ಶ್ರೀರಂಗಪಟ್ಟಣ: ‘₹ 90 ಲಕ್ಷ ವೆಚ್ಚದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಕೃಷಿಕ ಭವನ ನಿರ್ಮಾಣವಾಗಲಿದೆ’ ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಬಿ.ಎಂ.ಸುಬ್ರಹ್ಮಣ್ಯ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಶನಿವಾರ ನಡೆದ ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸಭೆಯಲ್ಲಿ ಅವರು ಮಾತನಾಡಿದರು.
‘ಭವನ ನಿರ್ಮಾಣಕ್ಕೆ ಈಗಾಗಲೇ ₹ 7.5 ಲಕ್ಷ ಹಣ ಬಿಡುಗಡೆಯಾಗಿದೆ. ಕಾಮಗಾರಿ ಆರಂಭವಾದರೆ ಇನ್ನೂ ₹ 15 ಲಕ್ಷ ಹಣ ನೀಡುವುದಾಗಿ ಕೃಷಿಕ ಸಮಾಜದ ರಾಜ್ಯ ಸಮಿತಿಯ ಅಧ್ಯಕ್ಷರು ಭರವಸೆ ನೀಡಿದ್ದಾರೆ. 100X55 ಅಡಿ ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಕೃಷಿಕ ಸಮಾಜದ ಅನುದಾನದ ಜತೆಗೆ ಸ್ಥಳೀಯರು ಶಾಸಕರು, ಸಂಸದರು ಹಾಗೂ ಸಚಿವರಿಂದಲೂ ಅನುದಾನ ತರಲಾಗುವುದು’ ಎಂದು ಅವರು ಹೇಳಿದರು.
ಕೃಷಿಕ ಸಮಾಜದ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ನಿಶಾಂತ್ ಕೀಲಾರ ಮಾತನಾಡಿ, ‘ಕೃಷಿಕ ಭವನ ನಿರ್ಮಾಣಕ್ಕೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಸಿಕ್ಕಿದೆ’ ಎಂದು ಹೇಳಿದರು.
ಸಮಾಜದ ಉಪಾಧ್ಯಕ್ಷ ಮಾಧು, ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಖಜಾಂಚಿ ಬಿ.ಎಸ್.ಚಂದ್ರಶೇಖರ್, ಸದಸ್ಯರಾದ ಕಡತನಾಳು ಬಾಲಕೃಷ್ಣ, ಉಮಾಶಂಕರ್, ಹನುಮಂತಯ್ಯ, ಕೃಷಿ ಇಲಾಖೆ ತಾಂತ್ರಿಕ ಸಹಾಯಕ ರಾಜೇಂದ್ರ ಇದ್ದರು.