ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿಯ ಯುವಕ ಚೇತನ್ ಕುಮಾರ್ ಅವರು ಹಸೆಮಣೆ ಏರುವುದಕ್ಕೂ ಮುನ್ನ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
ಸಂತೇಮರಹಳ್ಳಿಯಲ್ಲಿ ಚೇತನ್ ಕುಮಾರ್ ಅವರ ಮದುವೆ ನಡೆಯುತ್ತಿತ್ತು. ಧಾರೆ ಮುಹೂರ್ತಕ್ಕೂ ಮುನ್ನ ಮದುಮಗನ ಧಿರಿಸಿನಲ್ಲಿಯೇ ಸಂತೇಮರಹಳ್ಳಿಯ ಮತಗಟ್ಟೆ ಸಂಖ್ಯೆ 60ಕ್ಕೆ ಬಂದ ವರ, ಮತದಾನ ಮಾಡಿ ನಂತರ ಸಂಸಾರ ಜೀವನಕ್ಕೆ ಕಾಲಿಟ್ಟರು.
ಮತದಾನ ಪ್ರಮಾಣ ಹೆಚ್ಚಿಸುವುದು ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಸ್ಥಾಪಿಸಿದ್ದ ವಿಶೇಷ ಮತಗಟ್ಟೆಗಳು ಗಮನಸೆಳೆದವು.
ಸಖಿ ಸೌರಭ, ಸಾಂಪ್ರದಾಯಿಕ, ಅನ್ನದಾತ, ಅಂಗವಿಕಲ, ಯುವ ಸೌರಭ, ಹಸಿರು, ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ಮತಗಟ್ಟೆಗಳು ಜನರನ್ನು ಆಕರ್ಷಿಸಿದವು.
ವಿಶೇಷ ಮತಗಟ್ಟೆ ಕೇಂದ್ರಗಳಲ್ಲಿ ಸೆಲ್ಫಿ ಪಾಯಿಂಟ್, ಫೋಟೊ ಪಾಯಿಂಟ್ಗಳಿದ್ದವು. ಯುವ ಮತದಾರರು, ಹಕ್ಕುಚಲಾಯಿಸಿದ ನಂತರ ಶಾಯಿ ಹಾಕಿದ ತೋರು ಬೆರಳನ್ನು ತೋರಿಸಿ ಫೋಟೊ ಕ್ಲಿಕ್ಕಿಸಿಕೊಂಡರು.
ಮತಗಟ್ಟೆಗಳಿಗೆ ಬರುವ ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಗಾಲಿ ಕುರ್ಚಿ, ರ್ಯಾಂಪ್ ಸೌಲಭ್ಯ ಕಲ್ಪಿಸಲಾಗಿತ್ತು. ದೃಷ್ಟಿ ದೋಷ ಉಳ್ಳವರಿಗಾಗಿ ಬ್ರೈಲ್ ಲಿಪಿಯ ಡಮ್ಮಿ ಬ್ಯಾಲೆಟ್ ಪೇಪರ್, ಸಹಾಯಕರ ಸೌಲಭ್ಯ, ಭೂತ ಕನ್ನಡಿಯ ವ್ಯವಸ್ಥೆ ಮಾಡಲಾಗಿತ್ತು.
ಚಾಮರಾಜನಗರದ ಸೋಮಣ್ಣ ಲೇಔಟ್ನಲ್ಲಿ ಉತ್ತಮ ರಸ್ತೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳು ಕಲ್ಪಿಸಿಲ್ಲ ಎಂದು ಆರೋಪಿಸಿ 80ಕ್ಕೂ ಹೆಚ್ಚು ನಿವಾಸಿಗಳು ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ನಗರಸಭೆ ಆಯುಕ್ತ ರಾಮದಾಸ್ ಮತ್ತು ಅಧಿಕಾರಿಗಳು ಬಡಾವಣೆಗೆ ಬಂದು, ನೀತಿ ಸಂಹಿತೆ ಮುಕ್ತಾಯಗೊಂಡ ಒಂದು ತಿಂಗಳ ಒಳಗಾಗಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಆ ಬಳಿಕ ನಿವಾಸಿಗಳು ಮತಗಟ್ಟೆಗೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.