ಕೆರೂರ: ಅಧ್ಯಾತ್ಮ, ಯೋಗ ನಿಷ್ಠೆಗಳಿಂದ ಸಮಾಜದ ಸ್ವಾಸ್ಥ್ಯ ನಿರ್ಮಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾಪುರುಷರಲ್ಲಿ ಸದ್ಗುರು ಬ್ರಹ್ಮಾನಂದ ಪರಮಹಂಸರು ಅಗ್ರಗಣ್ಯರು. ಶ್ರೀಗಳ ಜಾತ್ರಾ ಮಹೋತ್ಸವ ಇದೇ 31 ರಂದು ನಡೆಯಲಿದೆ.
ಬ್ರಹ್ಮಾನಂದ ಪರಮ ಹಂಸರು ಗುಜರಾತ್ನ ಶಿವಬಡೋಚಾ ಗ್ರಾಮದ ಗುರುರಾಮ ಪ್ರಸಾದ ಹಾಗೂ ದೇವ ಜಾನಕಿ ದಂಪತಿಯ ಪುತ್ರರು. ಬಾಲ್ಯದಲ್ಲೇ ಅಧ್ಯಾತ್ಮದತ್ತ ಆಸಕ್ತಿ ಬೆಳೆಸಿಕೊಂಡರು. ಲೌಕಿಕ ಬದುಕಿನ ಕಷ್ಟ, ಕಾರ್ಪಣ್ಯಗಳಿಂದ ಮುಕ್ತಿ ಬಯಸಿ ಸಂಸಾರ ತ್ಯಜಿಸಿದ ಅವರು, ದೇಶ ಸಂಚಾರದೊಂದಿಗೆ ಡಾಕೋರ ಪಟ್ಟ ಣಕ್ಕೆ ಬಂದರು. ಅಲ್ಲಿ ಕೃಷ್ಣ ದರ್ಶನ ಪಡೆದು ಗಂಗಾನದಿಯಲ್ಲಿ ಸ್ನಾನಗೈದು ಬಂದಾಗ ಅಲ್ಲಿನ ಭಕ್ತ ಸಮೂಹಕ್ಕೆ ದೈವಿಕ ಸ್ವರೂಪದಂತೆ ಗೋಚರಿಸಿದರು.
ಸಂಚಾರ ಮುಂದುವರಿಸಿದ ಅವರು ನರಗುಂದ ತಾಲ್ಲೂಕು ಭೈರನಹಟ್ಟಿ ಗ್ರಾಮಕ್ಕೆ ಬಂದು ಅಲ್ಲಿ ಭಕ್ತರಿಗೆ ಧರ್ಮ ಬೋಧನೆ ಮಾಡಿದರು. ಮುಂದೆ ರಡ್ಡೇರ್ ನಾಗನೂರ ನಂತರ ಬದಾಮಿ ತಾಲ್ಲೂಕ ಗೋವನಕೊಪ್ಪದಲ್ಲಿ ತಮ್ಮ ಅಧ್ಯಾತ್ಮ ಶಕ್ತಿಯಿಂದ ಭಕ್ತರನ್ನು ಆಶೀರ್ವದಿಸಿದರು. ನಂತರ ತಮ್ಮ ಇಡಿ ಬದುಕನ್ನು ಸಮಾಜ ಸೇವೆಗೆ ಮುಡುಪಾಗಿಟ್ಟರು. ಇದೇ 31ರಂದು ಗೋವನಕೊಪ್ಪದಲ್ಲಿ ನಡೆಯಲಿರುವ ಗುರು ಬ್ರಹ್ಮಾನಂದ ಪರಮಹಂಸರ ಜಾತ್ರೆ ನಿಮಿತ್ತ ಪ್ರತಿನಿತ್ಯ ಪ್ರವಚನ ಹಾಗೂ ವಚನ ಸಂಗೀತ ಕಾರ್ಯಕ್ರಮ ಜರುಗಲಿವೆ.
31ರ ರಂದು ಗುರು ಬ್ರಹ್ಮಾನಂದರ ಜೀವನ ಚರಿತ್ರೆ ಕುರಿತ ‘ಬ್ರಹ್ಮಾ ನಂದ’ ಗ್ರಂಥವನ್ನು ಗದುಗಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಬಿಡುಗಡೆ ಮಾಡುವರು. ಕಿಲ್ಲಾ ತೊರಗಲ್ನ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತ ಲಿಂಗ ಸ್ವಾಮೀಜಿ. ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಶಿವಯೋಗಿ ದೇವರು ಸಾನ್ನಿಧ್ಯ ವಹಿಸುವರು. ಸಚಿವ ಎಸ್.ಆರ್. ಪಾಟೀಲ, ಎಚ್.ಕೆ. ಪಾಟೀಲ, ಗೃಹ ಮಂಡಳಿ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ, ಸಂಸದ ಪಿ. ಸಿ ಗದ್ದಿಗೌಡ್ರ. ಶಾಸಕ ಬಿ ಬಿ ಚಿಮ್ಮನಕಟ್ಟಿ. ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಮತ್ತಿತರರು ಪಾಲ್ಗೊಳ್ಳುವರು.
ಬೆಳಿಗ್ಗೆ 6 ಗಂಟೆಗೆ ಬೈರನಹಟ್ಟಿ ಶಾತವೀರ ಪಾಠಶಾಲೆಯ ವಟುಗಳಿಂದ ರುದ್ರಾಭಿಷೇಕ ನಂತರ 10ಕ್ಕೆ ಪಾಲಕಿ ಉತ್ಸವ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ , ಸಂಜೆ ಗೋಧೂಳಿ ಮುಹೂರ್ತಕ್ಕೆ ಬ್ರಹ್ಮಾನಂದರ ಭವ್ಯ ರಥೋತ್ಸವ ನಡೆಯಲಿದೆ. ರಾತ್ರಿ 10. 30 ಕ್ಕೆ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.