ದಾವಣಗೆರೆ: ‘ಎರಡು ವರ್ಷದ ಹಿಂದಿನ ಮಾತು. ಮನೆಯಲ್ಲಿದ್ದ ಎರಡು ಆಕಳುಗಳಿಗೆ ಕಾಲು ಬಾಯಿ ಜ್ವರ ಬಾಧಿಸಿತ್ತು. ಮೇವು ಹಾಕಿದರೆ ಮುಟ್ಟುತ್ತಲೇ ಇರಲಿಲ್ಲ. ಪ್ರತಿ ದಿನವೂ ಗ್ಲೂಕೋಸ್ ಹಾಕಿಸುವುದು ಅನಿವಾರ್ಯವಾಗಿತ್ತು. ಅಗತ್ಯವಿದ್ದ ಔಷಧ ಊರಿನ ಪಶು ಚಿಕಿತ್ಸಾಲಯದಲ್ಲಿ ಲಭ್ಯವಿರಲಿಲ್ಲ. ನಗರದಲ್ಲಿನ ಔಷಧಾಲಯಗಳಿಗೆ ಎಡ ತಾಕುವುದನ್ನು ಬಿಟ್ಟರೆ ಬೇರೆ ದಾರಿಯೂ ಇರಲಿಲ್ಲ. ಚಿಕಿತ್ಸೆಗೆಂದೇ ಅಂದಾಜು ₹ 40 ಸಾವಿರ ಖರ್ಚು ಮಾಡಿದೆ. ಆದರೂ ಅವು ಬದುಕುಳಿಯಲಿಲ್ಲ. ₹ 1.17 ಲಕ್ಷ ಕೊಟ್ಟು ಅವುಗಳನ್ನು ಖರೀದಿಸಿದ್ದೆ. ಅಷ್ಟೂ ದುಡ್ಡು ನೀರಿನಲ್ಲಿ ಹೋಮ ಮಾಡಿದಂತಾಯಿತು’.....
ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿಯ ಮಂಜಣ್ಣ ಹೀಗೆ ಹೇಳುತ್ತಿರುವಾಗ ಅವರ ಮೊಗದ ಮೇಲೆ ಬೇಸರದ ಛಾಯೆ ಆವರಿಸಿತ್ತು. ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಲೇ ಅವರು ಮಾತು ಮುಂದುವರಿಸಿದರು.
‘ಹಸುಗಳಿಗೆ ಗರ್ಭಧಾರಣೆಯ ಚುಚ್ಚುಮದ್ದು (ಇಂಜೆಕ್ಷನ್) ಕೊಡಿಸಿ ನನಗಂತೂ ಸಾಕಾಗಿ ಹೋಗಿದೆ. ಒಂದೇ ಒಂದು ಆಕಳಿಗೂ ಗರ್ಭ ಕಟ್ಟಿಲ್ಲ. ವೈದ್ಯರನ್ನು ಕೇಳಿದರೆ ಈಗ ಬರುತ್ತಿರುವ ಇಂಜೆಕ್ಷನ್ಗಳೇ ಹೀಗೆ, ನಾವೇನು ಮಾಡೋದಪ್ಪಾ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅವರನ್ನು ದೂರಿ ಏನು ಪ್ರಯೋಜನ’ ಎಂದು ಹೇಳಿ ಕರುವಿಗೆ ಮೇವು ಹಾಕಲು ಮುಂದಾದರು.
‘ಹಿಂದಿನದ್ದನ್ನೆಲ್ಲಾ ಬಿಡಿ ಸರ್. ಈ ಎಳೆಗರುಗಳಿಗೆ ಹಾಕೋಕೆ ಜಂತು ಹುಳು ನಾಶಕ ಗುಳಿಗೆ ಬೇಕೆಂದರೂ ನಮ್ ದನದ ಆಸ್ಪತ್ರೆಯಲ್ಲಿ ಸಿಗ್ತಿಲ್ಲಾ. ಆರು ತಿಂಗಳಿಂದ ಕೇಳಿ ಕೇಳಿ ಸಾಕಾಗಿ ಕೊನೆಗೆ ನಾನೇ ಮೆಡಿಕಲ್ ಶಾಪ್ನಿಂದ ತಂದು ಹಾಕಿದೀನಿ. ಹಿಂದೆಲ್ಲಾ ಹಸುಗಳಿಗೆಂದೇ ಚಿಕ್ಕ ಬಾಟಲ್ಗಳಲ್ಲಿ ಜಂತು ಹುಳುವಿನ ಔಷಧ ಬರ್ತಿತ್ತು. ಈಗ ಅದೂ ಇಲ್ವಂತೆ’ ಎಂದು ಬೇಸರಿಸಿದರು.
ಮಂಜಣ್ಣನವರ ಮಾತುಗಳು ಜಿಲ್ಲೆಯ ಪಶು ಚಿಕಿತ್ಸಾಲಯಗಳ ವಾಸ್ತವ ಸ್ಥಿತಿ ಹಾಗೂ ಹೈನುಗಾರರ ಬವಣೆಯ ಮೇಲೆ ಬೆಳಕು ಚೆಲ್ಲುವಂತಿವೆ. ಮೂಕ ಜೀವಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ಪಶು ಚಿಕಿತ್ಸಾಲಯಗಳೇ ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ಅವುಗಳಿಗೇ ತುರ್ತು ಚಿಕಿತ್ಸೆ ದೊರೆಯಬೇಕಿದೆ!
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 157 ಪಶು ಚಿಕಿತ್ಸಾಲಯಗಳಿವೆ. ಒಂದೊಂದರದ್ದೂ ಒಂದೊಂದು ಬಗೆಯ ಕಥೆ–ವ್ಯಥೆ!
ಸಂತೇಬೆನ್ನೂರು ಸಮೀಪದ ದೇವರಹಳ್ಳಿಯಲ್ಲಿ ಹೆದ್ದಾರಿಗೆ ಹೊಂದಿಕೊಂಡಂತಿರುವ ಪಶು ಚಿಕಿತ್ಸಾಲಯ ಪಾಳು ಬಿದ್ದ ಸ್ಥಿತಿಯಲ್ಲಿದೆ. ಹೋಬಳಿ ಮಟ್ಟದ ಪಶು ಆಸ್ಪತ್ರೆಗಳು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವುದಕ್ಕೆ ಇದೊಂದು ನಿದರ್ಶನ. ಕೆಲವೆಡೆ ತುಂಬಾ ಹಳೆಯದಾದ ಕಟ್ಟಡಗಳಿದ್ದು ಸುಣ್ಣ–ಬಣ್ಣ ಕಾಣದೆ ವರ್ಷಗಳೇ ಉರುಳಿವೆ. ಇನ್ನೂ ಹಲವೆಡೆ ಆಸ್ಪತ್ರೆಯ ಸುತ್ತ ಕಾಂಪೌಂಡ್ಗಳಿಲ್ಲ. ಅಂತಹ ಆಸ್ಪತ್ರೆಗಳು ರಾತ್ರಿಯಾದರೆ ಕುಡುಕರ ತಾಣಗಳಾಗಿ ಮಾರ್ಪಡುತ್ತವೆ.
ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ನೆರವಾಗಲಿ ಎಂಬ ಉದ್ದೇಶದಿಂದ ಆಂಬುಲೆನ್ಸ್ಗಳನ್ನು ಒದಗಿಸಲಾಗಿದೆ. ಆದರೆ, ಅವುಗಳನ್ನು ನಿಲ್ಲಿಸುವುದಕ್ಕೆ ಸೂಕ್ತ ಶೆಡ್ ವ್ಯವಸ್ಥೆ ಇಲ್ಲ. ಅವು ದಿನವಿಡೀ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ದುಃಸ್ಥಿತಿ ಇದೆ. ಪೂರೈಕೆಯಾದ ಔಷಧಗಳು ಹಾಗೂ ಮೇವಿನ ಬೀಜಗಳನ್ನು ದಾಸ್ತಾನು ಇಡುವುದಕ್ಕೆ ಸುಸಜ್ಜಿತವಾದ ಕೊಠಡಿಗಳೂ ಇಲ್ಲ. ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆಗಳ ಸುತ್ತ ಸ್ವಚ್ಛತೆಯೂ ಮಾಯವಾಗಿದೆ.
ದಾವಣಗೆರೆ ನಗರ ವ್ಯಾಪ್ತಿಯ ಪಶು ಚಿಕಿತ್ಸಾಲಯಗಳು ಹೊರಗಿನಿಂದ ನೋಡುವುದಕ್ಕೆ ಚೆನ್ನಾಗಿಯೇ ಕಾಣುತ್ತವೆ. ಅವುಗಳ ಒಳಹೊಕ್ಕು ನೋಡಿದರೆ ನಿಜ ಬಣ್ಣ ಬಯಲಾಗುತ್ತದೆ. ದಾವಣಗೆರೆಯ ನಿಯಂತ್ರಿತ ಮಾರುಕಟ್ಟೆ ಆವರಣದಲ್ಲಿರುವ ಪಶು ಚಿಕಿತ್ಸಾಲಯದ ಹೊರ ಭಾಗದಲ್ಲಿ ಅಳವಡಿಸಿರುವ ಟೈಲ್ಸ್ಗಳು ಮೇಲಕ್ಕೆದ್ದಿವೆ. ಆವರಣವು ಬೀದಿ ನಾಯಿಗಳ ಆಶ್ರಯ ತಾಣವಾಗಿಯೂ ಬದಲಾಗಿದೆ. ನಗರ ವ್ಯಾಪ್ತಿಯ ಕಟ್ಟಡದ ಸ್ಥಿತಿಯೇ ಹೀಗಿದ್ದ ಮೇಲೆ ಗ್ರಾಮಾಂತರ ಭಾಗದಲ್ಲಿನ ಕಟ್ಟಡಗಳ ಸ್ಥಿತಿಯನ್ನು ಊಹಿಸುವುದೂ ಕಷ್ಟ.
ಸಿಬ್ಬಂದಿ ಕೊರತೆ: ಜಿಲ್ಲೆಯ ಎಲ್ಲಾ ಭಾಗದಲ್ಲೂ ಸಿಬ್ಬಂದಿ ಕೊರತೆ ಇದೆ. ಇದರಿಂದ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಯ ಕಾರ್ಯಭಾರ ಹೆಚ್ಚಿದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ದೊರೆಯದೆಯೇ ಅವು ಅಸುನೀಗಿದ ಉದಾಹರಣೆಗಳೂ ಇವೆ.
‘ನಮಗೆ ಸಮಯದ ಮಿತಿ ಇಲ್ಲ. ರೈತರು ಯಾವ ಸಂದರ್ಭದಲ್ಲಿ ಕರೆ ಮಾಡಿದರೂ ಅವರ ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತೇವೆ. ಸಿಬ್ಬಂದಿ ಕೊರತೆ ಇರುವುದರಿಂದ ಕಾರ್ಯಾಭಾರ ಹೆಚ್ಚಿದೆ. ದಾಖಲೆಗಳ ನಿರ್ವಹಣೆ, ಸಭೆ ಹೀಗೆ ನಿತ್ಯದ ಕೆಲಸಕ್ಕೂ ಅಡ್ಡಿಯಾಗುತ್ತದೆ. ಬರ ಇರುವುದರಿಂದ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ’ ಎಂದು ದಾವಣಗೆರೆಯ ನಿಯಂತ್ರಿತ ಮಾರುಕಟ್ಟೆ ಆವರಣದಲ್ಲಿರುವ ಪಶು ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಬಸವೇಶ್ವರ ಐನಳ್ಳಿ ಹೇಳಿದರು.
‘ಜಾನುವಾರಗಳ ಸಂಖ್ಯೆಗೆ ಹೋಲಿಸಿದರೆ ಪೂರೈಕೆಯಾಗುತ್ತಿರುವ ಔಷಧ ಕಡಿಮೆ ಇದೆ. ಜಂತು ನಾಶಕಗಳು ನೋವು ನಿವಾರಕ ಟಿಂಚರ್ ಬೇವಿನ ಎಣ್ಣೆ ಹತ್ತಿ ಹೀಗೆ ಚಿಕಿತ್ಸೆಗೆ ಅತ್ಯವಶ್ಯಕವಾಗಿ ಬೇಕಿರುವ ಔಷಧಗಳೇ ಲಭ್ಯವಿಲ್ಲ. ಇದರಿಂದ ರೈತರಿಗೂ ತೊಂದರೆಯಾಗುತ್ತಿದೆ. ಜಾನುವಾರುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ದುಬಾರಿ ದರ ನೀಡಿ ಮೆಡಿಕಲ್ ಶಾಪ್ಗಳಿಂದ ಔಷಧಗಳನ್ನು ಖರೀದಿಸಿ ಕೊಡುವುದು ಅನಿವಾರ್ಯವಾಗಿದೆ.–ಡಾ.ಬಸವೇಶ್ವರ ಐನಳ್ಳಿ ಮುಖ್ಯ ವೈದ್ಯಾಧಿಕಾರಿ ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.