ಹುಬ್ಬಳ್ಳಿ: ಒಂದೆಡೆ ತಾಪಮಾನ ಏರುಗತಿಯಲ್ಲಿದ್ದರೆ, ಮತ್ತೊಂದೆಡೆ ಕೆರೆಕುಂಟೆ ಬತ್ತುತ್ತಿವೆ. ರಾಜ್ಯದ ಜಾನುವಾರುಗಳಿಗೆ ಸದ್ಯಕ್ಕೆ 24 ವಾರ ಆಗುವಷ್ಟು ಮಾತ್ರ ಮೇವು ಲಭ್ಯವಿದೆ. ಸಕಾಲಕ್ಕೆ ಮಳೆಯಾಗದಿದ್ದರೆ, ಮೇವಿನ ಕೊರತೆ ಆಗಲಿದೆ.
ಬಹುತೇಕ ಕಡೆ ಮೇವಿನ ಬೀಜಗಳ ಮಿನಿ ಕಿಟ್ಗಳನ್ನು ಈಗಾಗಲೇ ವಿತರಿಸಿದ್ದರೂ ಮಳೆ, ನೀರಿನ ಕೊರತೆ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಹಸಿರು ಮೇವು ಬೆಳೆದಿಲ್ಲ. ಕೆಲ ದಿನಗಳಿಂದ ರಾಜ್ಯದ ಕೆಲ ಕಡೆ ಅಲ್ಪಸ್ವಲ್ಪ ಮಳೆಯಾಗಿದೆ. ಆದರೆ, ಸಮೃದ್ಧವಾಗಿ ಮೇವು ಬೆಳೆಯಲು ಇನ್ನೂ ಸಮಯ ಬೇಕು.
10 ಜಿಲ್ಲೆಗಳಲ್ಲಿ ಮೇವಿನ ಸಮಸ್ಯೆ: ಜನವರಿಯಿಂದ ಈವರೆಗೆ 7.63 ಲಕ್ಷ ಮೇವಿನ ಬೀಜದ ಕಿಟ್ಗಳನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ರೈತರಿಗೆ ವಿತರಿಸಿದೆ. ಇದರಿಂದ 4 ಲಕ್ಷ ಟನ್ ಮೇವು ಬೆಳೆಯುವ ನಿರೀಕ್ಷೆ ಇದೆ. ಮೇ ತಿಂಗಳ ವೇಳೆಗೆ ಉತ್ತಮ ಮಳೆ ಆಗದಿದ್ದರೆ, ಅಂದಾಜು 10 ಜಿಲ್ಲೆಗಳಲ್ಲಿ ಮೇವಿನ ಸಮಸ್ಯೆ ಆಗಬಹುದು.
‘ಧಾರವಾಡ, ಗದಗ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸದ್ಯ ನಾಲ್ಕೈದು ವಾರಗಳಿಗೆ ಆಗುವಷ್ಟು ಮಾತ್ರ ಮೇವು ದಾಸ್ತಾನಿದೆ. ಮುಂದಿನ ದಿನಗಳಲ್ಲಿ ಕೊರತೆ ತಲೆದೋರಬಹುದು’ ಎಂದು ಮೂಲಗಳು ತಿಳಿಸಿವೆ.
3.93 ಲಕ್ಷ ಮೇವಿನ ಬೀಜಗಳ ಮಿನಿ ಕಿಟ್ಗೆ ಬೇಡಿಕೆ: ‘ತುಮಕೂರು ಜಿಲ್ಲೆಯಲ್ಲಿ 1.8 ಲಕ್ಷ ಮೇವಿನ ಬೀಜಗಳ ಕಿಟ್ ವಿತರಿಸಲಾಗಿದೆ. ಹಾಸನ, ಮೈಸೂರು, ವಿಜಯಪುರ, ಧಾರವಾಡ, ಬೆಳಗಾವಿ, ಜಿಲ್ಲೆಗಳ ರೈತರಿಗೆ ಮೇವಿನ ಬೀಜಗಳ ಕಿಟ್ ವಿತರಿಸಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ರಾಜ್ಯಕ್ಕೆ ಒಂದು ವಾರಕ್ಕೆ 5.4 ಲಕ್ಷ ಟನ್ ಒಣ ಮೇವು ಬೇಕು. 132 ಲಕ್ಷ ಟನ್ ಮೇವು ಲಭ್ಯವಿದೆ. 3.93 ಲಕ್ಷ ಮೇವಿನ ಬೀಜಗಳ ಮಿನಿ ಕಿಟ್ಗೆ ಬೇಡಿಕೆ ಬಂದಿದ್ದು, ವಿತರಣೆಗೆ ಆದೇಶ ನೀಡಲಾಗಿದೆ. 16 ಜಿಲ್ಲೆಗಳಲ್ಲಿ ಅಗತ್ಯ ಮೇವು ಖರೀದಿ ಪ್ರಕ್ರಿಯೆ ನಡೆದಿದೆ’ ಎಂದರು.
ಧಾರವಾಡ ಜಿಲ್ಲೆಯಲ್ಲಿ ಇನ್ನೂ 12 ವಾರ ಸಾಕಾಗುವಷ್ಟು ಮೇವು ರೈತರ ಬಳಿ ಇದೆ. ರೈತರಿಗೆ ಮೇವು ನೀಡಲು ಮಾಧನಬಾವಿಯಲ್ಲಿ ಎರಡು ಟನ್ ಸಂಗ್ರಹ ಇದೆ. ಅಗತ್ಯಬಿದ್ದರೆ ಮೇವು ಖರೀದಿಗೆ ವ್ಯವಸ್ಥೆ ಮಾಡಲಾಗಿದೆ.ದಿವ್ಯಪ್ರಭು ಜಿಆರ್ಜೆ ಜಿಲ್ಲಾಧಿಕಾರಿ ಧಾರವಾಡ
ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಈ ಬಾರಿ ಮೆಕ್ಕೆಜೋಳ ಭತ್ತ ಸರಿಯಾಗಿ ಬೆಳೆದಿಲ್ಲ. ದನ ಕರು ಇದ್ದವರಿಗೆ ಮೇವು ಸಿಗುತ್ತಿಲ್ಲ. ಅದೇ ದೊಡ್ಡ ಚಿಂತೆಯಾಗಿದೆ.ಬಸವರಾಜ ಬೆಳವಟಗಿ ರೈತ ಹುಬ್ಬಳ್ಳಿ
18 ಮೇವು ಬ್ಯಾಂಕ್ ಆರಂಭ
ನಾಲ್ಕು ವಾರ ಅಥವಾ ಅದಕ್ಕೂ ಕಡಿಮೆ ಅವಧಿಗೆ ಮಾತ್ರ ಮೇವು ಲಭ್ಯ ಇರುವ ಜಿಲ್ಲೆಗಳಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸರ್ಕಾರ ಸೂಚಿಸಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಈಗಾಗಲೇ ಬಳ್ಳಾರಿ ವಿಜಯನಗರ ಗದಗ ಬೆಳಗಾವಿ ಮತ್ತು ಧಾರವಾಡದಲ್ಲಿ ಒಟ್ಟು 18 ಮೇವು ಬ್ಯಾಂಕ್ ಆರಂಭಿಸಿದೆ.
Cut-off box - ಅಂಕಿಅಂಶ 3 ಕೋಟಿ ರಾಜ್ಯದಲ್ಲಿನ ಜಾನುವಾರುಗಳು 1.14 ಕೋಟಿ ದನ ಕರು ಎಮ್ಮೆಗಳ ಸಂಖ್ಯೆ 2.49 ಕೋಟಿ ಟನ್ ವರ್ಷಕ್ಕೆ ಸರಾಸರಿ ಬೇಕಾಗುವ ಮೇವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.