ಹುಬ್ಬಳ್ಳಿ: ಹಗಲಿನ ವೇಳೆ ಮನೆ ಬಾಗಿಲು ಮುರಿದು ಕಳವು ಮಾಡುತ್ತಿದ್ದ ಮೂವರು ಅಂತರರಾಜ್ಯ ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ, ₹7.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಅಜ್ಮೀರ ಮತ್ತು ಬಿಲವಾಡ ಜಿಲ್ಲೆಯ ಅಲೆಮಾರಿ ಬಾಗಾರಿಯ ಜನಾಂಗದವರು ಬಂಧಿತ ಆರೋಪಿಗಳು.
ಬೆಳಗಾವಿಯ ಟಿಲಕವಾಡಿ ಹಾಗೂ ಹುಬ್ಬಳ್ಳಿ ಕೇಶ್ವಾಪುರ ಮತ್ತು ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲಿನ ವೇಳೆ ಮನೆ ಬಾಗಿಲು ಮುರಿದು ಕಳವು ಮಾಡಿರುವ ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರದ ಮೇಲೆ ಕೇಶ್ವಾಪುರ ಠಾಣೆ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ರಾಜಸ್ಥಾನಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದೆ.
'ಲೈಟ್ ಬಲೂನ್ ವ್ಯಾಪಾರ ಹಾಗೂ ಭಿಕ್ಷಾಟನೆಗೆ ಇವರು ರಾಜಸ್ಥಾನದಿಂದ ಹುಬ್ಬಳ್ಳಿಗೆ ಬಂದಿದ್ದರು. ಒಂದಿಬ್ಬರು ರಸ್ತೆ ಬದಿಯಲ್ಲಿ, ಟ್ರಾಫಿಕ್ ಸಿಗ್ನಲ್ನಲ್ಲಿ ಬಲೂನ್ ವ್ಯಾಪಾರ ಮಾಡಿದರೆ, ಉಳಿದವರು ಬಡಾವಣೆಗಳಲ್ಲಿ ಸುತ್ತಾಡಿ ಭಿಕ್ಷಾಟನೆ ಮಾಡುತ್ತಿದ್ದರು. ಬಡಾವಣೆಯಲ್ಲಿ ಸುತ್ತಾಡುವಾಗ ಎರಡು ಮೂರು ದಿನ ಯಾವುದಾದರೂ ಮನೆ ಬಾಗಿಲು ಹಾಕಿದ್ದರೆ, ಸಂಚು ರೂಪಿಸಿ ಕಳವು ಮಾಡುತ್ತಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್ಐಗಳಾದ ಬಾಬಾ ಎಂ., ಆರ್.ಎನ್. ಗುಡದರಿ, ಸಿಬ್ಬಂದಿಯಾದ ಎಚ್.ಎಂ. ಗುಳೇಶ, ಎಂ.ಡಿ. ಕಾಲವಾಡ, ವಿಠ್ಠಲ ಮಾದರ, ಆನಂದ ಪೂಜಾರ ಹಾಗೂ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.