ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದ ಎಪಿಎಂಸಿ ಪ್ರಾಂಗಣದಲ್ಲಿನ ಚಿದಾನಂದ ಅವಧೂತರ ಮಂಟಪದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ ನಡೆದ ಎರಡು ದಿನದ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದಕ್ಕೆ ಯುವಕರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ವ್ಯಕ್ತವಾಯಿತು.
ಸಮಾರಂಭದ ಯಶಸ್ವಿಗೆ ಕಾರಣವಾದ ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷರನ್ನು ವೇದಿಕೆಗೆ ಆಹ್ವಾನಿಸಿದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನ ಮಾಡುವಂತೆ ಮನವಿ ಮಾಡಿದರು.
ಆದರೆ ಉಪ ಸಮಿತಿಯಲ್ಲಿನ ಪದಾಧಿಕಾರಿಗಳು ವೈಯಕ್ತಿಕ ಸನ್ಮಾನ ನಿರಾಕರಿಸಿದರು. ಸಮ್ಮೇಳನದ ಯಶಸ್ವಿಗೆ ಕೇವಲ ಸಂಘಟಕರು, ಉಪ ಸಮಿತಿಯ ಅಧ್ಯಕ್ಷರು ಸದಸ್ಯರು ಮಾತ್ರವಲ್ಲ, ಇಡೀ ಗ್ರಾಮಸ್ಥರು ಬೆನ್ನೆಲುಬಾಗಿ ನಿಂತಿದ್ದಾರೆ. ಎಲ್ಲರನ್ನೂ ಬಿಟ್ಟು ಕೇವಲ ಉಪ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸುವುದು ಸರಿಯಲ್ಲ. ಯಶಸ್ಸಿನ ಶ್ರೇಯಸ್ಸು ಇಡೀ ಗ್ರಾಮಸ್ಥರಿಗೆ ಸಲ್ಲಬೇಕು. ಆದ್ದರಿಂದ ‘ಶ್ರೀರಾಮನಗರ’ ಎಂಬ ನಾಮಫಲಕ್ಕೆ ಹೂಮಾಲೆ ಹಾಕಿ’ ಎಂದು ಸಮಿತಿಗಳ ಪರವಾಗಿ ವೇದಿಕೆ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮನವಿ ಮಾಡಿದರು.
ಯುವಕರ ಮನವಿಗೆ ಓಗೊಟ್ಟ ಸಚಿವ ಶಿವರಾಜ ತಂಗಡಗಿ, ‘ಶ್ರೀರಾಮನಗರ’ ಎಂಬ ನಾಮಫಲಕ್ಕೆ ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಗ್ರಾಮಕ್ಕೆ ಲಭಿಸಿದ ಮೊದಲ ಕನ್ನಡಮ್ಮನ ಹಬ್ಬದ ಸಮ್ಮೇಳನವನ್ನು ಯಶಸ್ವಿಯಾಗಿಸಿದ ಸಾರ್ಥಕತೆ ಭಾವ ಯುವಕರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಯುವಕರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಸಮ್ಮೇಳನದ ಅಧ್ಯಕ್ಷ ಎಸ್.ವಿ. ಪಾಟೀಲ್, ಸಣ್ಣ ಸಾಧನೆ ಮಾಡದಿದ್ದರೂ ಸನ್ಮಾನ, ಪ್ರಚಾರಕ್ಕೆ ಹಾತೊರೆಯುವ ಜನರ ಮಧ್ಯೆ ಶ್ರೀರಾಮನಗರಕ್ಕೆ ಸನ್ಮಾನ ಮಾಡಿಸಿದ ಯುವಕರ ಉದಾರಗುಣ ಎಲ್ಲರಿಗೂ ಆದರ್ಶವಾಗಬೇಕು ಎಂದು ಶ್ಲಾಘಿಸಿದರು.