ಕೋಲಾರ: ಹಲವು ತಿಂಗಳ ಬಳಿಕ ಗುಡುಗಿನ ಸದ್ದು ಕೇಳಿದ್ದು, ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ.
ಕೋಲಾರ ತಾಲ್ಲೂಕಿನ ತೊಟ್ಲಿ, ಕಾಕಿನತ್ತ, ಚಿತ್ತನಗಳ್ಳಿ, ಹೊರಟಿ ಅಗ್ರಹಾರ ಸುತ್ತಮುತ್ತಲಿನ ಹಳ್ಳಿಗಳು, ಕೆಜಿಎಫ್, ಬೇತಮಂಗಲದಲ್ಲಿ ಗುರುವಾರ ಸಂಜೆ ಮಳೆಯಾಗಿದೆ.
ಬೇಸಿಗೆಯ ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರ ಪಾಲಿಗೆ ವರುಣ ಕೃಪೆ ತೋರಿದೆ. ಸಂಜೆ 4 ಗಂಟೆ ಸುಮಾರಿಗೆ ವಿವಿಧೆಡೆ ಗುಡುಗು ಸಮೇತ ಮಳೆಯಾಯಿತು, ಕಾದ ನೆಲಕ್ಕೆ ತಂಪೆರೆಯಿತು.
ಏಪ್ರಿಲ್ ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಒಂದು ಹನಿಯೂ ಮಳೆಯಾಗಿರಲಿಲ್ಲ. ಹವಾಮಾನ ಇಲಾಖೆ ಪ್ರಕಾರ ಏಪ್ರಿಲ್ನಲ್ಲಿ ಮಳೆಯಾಗದ ಏಕೈಕ ಜಿಲ್ಲೆಯಾಗಿದೆ. ಪಕ್ಕದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸ್ವಲ್ಪವಾದರೂ ಮಳೆಯಾಗಿತ್ತು.