ಕೆರೂರ: ಉತ್ತರ ಕರ್ನಾಟಕದ ರೊಟ್ಟಿ ಈ ವರ್ಷ ಗ್ರಾಹಕರ ಪಾಲಿಗೆ ತೀವ್ರ ಕಹಿಯಾಗುವ ಸಾಧ್ಯತೆ ಇದೆ. ಕೆರೂರ ಮಾರುಕಟ್ಟೆಯಲ್ಲಿ ಕ್ವಿಂಟಲ್ ಜೋಳಕ್ಕೆ ದಾಖಲೆ ಎಂಬಂತೆ ₹ 4,300 ಗರಿಷ್ಠ ದರಕ್ಕೆ ಮಾರಾಟವಾಯಿತು.
ಕೇವಲ ಒಂದು ತಿಂಗಳ ಹಿಂದಷ್ಟೇ ಕ್ವಿಂಟಲ್ಗೆ ಕೇವಲ ₹ 2000 ರಷ್ಟಿದ್ದ ಜೋಳದ ಬೆಲೆ, ಹಿಂಗಾರು ಹಂಗಾಮಿನ ಉತ್ತರಿ, ಹಸ್ತ, ಚಿತ್ತಿ, ಸ್ವಾತಿ ಮುಂತಾದ ಪ್ರಮುಖ ಮಳೆಗಳು ಸುರಿಯದೇ ಎರಡು ಸಾವಿರದ ಆಸುಪಾಸಿನಲ್ಲಿದ್ದ ಜೋಳದ ದರ ಒಮ್ಮೆಲೆ ಏರಿದೆ.
ಇಂದಿನ ಸಂತೆ ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಜೋಳವು ದಾಖಲೆ ಎನ್ನುವಂತೆ ಕ್ವಿಂಟಲ್ಗೆ ₹ 4300 ರಷ್ಟು ಮಾರಾಟ ಕಂಡು ಖರೀದಿಗೆ ಬಂದ ಗ್ರಾಹಕರನ್ನು ಹುಬ್ಬೇರಿಸುವಂತೆ ಮಾಡಿತು ಎನ್ನುತ್ತಾರೆ ಕಿಲ್ಲಾಪೇಟೆ ವರ್ತಕ ಚನ್ನಪ್ಪ ಶೆಟ್ಟರು.
ಎರಡು ವಾರದ ಹಿಂದಷ್ಟೇ ₹ 2500ಕ್ಕೂ ಚೀಲ ಗುತ್ತಿಗಿ ಜ್ವಾಳಾ ತಗೋಡಿಂದ್ಯಾ. ಯಾವ್ದು ಮಳಿ ಬಾರದ್ದಕ್ಕ ಸಂತಿ ಬೇಡಿಕಿಗ್ ತಕ್ಹಂಗ್ ಜ್ವಾಳಾನ ಬರ್ತಿಲ್ಲ. ಇವತ್ ಬಂದಿದ್ದ ಕೆಲವಂದಿಷ್ಟ ಚೀಲದಾಗ ಉತ್ತಮ ಜ್ವಾಳಕ್ಕ ನಾನ ಕ್ವಿಂಟಲ್ಗೆ ₹ 4300 ತಗೋಂಡೀನಿ. ಇನ್ನೂ ರೇಟ್ ಎಲ್ಲಿ ಮಟಾ ಹೋಗತ್ ಹೇಳಾಕ ಬರಾಂಗಿಲ ಎಂದು ಜೋಳ ವರ್ತಕ ಹಳಪೇಟೆ ಶಿವಪ್ಪ ಗುರುಬಸಪ್ಪ ಯಂಡಿಗೇರಿ ಹೇಳಿದರು.
ಜ್ವಾಳದ್ದ ರೇಟ್ ಹಿಂಗ ಏರಿದ್ರ ರೊಟ್ಟಿ ತಿಂದ ಜೀವಕ್ಕ ಭಾಳಾ ತ್ರಾಸ್ ಆಕೈತ್ರೀ. ನಮಗ ರೊಟ್ಟಿ ಇಲ್ದ ಗತಿ ಇಲ್ಲ. ಕೆ.ಜಿ ಗೆ ₹ 43ರಷ್ಟು ಏರಿದ್ರ ನಮ್ಮಂತ ಬಡವರು ಹ್ಯಾಂಗ್ರೀ ಬದುಕೋದು ಎನ್ನುತ್ತಾರೆ ಬಡ ಗ್ರಾಹಕ ಬಸವರಾಜ ಮಠಪತಿ. ಈ ಸಲ ಮಳೆಯಾಶ್ರಿತ ಪ್ರದೇಶದಲ್ಲಿ ಜೋಳ ಬೆಳೆಯುವ ಸ್ಥಿತಿಯಲ್ಲಿಲ್ಲ.
ಬೇಸಿಗೆ ಹಂಗಾಮಿಗೆ ಒಂದು ವೇಳೆ ನೀರಾವರಿ ಜೋಳ ಮಾರುಕಟ್ಟೆಗೆ ಬಾರದೇ ಹೋದ್ರೆ, ಕ್ವಿಂಟಲ್ಗೆ ₹ 5 ಸಾವಿರಕ್ಕೂ ಹೆಚ್ಚು ದರ ಏರುವ ಲಕ್ಷಣಗಳಿವೆ ಎಂಬ ಲೆಕ್ಕಾಚಾರವನ್ನು ವರ್ತಕ ಪ್ರವೀಣ ಹುಂಡೇಕಾರ ಹೇಳಿದರು. ಜೋಳ, ಕಡಲೆ, ಕುಸುಬಿ ಮೊದಲಾದ ಬೆಳೆಗಳಿಂದ ನಳನಳಿಸಬೇಕಿದ್ದ ಹಿಂಗಾರು ಎರೆಮಣ್ಣಿನ ಪ್ರದೇಶ ಪ್ರಸಕ್ತ ವರ್ಷ ಇಳಿದ ಪರಿಣಾಮ ಉತ್ತರ ಕರ್ನಾಟಕದ ಎಲ್ಲೆಡೆ ಕರಿಮಣ್ಣಿನ ಹೊಲಗಳು ಒಣಗಿ ನಿಂತಿವೆ.
ಈಗಲೇ ಎಲ್ಲೆಡೆ ಕಣ್ಣಿಗೆ ರಾಚುತ್ತಿದ್ದರೆ. ಇತ್ತ ರೊಟ್ಟಿಗೆ ಬೇಕಾದ ಜ್ವಾಳದ ದರ ಎಣಿಕೆಗೆ ಸಿಗದಂತೆ ಏರುತ್ತಾ ಹೋಗುತ್ತಿದೆ