ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಮೀಸಲಾತಿ ಮುಸ್ಲಿಮರಿಗೆ ಕೊಡುವುದು ನಿಲ್ಲಿಸಿ: ಶಾಸಕ ಅರವಿಂದ ಬೆಲ್ಲದ

Published 27 ಏಪ್ರಿಲ್ 2024, 8:14 IST
Last Updated 27 ಏಪ್ರಿಲ್ 2024, 8:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ಕೊಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಬಿಸಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂದು ರಾಜ್ಯ ಸರ್ಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿತ್ತು. ಆಯೋಗವು ಅದನ್ನು ತಿರಸ್ಕರಿಸಿ, ಮುಖ್ಯಕಾರ್ಯದರ್ಶಿಗೆ ನೋಟಿಸ್ ನೀಡಿದೆ’ ಎಂದರು.

‘ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಇದ್ದಾಗ ಮೀಸಲಾತಿಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು. ಪ್ರವರ್ಗ 2ಬಿಯಲ್ಲಿ ಮುಸ್ಲಿಮರಿಗೆ ಇದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದು ಪ್ರವರ್ಗ 3ಎ, 3ಬಿಗೆ ಹಂಚಿಕೆ ಮಾಡಿತ್ತು. ಅದನ್ನು ಈ ಸರ್ಕಾರ ನಿಲ್ಲಿಸಿರುವುದು ಖಂಡನೀಯ’ ಎಂದು ಹೇಳಿದರು.

‘ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡುವ ಕೆಟ್ಟ ಪದ್ಧತಿಗೆ ಕಾಂಗ್ರೆಸ್ ಸರ್ಕಾರ ನಾಂದಿ ಹಾಡಿದೆ. ಇದಕ್ಕೆ ಅಂತ್ಯ ಹಾಡುವ ಕಾಲ ಬಂದಿದೆ’ ಎಂದರು.

‘ಸದ್ಯ ಪ್ರವರ್ಗ–1ಕ್ಕೆ ಶೇ 4, ಪ್ರವರ್ಗ–2ಎಗೆ ಶೇ15, ಪ್ರವರ್ಗ 2ಬಿಗೆ ಶೇ 4, ಪ್ರವರ್ಗ 3ಎಗೆ ಶೇ 4 ಮತ್ತು 3ಬಿಗೆ ಶೇ 5ರಷ್ಟು ಮೀಸಲಾತಿ ಇದೆ. ಇದರಲ್ಲಿ ಒಟ್ಟಾರೆಯಾಗಿ ಮುಸ್ಲಿಮರಿಗೆ ಶೇ 23ರಷ್ಟು ಮೀಸಲಾತಿ ಸಿಗುತ್ತಿದೆ. ಹೆಸರಿಗೆ ಇದು ಒಬಿಸಿ ಮೀಸಲಾತಿಯಾಗಿದ್ದರೂ, ಮುಸ್ಲಿಮರು ಇದರ ಗರಿಷ್ಠ ಉಪಯೋಗ ಪಡೆಯುತ್ತಿದ್ದಾರೆ’ ಎಂದು ದೂರಿದರು.

‘ಮುಸ್ಲಿಮರಲ್ಲಿ ಜಾತಿ, ಮೇಲು –ಕೀಳು ಇಲ್ಲ. ಹೀಗಾಗಿ ಅವರಿಗೆ ಧರ್ಮ ಆಧಾರಿತ ಮೀಸಲಾತಿ ನೀಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದ್ದರಿಂದ ಮುಸ್ಲಿಮರಿಗೆ ಒಬಿಸಿಯಲ್ಲಿ ಮೀಸಲಾತಿ ನೀಡಬಾರದು. ಒಂದು ವೇಳೆ ಈ ಸರ್ಕಾರ ಇದನ್ನು ಸರಿಪಡಿಸದಿದ್ದರೆ ಮುಂದೆ ನಮ್ಮ ಸರ್ಕಾರ ಬಂದಾಗ ಈ ಅನ್ಯಾಯ ಸರಿಪಡಿಸಲಾಗುವುದು’ ಎಂದರು.

ಮಾ.ನಾಗರಾಜ್‌, ಕರುಣಾಕರ್‌, ಸತೀಶ ಹಾನಗಲ್‌, ದತ್ತಮೂರ್ತಿ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಧರ್ಮ ಆಧಾರಿತ ಮೀಸಲಾತಿ ಸಾಧ್ಯವಿಲ್ಲ’

ಹುಬ್ಬಳ್ಳಿ: ‘ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸಿ, ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್‌ ಅನ್ಯಾಯ ಮಾಡುತ್ತಿದೆ’ ಎಂದು ಕೇಂದ್ರ ಸಚಿವ, ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಟೀಕಿಸಿದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಒಂದೆಡೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯ ಜಾತಿಯಲ್ಲ, ಧರ್ಮ ಎನ್ನುತ್ತಾರೆ. ಇನ್ನೊಂದೆಡೆ ಮೀಸಲಾತಿ ನೀಡುತ್ತಾರೆ’ ಎಂದರು.

‘ಪ್ರವರ್ಗ 1ರಲ್ಲಿ ಮುಸ್ಲಿಂ ಸಮುದಾಯದ 17 ಜಾತಿಗಳು, ಪ್ರವರ್ಗ 2ರಲ್ಲಿ 19 ಜಾತಿಗಳನ್ನು ಸೇರಿಸಲಾಗಿದೆ. ನಿಜವಾದ ಹಿಂದುಳಿದ ಜಾತಿಗಳಾದ ಕುರುಬ, ಮರಾಠ, ಉಪ್ಪಾರ ಸೇರಿ ಉಳಿದವರಿಗೆ ಚಿಪ್ಪು ನೀಡುತ್ತಿದೆ. ಸಂವಿಧಾನದಲ್ಲಿ ಧರ್ಮ ಆಧಾರಿತವಾಗಿ ಮೀಸಲಾತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT