ಮೂಡುಬಿದಿರೆ: ಧಾರ್ಮಿಕ ಶ್ರದ್ಧೆ ಇದ್ದಾಗ ಮಾತ್ರ ದೇಶ ಉಳಿಯುತ್ತದೆ. ಜೈನ ಸಮಾಜದ ಜನರು ವೈಯಕ್ತಿಕ ಚಿಂತನೆ, ಉತ್ತಮ ಆಚಾರಗಳಿಂದ ಭಿನ್ನವಾಗಿ ಗುರುತಿಸಿಕೊಳ್ಳಬೇಕು. ಬಂಧನಗಳನ್ನು ಕಳಚಿಕೊಂಡು, ಕರ್ಮಗಳನ್ನು ಶುದ್ಧೀಕರಣ ಮಾಡಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯದ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ಭಗವಾನ್ ಮಹಾವೀರ ಸ್ವಾಮಿಜನ್ಮಕಲ್ಯಾಣ ಮಹೋತ್ಸವವದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಸಾತ್ವಿಕ ಆಹಾರ, ಸ್ವಚ್ಛ ಚಿಂತನೆಯಿಂದ ಮಾನವ ಧರ್ಮವು ಸುಂದರಗೊಳ್ಳುತ್ತದೆ. ಸರಳವಾದ ಜೀವನಕ್ರಮ, ಕರ್ಮಗಳ ಬಂಧನಗಳಿಂದ ಮುಕ್ತಿ ಪಡೆದ ಮಹಾವೀರ ಸ್ವಾಮಿಯ ಜೀವನದ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ರಾಜಸ್ಥಾನದ ಜೈಪುರದಲ್ಲಿ ಸುಮಾರು 6ಲಕ್ಷ ವೆಚ್ಚದಲ್ಲಿ ತಯಾರಾದ 5 ಅಡಿಯ ಮಹಾವೀರ ಸ್ವಾಮಿಯ ಜಿನಬಿಂಬ ಹಾಲು ಬಿಳಿಯ ವರ್ಣ ಹೊಂದಿದ್ದು, ಇದು ಶಾಂತಿಯ ಸಂಕೇತವನ್ನು ಸೂಚಿಸುತ್ತದೆ. ಜೈನಧರ್ಮದ ಸಿರಿತನ ಇಮ್ಮಡಿಗೊಳಿಸುವ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ ಎಂದರು.
ಹೊರನಾಡಿನ ಜಯಶ್ರೀ ಧರಣೇಂದ್ರಜೈನ್ ಮತ್ತು ಬಳಗದವರಿಂದ ಜಿನಭಕ್ತಿಗಾಯನ ನಡೆಯಿತು. ಉತ್ತರ ಭಾರತದಿಂದ ತರಿಸಿದ ಐದು ಅಡಿ ಎತ್ತರದ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು.
ಮಾಜಿ ಸಚಿವ ಅಭಯಚಂದ್ರಜೈನ್, ಚೌಟರ ಅರಮನೆಯ ಕುಲದೀಪ ಎಂ., ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ಕುಮಾರ್, ಆದರ್ಶ್ಜೈನ್, ಜೈನ್ ಮಿಲನ್ ರಾಜ್ಯ ಘಟಕದ ಅಧ್ಯಕ್ಷ ಯುವರಾಜ್ ಭಂಡಾರಿ, ಪಡ್ಯಾರಬೆಟ್ಟ ಜೀವಂಧರ್ ಕುಮಾರ್ ಭಾಗವಹಿಸಿದ್ದರು. ಮುನಿರಾಜ ರೆಂಜಾಳ ನಿರೂಪಿಸಿದರು.
ಆಳ್ವಾಸ್ ವಿದ್ಯಾಗಿರಿಯಲ್ಲಿ ಶನಿವಾರ ಭಗವಾನ್ ಮಹಾವೀರ ಮೂರ್ತಿಗೆ ದ್ರವ್ಯಾಭಿಷೇಕದ ಬಳಿಕ ಮಹಾಮಂಗಳಾರತಿ ನಡೆಯಿತು