ತಾವರಗೇರಾ: ಸಮೀಪದ ಮೆಣೇದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಚನಾಳ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ ಪ್ರತಿನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಕಳೆದ ಒಂದು ತಿಂಗಳಿಂದ ಜೆಜೆಎಂ ಪೈಪ್ ಮೂಲಕ ಟ್ಯಾಂಕ್ಗೆ ನೀರು ಪೂರೈಕೆ ಮಾಡುತ್ತಿದ್ದು ನೀರು ಕಲುಷಿತವಾಗಿದೆ. ಇದರಿಂದ ಆನಾರೋಗ್ಯ ಹೆಚ್ಚಾಗಿದೆ ಎಂದು ಗ್ರಾಮದ ಬಸನಗೌಡ ದಳಪತಿ, ನಾಗಯ್ಯ ಪೊಲೀಸಪಾಟೀಲ, ಬಸವರಾಜ ತಳವಾರ ತಿಳಿಸಿದರು.
6 ತಿಂಗಳ ಹಿಂದೆ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಜನರು ವಾಂತಿ ಭೇದಿಯಿಂದ ನರಳಾಡಿದ್ದರು. ಈ ತರಹದ ಘಟನೆ ಮತ್ತೆ ನಡೆಯದಂತೆ ಶುದ್ಧ ನೀರಿಗಾಗಿ ಗ್ರಾಮ ಪಂಚಾಯಿತಿ ಕ್ರಮ ತೆಗೆದುಕೊಳ್ಳಬೇಕು. ಓವರ್ ಹೆಡ್ ಟ್ಯಾಂಕ್ ಸೋರುತ್ತಿದ್ದು, ಮನೆಗಳಿಗೆ ಅಳವಡಿಸಿರುವ ಮೀಟರ್, ನಳದ ಪೈಪ್ಗಳು ಕಳಪೆಯಾಗಿವೆ. ಒಡೆದು ಹಾಳಾಗಿವೆ. ಹೊಸ ಟ್ಯಾಂಕ್ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.
ಹುಲಿಯಾಪೂರ ಗ್ರಾಮದಲ್ಲಿ 550 ಕುಟುಂಬಗಳು ಮತ್ತು 1,800 ಜನಸಂಖ್ಯೆ ಹೊಂದಿದ್ದು ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಮೂರು ವರ್ಷದ ಹಿಂದೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸದ್ಯ ಸ್ಥಗಿತಗೊಂಡಿದೆ. ದುರಸ್ತಿಗೆ ಯಾರೂ ಮುಂದಾಗಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ ಎಂದು ಗ್ರಾಮದ ನಿವಾಸಿ ಶರಣಪ್ಪ ಮರಳಿ ಆರೋಪಿಸಿದರು.
ಜುಮಲಾಪೂರ ಗ್ರಾ.ಪಂ ವ್ಯಾಪ್ತಿಯ ನಂದಾಪೂರ ಗ್ರಾಮದಲ್ಲಿನ ಶುದ್ಧ ನೀರಿನ ಘಟಕಕ್ಕೆ 2 ವರ್ಷವಾದರೂ ಉದ್ಘಾಟನೆ ಭಾಗ್ಯ ಸಿಕಿಲ್ಲ. ಪ್ರತಿನಿತ್ಯ ಬೋರ್ವೆಲ್ ನೀರು ಕುಡಿಯುವ ಪರಿಸ್ಥಿತಿ ಮುಂದುವರೆದಿದೆ. ಪ್ಲೋರೈಡ್ ನೀರು ಇರುವ ಬಗ್ಗೆ ದೃಡವಾಗಿದ್ದು ಧಿಕಾರಿಗಳು ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಅಲೆಯುವುದು ಮುಂದುವರಿದಿದೆ ಎಂದು ವೀರಭದ್ರಯ್ಯ ಕಂದಕೂರ ಹೇಳಿದರು.
ಜುಮಲಾಪೂರ ಗ್ರಾಮದಲ್ಲಿ ಸಹ ಕಳೆದ ಎರಡು ವಾರದ ಹಿಂದೆ ಕಲುಷಿತ ನೀರಿನಿಂದ 23ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿಯಾಗಿತ್ತು. ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 5 ಶುದ್ಧ ನೀರಿನ ಘಟಕಗಳಲ್ಲಿ ನಂದಾಪೂರ ಮತ್ತು ಮುದ್ದಲಗುಂದಿ ಗ್ರಾಮದಲ್ಲಿ ಸ್ಥಗಿತಗೊಂಡಿವೆ. ಹೀಗೆ ತಾವರಗೇರಾ ಹೋಬಳಿಯಲ್ಲಿ ನೀರಿನ ಭವಣೆ ನೀಗಿಸಲು ಆಡಳಿತ ಕ್ರಮ ಕೈಗೊಳ್ಳಬೇಕಿದೆ.
ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 4ರಲ್ಲಿ ಘಟಕಗಳ ಪೈಕಿ ಜುಲಕುಂಟಿ ಗ್ರಾಮದ ಶುದ್ಧ ನೀರಿನ ಘಟಕ ಸ್ಥಗಿತಗೊಂಡಿದೆ. ಸಂಗನಾಳ ಗ್ರಾ.ಪಂ ವ್ಯಾಪ್ತಿಯ 4 ಗ್ರಾಮಗಳಲ್ಲಿ ನೀರಿನ ಘಟಕಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಮೆಣೇದಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 4 ರಲ್ಲಿ 2 ನೀರಿನ ಘಟಕಗಳು ದುರಸ್ಥಿಯಲ್ಲಿವೆ. ಹಿರೇಮನ್ನಾಪೂರ ಗ್ರಾ.ಪಂ 3 ನೀರಿನ ಘಟಕಗಳು ಚಾಲ್ತಿಯಲ್ಲಿವೆ.
ಮುದೇನೂರು ಮತ್ತು ಲಿಂಗದಹಳ್ಳಿ ಪಿಡಿಒ ಅವರಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಕ್ಕಿಲ್ಲ.
ಹುಲಿಯಾಪೂರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಗುತ್ತೆದಾರರ ಜತೆ ಮಾತನಾಡಿ ತುರ್ತಾಗಿ ಘಟಕವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವದು
-ಹನಮಂತರಾಯ ಪಿಡಿಒ ಮೆಣೇದಾಳ ಗ್ರಾ.ಪಂ
ಜೆಜೆಎಂ ಯೋಜನೆ ಗುತ್ತಿಗೆದಾರರು ಸಮರ್ಪಕ ಕಾಮಗಾರಿ ಮಾಡಿಲ್ಲ. ಜನರಿಗೆ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಪೈಪ್ ಮತ್ತು ಮನೆಗಳಗೆ ಅಳವಡಿಸಿದ್ದ ಮೀಟರ್ ನಳಗಳು ಕಳಪೆಯಾಗಿವೆ
-ಸಂಗಯ್ಯ ಸ್ವಾಮಿ ಬಚನಾಳ ನಿವಾಸಿ
ಗ್ರಾಮಕ್ಕೆ ಶುದ್ಧ ನೀರಿನ ಘಟಕ ಮಂಜೂರಾಗಿದ್ದು ಯಂತ್ರ ಮತ್ತು ಘಟಕ ಸ್ಥಾಪನೆ ಮಾಡಿ 3 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಇಲ್ಲ. ಪ್ಲೋರೈಡ್ ನೀರೆ ಗತಿಯಾಗಿದೆ
-ವೀರಭದ್ರಯ್ಯ ಕಂದಕೂರ ನಂದಾಪೂರ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.