯ ತೊಡಗಿದ್ದಾರೆ. ಇದು ಕೂಡ ಮಾರುಕಟ್ಟೆಗೆ ಆವಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಕಡಿಮೆ ಬೆಲೆಗೆ ಸಿಕ್ಕರೂ ಹೆಚ್ಚು ಸೊಪ್ಪು ತೆಗೆದುಕೊಂಡು ಹೋಗಿ ಏನು ಮಾಡಲು ಸಾಧ್ಯ? ಬೇರೆ ತರಕಾರಿಯಂತೆ ಇದನ್ನು ಹೆಚ್ಚು ಬಳಸಲು ಸಾಧ್ಯವಿಲ್ಲ ಎಂದು ಗೃಹಿಣಿ ಸುಜಾತಾ ಹೇಳಿದರು.
‘ ನಸುಕಿನ್ಯಾಗ ಎದ್ದ ಸೊಪ್ಪ ಕಿತ್ತ ಆಳೀನ ಪಗಾರಾನೂ ಆಗೂದಿಲ್ರೀ.ಬಂದಷ್ಟ ಬರ್ಲಿ ಅಂತ ಮಾರಾಕ ಕುಂತೀನಿ ನೋಡ್ರಿ.ನಮ್ಮ ರೈತರ ಜೀವ ನಾ ಬಾಳ ಕೆಟ್ಟ ಐತ್ರಿ, ಏನ್ಮಾಡುದ್ರೀ’ ಫಕೀರ ಬೂದಿಹಾಳದ ಅಲ್ಲಿಸಾಬ್ ನೋವು ತೋಡಿಕೊಂಡರು.