ಪುತ್ತೂರು: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಮಹತೋಭಾರ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ 31ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಶನಿವಾರ ಆರಂಭಗೊಂಡಿತು.
ಕಂಬಳ ಸಮಿತಿ ಪದಾಧಿಕಾರಿಗಳು, ಕಂಬಳ ಕೋಣಗಳ ಯಜಮಾನರು ಹಾಗೂ ಕಂಬಳ ಪ್ರೇಮಿಗಳು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಸಾಮೂಹಿಕವಾಗಿ ಪೂಜೆ ನೆರವೇರಿಸಿ, ದೇವಳದ ಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಕಂಬಳ ಕರೆಗೆ ಬಂದು ಉದ್ಘಾಟನಾ ಕಾರ್ಯಕ್ರಮ ನಡೆಸಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು, ಕಂಬಳ ಸಮಿತಿಯವರು ಪುತ್ತೂರು ಮಹಾಲಿಂಗೇಶ್ವರ ದೇವಳ, ಧರ್ಮಸ್ಥಳ ಕ್ಷೇತ್ರ ಹಾಗೂ ಕುಕ್ಕೆಸುಬ್ರಹ್ಮಣ್ಯ ದೇವಳದಲ್ಲಿ ಪ್ರಾರ್ಥಿಸಿ ತಂದಿದ್ದ ಪ್ರಸಾದವನ್ನು ಕಂಬಳ ಕರೆಗೆ ಹಾಕಿ, ತೆಂಗಿನ ಕಾಯಿ ಒಡೆಯುವ ಮೂಲಕ ಕೂಟಕ್ಕೆ ಚಾಲನೆ ನೀಡಿದರು.
ಕಂಬಳ ಕ್ರೀಡೆಯನ್ನು ಬೆಂಗಳೂರಿನಲ್ಲಿ ಆಯೋಜಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಕೆಲಸ ಪುತ್ತೂರಿನಿಂದ ಆಗಿದೆ. ಇಲ್ಲಿನ ಶಾಸಕರು ಈ ಕಾರ್ಯ ಮಾಡಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ಕಂಬಳ ಒಂದು ಸಾಹಸ ಕ್ರೀಡೆಯಾಗಿದ್ದು, ಇದನ್ನು ಯಾರೇ ನಡೆಸಿದರೂ ಮುಳಿಯ ಸಂಸ್ಥೆಯ ವತಿಯಿಂದ ಸಹಕಾರ ನೀಡಲಾಗುವುದು ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಆಂಟಿನಿ ಪ್ರಕಾಶ್ ಮೊಂತೆರೊ, ಪುತ್ತೂರಿನ ವೈದ್ಯ ಸುರೇಶ್ ಪುತ್ತೂರಾಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ಕುಮಾರ್ ಭಂಡಾರಿ, ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ.ಧರ್ಮಪಾಲ ಗೌಡ, ಕೆಯ್ಯೂರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚೆನ್ನಪ್ಪ ರೈ ದೇರ್ಲ, ಸುದಾನ ದೇವಾಲಯದ ಧರ್ಮಗುರು ವಿಜಯ ಹಾರ್ವಿನ್, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಉದ್ಯಮಿ ಉಮೇಶ್ ನಾಡಾಜೆ, ವೈದ್ಯ ರಾಜಾರಾಮ್ ಕೆ.ಬಿ., ಪುತ್ತೂರು ಜುಮಾ ಮಸೀದಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್, ಪ್ರಗತಿಪರ ಕೃಷಿಕ ಮಾರಪ್ಪ ಶೆಟ್ಟಿ ಬೈಲು ಗುತ್ತು, ಆರ್ಯಾಪು ಸಿ.ಎ.ಬ್ಯಾಂಕ್ ಅಧ್ಯಕ್ಷ ಎಚ್.ಮಹಮ್ಮದ್ ಅಲಿ, ರಮಾನಾಥ್ ವಿಟ್ಲ, ಎ.ಕೆ.ಜಯರಾಮ ರೈ, ಉದ್ಯಮಿ ಉಮ್ಮರ್ ಕೋಡಿಂಬಾಡಿ, ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ ಸಮಿತಿ ಕೋಶಾಧಿಕಾರಿ ಹೆಗ್ಡೆಹಿತ್ಲು ಸೀತಾರಾಮ ಶೆಟ್ಟಿ, ವಿದ್ಯಾಮಾತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭಾಗ್ಯೇಶ್ ರೈ, ಸುಧೀರ್ ಶೆಟ್ಟಿ ಕಂಪ, ಉದ್ಯಮಿ ಅಜಿತ್ ಶೆಟ್ಟಿ, ಉಪ್ಪಿನಂಗಡಿ ಸಹಸ್ರರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಕಬಡ್ಡಿ ಪಟು ಪ್ರಶಾಂತ್ ರೈ ಕೈಕಾರ, ಕಂಬಳ ಸಮಿತಿ ಸಂಚಾಲಕ ಕೆ.ವಸಂತಕುಮಾರ್ ರೈ ದುಗ್ಗಳ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ. ವಂದಿಸಿದರು. ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.
ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಕನೆಹಲಗೆ, ಹಗ್ಗಹಿರಿಯ, ನೇಗಿಲು ಹಿರಿಯ, ಅಡ್ಡಹಲಗೆ, ಹಗ್ಗಕಿರಿಯ ಮತ್ತು ನೇಗಿಲು ಕಿರಿಯ ಎಂಬ ಆರು ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದ್ದು, 176 ಜೋಡಿ ಕೋಣಗಳು ಸ್ಪರ್ಧೆಗೆ ಬಂದಿವೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.