ಕುಂದಗೋಳ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಿಂದ ಕುಂದಗೋಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿವೆ.
ಈ ಮಾರ್ಗದಲ್ಲಿ ನವಲಗುಂದ, ಗದಗಕ್ಕೆ ಹೋಗುವ ಬಸ್ಸುಗಳು ಸಂಚರಿಸುತ್ತವೆ. ರೈತರು ಟ್ರ್ಯಾಕ್ಟರ್ ಮೂಲಕ ವಿವಿಧ ಬೆಳೆಗಳನ್ನು ಸಾಗಿಸುವಾಗ ಜೋತು ಬಿದ್ದಿರುವ ತಂತಿಗಳು ಅಪಾಯ ತಂದೊಡ್ದುವ ರೀತಿಯಲ್ಲಿ ಬಾಗಿವೆ.
ಮನೆಯ ಪಕ್ಕದ ವಿದ್ಯುತ್ ಕಂಬಕ್ಕೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಯಾವುದೇ ಸಮಯದಲ್ಲಿ ಅಪಾಯ ತರಬಹುದು. ಸಮಸ್ಯೆಯನ್ನು ಹಲವು ಬಾರಿ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಆದರೂ ಪ್ರಯೋಜನವಾಗಿಲ್ಲ.
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ವಾಲಿರುವ ವಿದ್ಯುತ್ ಕಂಬಗಳು
ಗ್ರಾಮದಲ್ಲಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಹುತೇಕ ಬೀಳುವ ಹಂತದಲ್ಲಿವೆ. ಕಂಬಗಳು ಮುರಿಯುವ ಸ್ಥಿತಿ ತಲುಪಿ, ಕಬ್ಬಿಣದ ಸರಳು ಕಾಣುತ್ತಿವೆ. ಇದರಿಂದ ಮಕ್ಕಳು, ದನ-ಕರುಗಳಿಗೆ ಅಪಾಯವಾಗುವ ಸಾಧ್ಯತೆ ಇದ್ದು, ಆದಷ್ಟು ಬೇಗ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಹೊಸ ವಿದ್ಯುತ್ ಕಂಬಗಳನ್ನು ಹಾಕಬೇಕು.