ಕೊಟ್ಟೂರು: ಪಟ್ಟಣದ ಮೂಲಕ ಹಾದು ಹೋಗಿರುವ ಶಿರಸಿ- ತೋರಣಗಲ್ಲು ಹೆದ್ದಾರಿಯಲ್ಲಿ ಕಿತ್ತು ಹೋದ ಡಾಂಬರು, ದೊಡ್ಡ ದೊಡ್ಡ ಗುಂಡಿಗಳು, ಮೇಲೆದ್ದ ಕಬ್ಬಿಣ ರಾಡುಗಳಿಂದ ಜನರು ರೋಸಿಹೋಗಿದ್ದಾರೆ.
ಪಟ್ಟಣದಿಂದ 8 ಕಿ.ಮೀ. ದೂರದ ಮತ್ತಿಹಳ್ಳಿ ಕ್ರಾಸ್ನಿಂದ ಮಲ್ಲನಾಯಕನಹಳ್ಳಿ ಕ್ರಾಸ್ ವರೆಗೂ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇಂತಹ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಒಂದು ಸಾಹಸ ಎಂಬಂತಾಗಿದೆ. ಪಟ್ಟಣದಿಂದ ಹರಪನಹಳ್ಳಿಗೆ ಹೋಗುವ ಮಾರ್ಗದಲ್ಲಿ 8 ಕಿ.ಮೀ. ಸಾಗಲು ಅರ್ಧ ಗಂಟೆಗೂ ಹೆಚ್ಚು ಕಾಲ ಹಿಡಿಯುತ್ತದೆ.
ಈ ರಸ್ತೆ ಹಾಳಾಗಿ ವರ್ಷಗಳೇ ಕಳೆದಿದ್ದರೂ ದುರಸ್ತಿ ಭಾಗ್ಯ ಕಾಣಲಿಲ್ಲ. ರಸ್ತೆಯುದ್ದಕ್ಕೂ ಡಾಂಬರು ಕಿತ್ತು ದೊಡ್ಡ ತಗ್ಗುಗಳು ಉಂಟಾಗಿವೆ. ಚಪ್ಪರದಹಳ್ಳಿ ಬಳಿಯ ರೈಲ್ವೆ ಮೇಲ್ಸೇತುವೆ ಅಡಿಯಲ್ಲಿ ರಸ್ತೆಗೆ ಹಾಕಿರುವ ಕಾಂಕ್ರೀಟ್ ಕಬ್ಬಿಣ ರಾಡುಗಳು ಕಿತ್ತು ಬಂದಿವೆ.
ಈ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವ ಕೂಡ್ಲಿಗಿ ತಾಲ್ಲೂಕಿನ 5 ಕಿ.ಮೀ. ದುರಸ್ತಿಗೆ ₹ 5 ಕೋಟಿ, ಹೂವಿನಹಡಗಲಿ ತಾಲ್ಲೂಕಿಗೆ ₹ 18 ಕೋಟಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕಿಗೆ ₹ 9 ಕೋಟಿಗಳು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನೆಯೊಂದರಲ್ಲಿ ಒಟ್ಟು ₹ 32 ಕೋಟಿ ಪ್ಯಾಕೇಜ್ ಹಣ ಮಂಜೂರಾಗಿದೆ. ಇದರ ಕಾಮಗಾರಿ ಟೆಂಡರ್ ಅನ್ನು ಬಳ್ಳಾರಿಯ ಗುತ್ತಿಗೆದಾರರು ಪಡೆದಿದ್ದಾರೆ. ಕಾಮಗಾರಿ ಆರಂಭಿಸಿಲು ಆದೇಶ ನೀಡಿ ತಿಂಗಳಾದರೂ ಗುತ್ತಿಗೆದಾರರು ಮಾತ್ರ ಕಾಮಗಾರಿ ಆರಂಭಿಸಲು ಮುಂದಾಗಿಲ್ಲ.
‘ಕಾಮಗಾರಿ ಆರಂಭಿಸಲು ಎಸ್.ಎಚ್.ಡಿ .ಪಿ ಅನಮೋದನೆ ನೀಡಿದ್ದಾರೆ. ಆದೇಶ ನೀಡಿದ ಅವಧಿಯೊಳಗೆ ಅವರು ಕಾಮಗಾರಿ ಆರಂಭಿಸದಿದ್ದರೆ ಇಲಾಖೆ ಮುಂದಿನ ಕ್ರಮ ಕೈಗೊಳ್ಳುತ್ತದೆ. ಎಸ್.ಎಚ್ .ಡಿ .ಪಿ ಇಲಾಖೆಯ ಕಾಮಗಾರಿ ಇದಾಗಿರುವುದರಿಂದ ನಾವು ಇದರ ಮೇಲುಸ್ತವಾರಿಯನ್ನಷ್ಟೇ ನೋಡಿಕೊಳ್ಳುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ತಿಮ್ಮಪ್ಪ ಹೇಳುತ್ತಾರೆ.
ಕಾಮಗಾರಿ ಆರಂಭಿಸಲು ಅನುಮೋದನೆ ಸಿಕ್ಕಿದ್ದರೂ ಗುತ್ತಿಗೆದಾರರು ಮಾಡುತ್ತಿರುವ ವಿಳಂಬಕ್ಕೆ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಹಾಳಾಗಿರುವ ರಸ್ತೆ ಕೂಡಲೇ ದುರಸ್ತಿಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ನಾಗರಿಕರ ಒತ್ತಾಯಿಸಿದ್ದಾರೆ.