ವಿಜಯಪುರ(ದೇವನಹಳ್ಳಿ): ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿರುವ ಸೊಪ್ಪು–ತರಕಾರಿ ಬೆಳೆ ಬೆಳೆಯುವುದು ಇಳಿಮುಖವಾಗಿದೆ.
ಬೇಸಿಗೆಯಿಂದಾಗಿ ಸೊಪ್ಪು–ತರಕಾರಿ ಬೆಳೆಯಲು ರೈತರು ಹಿಂಜರಿಯುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚು ರೈತರು ತರಕಾರಿ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಕೊಳವೆ ಬಾವಿಯಿಂದ ನೀರು ಬರುತ್ತಿರುವ ರೈತರು ಮಾತ್ರ ಸೊಪ್ಪು–ತರಕಾರಿ ಬೆಳೆಯುತ್ತಿದ್ದು, ಉತ್ಪಾದನೆ ಕುಸಿದಿದೆ.
ಇದರಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆ ಆಗುತ್ತಿರುವ ಹಿನ್ನೆಲೆ ಸೊಪ್ಪು–ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರ ಕೈ ಸುಡುತ್ತಿದೆ.
₹80 ಇದ್ದ ಒಂದು ಕೆ.ಜಿ ಬೀನ್ಸ್ ₹180ಕ್ಕೆ ಏರಿಕೆಯಾಗಿದೆ. ನವೀಲುಕೋಲು ₹40 ರಿಂದ ₹70, ಮೂಲಂಗಿ ₹40 ರಿಂದ ₹90, ಕ್ಯಾರೆಟ್ ₹40 ರಿಂದ ₹75, ಬಟಾಣಿ ₹100 ರಿಂದ ₹150, ಬೀಟ್ ರೂಟ್ ₹50 ರಿಂದ 70,
ಬೆಂಡೆಕಾಯಿ, ಪಡುವಲಕಾಯಿ, ತೊಂಡೆಕಾಯಿ, ಎಲೆಕೋಸು, ಬದನೆಕಾಯಿ, ಈರೇಕಾಯಿ ಸೇರಿದಂತೆ ಹಲವು ತರಕಾರಿಗಳಲ್ಲಿ ಪ್ರತಿ ಕೆ.ಜಿಗೆ ₹20 ಏರಿಕೆಯಾಗಿದೆ.
ತರಕಾರಿ ಜೊತೆ ಹಸಿರು ಸೊಪ್ಪುಗಳ ಬೆಲೆಯೂ ಹೆಚ್ಚಾಗಿದೆ. ವಾರದ ಹಿಂದೆ ಕೇವಲ ₹15 ರೂಪಾಯಿ ಇದ್ದ ಮೆಂತ್ಯ ಸೊಪ್ಪಿನ ಕಟ್ಟು ಈಗ ₹40, ದನಿಯಾಸೊಪ್ಪು ₹10ರಿಂದ ₹20, ಪಾಲಕ್ ಸೊಪ್ಪು ₹15ರಿಂದ ₹25, ದಂಟಿನ ಸೊಪ್ಪು ₹15 ರಿಂದ ₹25, ಸಬ್ಬಕ್ಕಿ ಸೊಪ್ಪು ₹15 ರಿಂದ ₹40ಕ್ಕೆ ಏರಿಕೆ ಆಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸೊಪ್ಪು–ತರಕಾರಿ ಖರೀದಿಗೆ ₹1ಸಾವಿರ ಖರ್ಚಾಗುತ್ತಿದೆ. ಹೀಗಾಗಿ ತರಕಾರಿಯನ್ನು ಕಾಲು ಕೆ.ಜಿ ಯಂತೆ ಖರೀದಿಸುತ್ತಿದ್ದೇವೆ
–ಮಂಜುಳಮ್ಮ, ಗ್ರಾಹಕಿ
ತರಕಾರಿ ಆವಕ ಇಳಿಕೆಯಾಗಿದೆ. ಹೆಚ್ಚು ದಿನ ಸಂಗ್ರಹ ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆಯಿಂದ ಗ್ರಾಹಕರು ಹೆಚ್ಚಾಗಿ ಖರೀದಿ ಮಾಡುತ್ತಿಲ್ಲ. ಇದರಿಂದ ನಷ್ಟ ಉಂಟಾಗುತ್ತಿದೆ.