ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಾಲೇಜು ಕಟ್ಟಡದಿಂದ ಬಿದ್ದು ಬಿಬಿಎ ವಿದ್ಯಾರ್ಥಿ ಸಾವು

Published 31 ಜನವರಿ 2024, 15:45 IST
Last Updated 31 ಜನವರಿ 2024, 15:45 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಾಲೇಜೊಂದರ ಕಟ್ಟಡದ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ವಿಘ್ನೇಶ್ (19) ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

‘ತಮಿಳುನಾಡಿನ ವಿಘ್ನೇಶ್, ಪೋಷಕರ ಜೊತೆ ಬೇಗೂರಿನಲ್ಲಿ ವಾಸವಿದ್ದರು. ಕಾಲೇಜಿನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು’ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹೇಳಿದರು.

‘ಮಂಗಳವಾರ ಕಾಲೇಜಿಗೆ ಬಂದಿದ್ದ ವಿಘ್ನೇಶ್, ತರಗತಿಗಳಿಗೆ ಹಾಜರಾಗಿದ್ದರು. ಮಧ್ಯಾಹ್ನ ಕಾಲೇಜಿನ ಕ್ಯಾಂಟಿನ್‌ನಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಸಂಜೆ ಸಹಪಾಠಿಗಳು ಮನೆಗೆ ಹೋಗಿದ್ದರು. ಆದರೆ, ವಿಘ್ನೇಶ್ ಕಾಲೇಜಿನಲ್ಲಿದ್ದರು.’

‘ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಾಲೇಜು ಕಟ್ಟಡದ 6ನೇ ಮಹಡಿಗೆ ಹೋಗಿದ್ದ ವಿಘ್ನೇಶ್, ಅಲ್ಲಿಂದ ಜಿಗಿದಿದ್ದರು. ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಕಾರಣ ತಿಳಿದುಬಂದಿಲ್ಲ. ವಿಘ್ನೇಶ್ ಸಾವಿನ ಬಗ್ಗೆ ಪೋಷಕರು ಹೇಳಿಕೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ರಸ್ತೆ ಅಪಘಾತ: ಬೈಕ್‌ ಸವಾರ ಸಾವು

ಬೆಂಗಳೂರು: ನೈಸ್ ರಸ್ತೆಯ ದೊಡ್ಡಬೆಲೆ ಟೋಲ್ ಗೇಟ್‌ ಸಮೀಪದಲ್ಲಿ ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಜಯರಾಮ್ (43) ಮೃತಪಟ್ಟಿದ್ದಾರೆ.

‘ಕುಂದಾಪುರದ ಜಯರಾಮ್, ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬನ್ನೇರುಘಟ್ಟದಲ್ಲಿ ವಾಸವಿದ್ದರು. ಮೈಸೂರು ಮುಖ್ಯರಸ್ತೆ ಕಡೆಯಿಂದ ಹೊಸೂರು ರಸ್ತೆ ಕಡೆಗೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಕಂಟೇನರ್ ಲಾರಿಯನ್ನು ಚಾಲಕ ನಿರ್ಲಕ್ಷ್ಯದಿಂದ ಅತೀ ವೇಗದಲ್ಲಿ ಚಲಾಯಿಸಿದ್ದ. ಇದರಿಂದಾಗಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿತ್ತು. ಬೈಕ್ ಸಮೇತ ಉರುಳಿಬಿದ್ದಿದ್ದ ಜಯರಾಮ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಪ್ರಜ್ಞೆ ತಪ್ಪಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಜಯರಾಮ್ ಮೃತಪಟ್ಟಿರುವುದಾಗಿ ಹೇಳಿದರು.’

‘ಕಂಟೇನರ್ ಲಾರಿ (ಕೆಎ 51 7173) ಚಾಲಕನಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಕಟೌಟ್ ಉರುಳಿ ಬಿದ್ದು ಗಾಯ‍

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಠಾಪನೆ ನಿಮಿತ್ತ ನಗರದ ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಳವಡಿಸಿದ್ದ ಕಟೌಟ್ ಉರುಳಿ ಬಿದ್ದಿದ್ದು, ಮೂವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಸ್ಥಳೀಯರು ಹಾಗೂ ಕೆಲ ಮುಖಂಡರು, ರಸ್ತೆ ಪಕ್ಕದ ಸ್ಥಳದಲ್ಲಿ ಶ್ರೀರಾಮ ಕಟೌಟ್ ಹಾಕಿಸಿದ್ದರು. ಹಲವು ದಿನವಾದರೂ ಕಟೌಟ್ ತೆರವು ಮಾಡಿರಲಿಲ್ಲ. ಅದನ್ನು ತೆರವು ಮಾಡುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಮುಖಂಡರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT