ಮುಂಡರಗಿ: ಎರಡು ದಶಕಗಳಿಂದ ವಾಸಿಸಲು ಆಶ್ರಯ ಮನೆಗಳಲ್ಲಿದೇ ಪುರಸಭೆ ವ್ಯಾಪ್ತಿಯ ಮುಂಡರಗಿ, ಶಿರೂಳ, ಬ್ಯಾಲವಾಡಗಿ, ರಾಮೇನಹಳ್ಳಿ ಗ್ರಾಮಗಳ ಸಾವಿರಾರು ಬಡ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅನ್ಯದಾರಿ ಕಾಣದೆ ಇಕ್ಕಟ್ಟಾದ ಗುಡಿಸಲು, ತಗಡಿನ ಶೆಡ್, ಮುರುಕು ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆ ಅಥವಾ ನಿವೇಶನ ನೀಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಿತ್ಯ ಶಾಪ ಹಾಕುತ್ತಲಿದ್ದಾರೆ.
2003ರಲ್ಲಿ ಅಂದಿನ ಸಹಕಾರ ಸಚಿವ ಎಸ್.ಎಸ್.ಪಾಟೀಲ ಅವರ ಅವಧಿಯಲ್ಲಿ ಅಂಬೇಡ್ಕರ್, ಕೊಳಚೆ ನಿರ್ಮೂಲನೆ ಹಾಗೂ ವಾಂಬೆ ಯೋಜನೆಗಳ ಅಡಿಯಲ್ಲಿ ಮುಂಡರಗಿ ಸೇರಿದಂತೆ ಪುರಸಭೆ ವ್ಯಾಪ್ತಿಯ ಗ್ರಾಮಗಳ ಬಡಜನತೆಗೆ ಒಟ್ಟು 1,150 ಮನೆಗಳನ್ನು ನಿರ್ಮಿಸಲಾಗಿತ್ತು. (ಅದರ ನೆನಪಿಗಾಗಿ ಗದಗ ರಸ್ತೆ ಬಳಿ ನಿರ್ಮಿಸಲಾಗಿದ್ದ ಆಶ್ರಯ ಮನೆಗಳ ಕಾಲೊನಿಗೆ ಎಸ್.ಎಸ್.ಪಾಟೀಲ ನಗರ ಎಂದು ನಾಮಕರಣ ಮಾಡಲಾಯಿತು). ಅಂದಿನಿಂದ ಈವರೆಗೂ ಪಟ್ಟಣದ ಬಡಜನತೆಗೆ ಒಂದೂ ಆಶ್ರಯ ಮನೆ ವಿತರಣೆಯಾಗಿಲ್ಲ ಎನ್ನುವುದು ಬಡ ಜನತೆಯ ಕೊರಗಾಗಿದೆ.
2013ರಲ್ಲಿ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಬಡಜನತೆಗೆ ಆಶ್ರಯ ಮನೆ ನಿರ್ಮಿಸಿ ಕೊಡುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯ ಶಿರೂಳ ಗ್ರಾಮದ ಹೊರವಲಯದಲ್ಲಿ ಪುರಸಭೆ ವತಿಯಿಂದ 25 ಎಕರೆ ಜಮೀನು ಖರೀದಿಸಿದರು. ಅವರ ಅವಧಿಯಲ್ಲಿ ಜಮೀನನ್ನು ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸಿ ನಿವೇಶನಗಳನ್ನು ಮಾಡಲಾಯಿತು.
ನಿವೇಶನಗಳು ಸಿದ್ಧವಾದ ತಕ್ಷಣ ಬಡಜನತೆಯಿಂದ ಆಶ್ರಯ ಮನೆಗಳಿಗಾಗಿ ಅರ್ಜಿ ಆಹ್ವಾನಿಸಲಾಯಿತು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಬಡವರು ಅಗತ್ಯ ದಾಖಲೆಗಳೊಂದಿಗೆ ಮನೆಗಳಿಗಾಗಿ ಅರ್ಜಿ ಸಲ್ಲಿಸಿದರು. ಅರ್ಜಿ ಸ್ವೀಕಾರ, ಅರ್ಜಿ ಪರಿಶೀಲನೆ ಮೊದಲಾದ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡು ಫಲಾನುಭವಿಗಳ ಯಾದಿಯನ್ನು ಪ್ರಕಟಿಸಬೇಕು ಎನ್ನುವ ಸಂದರ್ಭದಲ್ಲಿ ಅದಕ್ಕೆ ತಕರಾರುಗಳು ಬಂದವು. ಈ ಕಾರಣದಿಂದ ಮನೆ ವಿತರಣೆಯ ಕಾರ್ಯ ನನೆಗುದಿಗೆ ಬಿದ್ದಿತು.
ಮುಂದೆ ವಿಧಾನಸಭೆ ಚುನಾವಣೆ ಘೋಷಣೆಯಾಗಿ ರಾಮಣ್ಣ ಲಮಾಣಿ ಶಾಸಕರಾಗಿ ಆಯ್ಕೆಯಾದರು. ಅವರ ಅವಧಿಯಲ್ಲಾದರೂ ಮನೆಗಳು ದೊರೆಯಬಹುದು ಎಂದು ನಂಬಿದ್ದ ಬಡಜನತೆಯ ಆಸೆ ಈಡೇರಲೇ ಇಲ್ಲ. ಅನರ್ಹ ಫಲಾನುಭವಿಗಳ ಹೆಸರನ್ನು ಯಾದಿಯಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿ ಪುನಃ ಬಡವರಿಂದ ಅರ್ಜಿ ಕರೆಯಲಾಯಿತು. ರಾಜಕೀಯ ಕಾರಣಗಳಿಂದಾಗಿ ಮನೆ ವಿತರಣೆ ನನೆಗುದಿಗೆ ಬೀಳುತ್ತಾ ಹೋಯಿತು. ಈ ನಡುವೆ ಬಡವರು ಹಲವಾರು ಬಾರಿ ಪದೇ ಪದೇ ಅರ್ಜಿ ಸಲ್ಲಿಸಿ ಸುಸ್ತಾದರು.
ಮನೆಗಳನ್ನು ವಿತರಿಸುವಂತೆ ಆಗ್ರಹಿಸಿ ಪುರಸಭೆ, ತಹಶೀಲ್ದಾರ್ ಕಚೇರಿಗಳ ಮುಂದೆ ಜನರು ಧರಣಿ ಕೈಗೊಂಡರು. ಮನೆಗಾಗಿ ಒತ್ತಾಯಿಸಿ ಸಾವಿರಾರು ಬಡವರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮುಂಡರಗಿಯಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿನಾಕಾರಣ ಕಾಲಹರಣ ಮಾಡಿದರೆ ಹೊರತು ಬಡಜನತೆಗೆ ಮನೆಗಳ ವಿತರಣೆಗೆ ಕ್ರಮ ಕೈಗೊಳ್ಳಲಿಲ್ಲ.
ಆಶ್ರಯ ಮನೆ ಹಂಚಿಕೆ, ಫಲಾನುಭವಿಗಳ ಆಯ್ಕೆ, ವಿತರಣೆ ಮೊದಲಾದವುಗಳಿಗೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಕಮಿಟಿಯೊಂದನ್ನು ರಚಿಸಲಾಗಿರುತ್ತದೆ. ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಅವರ ಅವಧಿ ಮುಗಿದು ಈಗ ಡಾ.ಚಂದ್ರು ಲಮಾಣಿ ಅವರು ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಾದರೂ ಬಡಜನತೆಗೆ ಆಶ್ರಯ ಮನೆಗಳನ್ನು ವಿತರಿಸುತ್ತಾರೆಯೋ ಎನ್ನುವ ಅನುಮಾನ ಬಡಜನತೆಯನ್ನು ಕಾಡುತ್ತಲಿದೆ.
ಈ ಮೊದಲು ತಯಾರಿಸಿದ ಆಯ್ಕೆ ಪಟ್ಟಿಯಲ್ಲಿ ಅನರ್ಹ ಫನಾನುಭವಿಗಳ ಹೆಸರುಗಳಿವೆ ಎಂಬ ದೂರು ಬಂದಿವೆ. ಈ ಕಾರಣದಿಂದ ಆಶ್ರಯ ಮನೆಗಳ ಫಲಾನುಭವಿಗಳ ಯಾದಿಯನ್ನು ಪುನರ್ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ನಿರ್ಮಿಸಿ ವಿತರಿಸಲಾಗುವುದುಡಾ.ಚಂದ್ರು ಲಮಾಣಿ ಶಾಸಕ ಮತ್ತು ಆಶ್ರಯ ಸಮಿತಿ ಅಧ್ಯಕ್ಷ
ಆಶ್ರಯ ಮನೆ ವಿತರಣೆಯ ಕಾರ್ಯ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದು ಆಶ್ರಯ ಕಮಿಟಿಯ ನಿರ್ದೇಶನದಂತೆ ಶೀಘ್ರದಲ್ಲಿಯೇ ಆಶ್ರಯ ಮನೆಗಳನ್ನು ನಿರ್ಮಿಸಲಾಗುವುದುಡಿ.ಎಚ್.ನದಾಫ್ ಪುರಸಭೆ ಮುಖ್ಯಾಧಿಕಾರಿ
ದಶಕದ ಹಿಂದೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನೀಡಿದ ಅಲ್ಪಸ್ವಲ್ಪ ಹಣ ಖರ್ಚಾಗಿ ಹೋಗಿದ್ದು ಈಗ ಮನೆಗಳಿಲ್ಲದೆ ಶಾಲಾ ಕಟ್ಟಡದಲ್ಲಿ ವಾಸಿಸುತ್ತಿದ್ದೇವೆ. ಸರ್ಕಾರ ಎಲ್ಲ ನಿರಾಶ್ರಿತರಿಗೂ ಶೀಘ್ರ ಮನೆಗಳನ್ನು ನಿರ್ಮಿಸಿಕೊಡಬೇಕುಹನುಮಂತ ಬೆಂಡಿಕಾಯಿ ಗುಮ್ಮಗೋಳ ಗ್ರಾಮದ ನಿರಾಶ್ರಿತ
ಆಶ್ರಯ ಮನೆಗಳಿಲ್ಲದೆ ಸಾವಿರಾರು ಬಡವರು ಬೀದಿಯಲ್ಲಿ ಬದುಕುವಂತಹ ವಾತಾವರಣ ಸೃಷ್ಟಿಯಾಗಿದ್ದು ಪುರಸಭೆಯವರು ತಕ್ಷಣ ಅರ್ಜಿ ಸಲ್ಲಿಸಿದ ಎಲ್ಲ ಬಡವರಿಗೆ ಆಶ್ರಯ ಮನೆಗಳನ್ನು ವಿತರಿಸಬೇಕುಅಡಿವೆಪ್ಪ ಚಲವಾದಿ ಅಧ್ಯಕ್ಷ ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಸಂಘ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.