ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಗಳಿಗಿಂತ ಪಕ್ಷಗಳಿಗೆ ಪ್ರತಿಷ್ಠೆ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮಂಡ್ಯ: ಎಂಟು ತಿಂಗಳ ಅವಧಿಯಲ್ಲಿ ಮಂಡ್ಯ ಲೋಕ­ಸಭೆಗೆ ಎರಡನೇ ಬಾರಿಗೆ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ಬಾರಿಯ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ದರೆ, ಉಪ ಚುನಾವಣೆ­ಯಲ್ಲಿ ಸ್ಪರ್ಧೆಯಿಂದ ದೂರವಿದ್ದ ಬಿಜೆಪಿ ಹಾಗೂ ಬಿಎಸ್‌ಪಿ ಈ ಬಾರಿ ಅಭ್ಯರ್ಥಿ­ಗಳನ್ನು ಕಣಕ್ಕೆ ಇಳಿಸಿವೆ.

ಈ ಚುನಾವಣೆಯು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಿಗಿಂತ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ­ಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಕುಟುಂಬದ ನಡುವಣ ಸೋಲು–ಗೆಲುವಿನ ಲೆಕ್ಕಾಚಾರವೂ ಇಲ್ಲಿ ಮುಖ್ಯವಾಗಿದೆ.

ಉಪ ಚುನಾವಣೆಯಲ್ಲಿ ಕಳೆದು­ಕೊಂಡಿದ್ದ ಸ್ಥಾನ­ವನ್ನು ಮರಳಿ ಪಡೆಯಲು ಜೆಡಿಎಸ್‌ ಮುಂದಾಗಿದ್ದರೆ,  ಪಡೆದು­ಕೊಂಡಿದ್ದ ಸ್ಥಾನ­ವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಹೀಗಾಗಿ, ಮತ್ತೊಂದು ಜಿದ್ದಾಜಿದ್ದಿಗೆ ಅಖಾಡ ಸಜ್ಜಾಗಿದ್ದು, ಮಂಡ್ಯದಲ್ಲಿ ‘ವೈಷಮ್ಯ ರಾಜಕಾರಣ’ವೇ ಅಕ್ಷರಶಃ ತೋಳೇರಿಸಿ ನಿಂತಂತೆ ಕಾಣುತ್ತಿದೆ.

ತಾರಾ ಮೌಲ್ಯ ಹೊಂದಿದ್ದ ರಮ್ಯಾ ಅವರನ್ನು ಕಾಂಗ್ರೆಸ್‌ ಪಕ್ಷವು ಕೊನೆ­ಗಳಿಗೆಯಲ್ಲಿ ಕಣಕ್ಕೆ ಇಳಿಸುವ ಮೂಲಕ ಉಪ ಚುನಾವಣೆಯಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿಯೂ ಅವರನ್ನೇ ಕಣಕ್ಕೆ ಇಳಿಸಿದೆ. ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ದೇವೇಗೌಡ ಅವರ ‘ಮಾನಸ ಪುತ್ರ’ ಎಂದೇ ಗುರುತಿಸಿ­ಕೊಂಡಿರುವ ಸಿ.ಎಸ್‌. ಪುಟ್ಟರಾಜು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ನರೇಂದ್ರ ಮೋದಿ ಅವರ ಅಲೆಯನ್ನು ನೆಚ್ಚಿ­ಕೊಂಡು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರೊ.ಬಿ. ಶಿವಲಿಂಗಯ್ಯ ಅವರು ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಧುಮುಕಿ ಬಿಜೆಪಿ ಅಭ್ಯರ್ಥಿ­ಯಾಗಿದ್ದಾರೆ. ಸ್ವಂತ ಬಲವನ್ನು ನೆಚ್ಚಿಕೊಂಡು ಬಿಎಸ್ಪಿ­ಯಿಂದ ಎಂ. ಕೃಷ್ಣಮೂರ್ತಿ, ‘ಆಪ್‌’ನಿಂದ ಡಾ.ಹನುಮಂತಪ್ಪ ಕಣದಲ್ಲಿದ್ದಾರೆ.

ಕಾಂಗ್ರೆಸ್‌ ಕಿತ್ತಾಟ: ಕಾಂಗ್ರೆಸ್‌ ಮುಖಂಡರ ನಡುವಣ ಕಿತ್ತಾಟ ಜೋರಾಗಿದೆ. ಬಹಿರಂಗವಾಗಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿ­ದ್ದಾರೆ. ರಾಜ್ಯಸಭೆ ಸದಸ್ಯ ಎಸ್‌.ಎಂ. ಕೃಷ್ಣ ಹಾಗೂ ವಸತಿ ಸಚಿವ ಅಂಬರೀಷ್‌ ಬಣದವರಿ­ಬ್ಬರಿಂದಲೂ ಹಾಲಿ ಸಂಸದೆ, ಕಾಂಗ್ರೆಸ್‌ ಅಭ್ಯರ್ಥಿ ರಮ್ಯಾ ಟೀಕೆಗೆ ಒಳಗಾಗಿ­ದ್ದಾರೆ.

ಏಳು ತಿಂಗಳ ಹಿಂದೆ ಸಂಸದೆಯಾಗಿದ್ದ ರಮ್ಯಾ ಅವರು, ಕ್ಷೇತ್ರದ 500ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಮತದಾರರನ್ನು ನೇರವಾಗಿ ಸಂಪರ್ಕಿಸಿ­ದ್ದಾರೆ. ಅವರ ಸಮಸ್ಯೆಗಳನ್ನು ಅರಿತುಕೊಳ್ಳಲು ಮುಂದಾ­ಗಿ­ದ್ದಾರೆ. ಇದು ಕಾಂಗ್ರೆಸ್ಸಿನ ಕೆಲ ನಾಯಕರ ಕಣ್ಣು ಕೆಂಪಗಾಗಿಸಿದ್ದು,  ಭಿನ್ನಮತದ ಬಾವುಟ ಹಿಡಿದು­­ ನಿಂತಿದ್ದಾರೆ. ಜತೆಗೆ, ಗೆಲುವು ಸಾಧಿಸಿದರೆ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಾರೆ. ಮುಂದಿನ ದಿನಗಳಲ್ಲಿ ಅವರು ಶಕ್ತಿಯಾಗಿಯೂ ಹೊಮ್ಮುತ್ತಾರೆ ಎಂಬ ಆತಂಕ ನಾಯಕರಲ್ಲಿದೆ. ಅದನ್ನು ಕೆಲವರು ಬಹಿರಂಗವಾಗಿ ವ್ಯಕ್ತಪಡಿಸಿಯೂ ಇದ್ದಾರೆ.

ಕೃಷ್ಣ ಸಂಧಾನ: ಕೃಷ್ಣ ಅವರ ಮಧ್ಯಸ್ಥಿಕೆಯಲ್ಲಿ ಎರಡೂ ಬಣದ ನಡುವೆ ಸಂಧಾನ ಮಾಡಿಸುವ ಯತ್ನಗಳನ್ನು  ಮುಖ್ಯ­ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ನಡೆಸಿದ್ದಾರೆ. ಇದರ ಫಲವಾಗಿ ಜಿಲ್ಲಾ ಘಟಕಕ್ಕೆ 44 ಮಂದಿ ನೇಮಕ ಮಾಡಲಾಗಿದೆ. ಈ ನೇಮಕದ ಬಗ್ಗೆಯೂ ಅಪಸ್ವರಗಳು ಎದ್ದಿರುವುದು ಕಾಂಗ್ರೆಸ್‌್ ನಾಯಕರಲ್ಲಿ ಆತಂಕ ಮೂಡಿಸಿದೆ.

ಸಂಧಾನ ಮೇಲ್ನೋಟಕ್ಕೆ ಫಲಪ್ರದವಾದಂತೆ ಕಂಡು ಬಂದಿದ್ದರೂ, ಆಂತರಿಕವಾಗಿ ಇನ್ನೂ ಮುನಿಸುಗಳಿವೆ. ಅವಕಾಶ ಸಿಕ್ಕಾಗಲೆಲ್ಲ ಹೊರಹಾಕು­ತ್ತಾಲೇ ಇದ್ದಾರೆ. ಶನಿವಾರ ಮಂಡ್ಯ ತಾಲ್ಲೂಕಿನ ಬೇಲೂರು ಹಾಗೂ ಸೂನಗನಹಳ್ಳಿಯಲ್ಲಿ ಎರಡೂ ಬಣಗಳ ಮುಖಂಡರು ಹಾಗೂ ಕಾರ್ಯಕರ್ತರು ಬೀದಿಯಲ್ಲಿ ಭಿನ್ನಮತ ಪ್ರದರ್ಶಿಸಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಸಾಕು ತಂದೆ ಆರ್‌.ಟಿ. ನಾರಾಯಣ್‌ ಅವರನ್ನು ಕಳೆದುಕೊಂಡಿದ್ದ ಅನುಕಂಪದ ಅಲೆ ಈ ಬಾರಿ ಕಾಣಿಸುವುದಿಲ್ಲ­ವಾದರೂ, ಸಿನಿಮಾ ತಾರೆಯೆಂಬ ಕಾರಣಕ್ಕಾಗಿ ಜನರನ್ನು ಸೆಳೆಯುವ ಶಕ್ತಿ ಇನ್ನೂ ಇದೆ. ಅದು ಮತವಾಗಿ ಪರಿವರ್ತನೆಯಾದರೆ ಗೆಲುವಿನ ಹಾದಿ ಒಂದಷ್ಟು ಸುಗಮವಾಗುತ್ತದೆ.

ಕಳೆದ ಬಾರಿ ತಮ್ಮ ಪಕ್ಷದ ಐವರು ಶಾಸಕರಿದ್ದಾರೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಮೈಮರೆತ ಜೆಡಿಎಸ್‌ ಫಲಿತಾಂಶದಲ್ಲಿ ಮುಗ್ಗರಿಸಿತ್ತು. ಆ ಪಕ್ಷದ ನಾಯಕರಲ್ಲಿನ ಆಂತರಿಕ ವೈಮನಸ್ಸು ಫಲಿತಾಂಶ­ದಲ್ಲಿಯೂ ಕಾಣಿಸಿಕೊಂಡಿತ್ತು. ಈ ಬಾರಿ ಒಗ್ಗಟ್ಟಾಗಿ­ದ್ದೇವೆ ಎಂದು ಹೇಳಿಕೊಂಡು ಮುನ್ನುಗ್ಗಿದ್ದಾರೆ. ಜತೆಗೆ ಪಕ್ಷದ ಅಸ್ತಿತ್ವದ ಪ್ರಶ್ನೆಯೂ ಅವರನ್ನು ಕಾಡುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕಾ ಪ್ರಹಾರವೂ ಅವರನ್ನು ಕೆಣಕುತ್ತಿದೆ. ಒಗ್ಗಟ್ಟಿನ ಪ್ರದರ್ಶನದ ಮೂಲಕ ಮತಗಳನ್ನು ಒಗ್ಗೂಡಿಸದ ಹೊರತು ಗೆಲುವು ಕಷ್ಟ.

ಈ ನಡುವೆ ಮೋದಿ ಅಲೆಯಲ್ಲಿ ತೇಲಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯರೇ ಆಗಿರದಿದ್ದ ಪ್ರೊ.ಬಿ. ಶಿವಲಿಂಗಯ್ಯ ಅವರಿಗೆ ಟಿಕೆಟ್‌ ನೀಡಿದ್ದು, ಪಕ್ಷದಲ್ಲಿ ಅಸಮಾಧಾನ ಉಂಟು ಮಾಡಿತ್ತು. ಅದನ್ನು ಬಗೆಹರಿಸಿಕೊಂಡು ಬಿರುಸಿನ ಪ್ರಚಾರಕ್ಕೆ ಅಭ್ಯರ್ಥಿ ಮುಂದಾಗಿದ್ದಾರೆ. ಯುವ– ವಿದ್ಯಾ­ವಂತ ಮತದಾರರಲ್ಲಿ ಮೋದಿ ಹೆಸರು ಕೇಳಿ ಬರುತ್ತಿದೆ.

ಶಾಸಕರ ಬಲಾಬಲ:  ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರ­ಗಳಲ್ಲಿ ಐವರು ಶಾಸಕರು ಜೆಡಿಎಸ್‌ನವರಿದ್ದರೆ; ಇಬ್ಬರು ಶಾಸಕರು ಕಾಂಗ್ರೆಸ್‌ ಪಕ್ಷದವರು. ಸರ್ವೋ­ದಯ ಕರ್ನಾಟಕ ಪಕ್ಷದಿಂದ ಮೇಲುಕೋಟೆ ಶಾಸಕ­ರಾಗಿ ಆಯ್ಕೆ­­ಯಾಗಿರುವ ಕೆ.ಎಸ್‌. ಪುಟ್ಟಣ್ಣಯ್ಯ ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿಯ ಬೆಂಬಲಕ್ಕೆ ನಿಂತಿದ್ದಾರೆ.

ಕ್ಷೇತ್ರದಲ್ಲಿ ಸುತ್ತಾಡಿದಾಗ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರವಾಗಿ; ಇನ್ನು ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಪರವಾಗಿ ಒಲವು ಕಂಡು ಬಂದರೆ, ನಗರ–ಪಟ್ಟಣ ಪ್ರದೇಶಗಳಲ್ಲಿ ಬಿಜೆಪಿ–ಮೋದಿ ಅಲೆಯ ಬಗೆಗೂ ಮಾತುಗಳು ಕೇಳಿಬಂದವು. ಹೆಚ್ಚಿನ ಯುವ ಮತದಾರರ ಒಲವು ರಮ್ಯಾ– ಮೋದಿಯತ್ತಲೇ ಸುಳಿದಾಡು­ತ್ತಿರುವುದು ಗಮನ ಸೆಳೆಯಿತು. ಆದರೂ, ಸದ್ಯದ ಪರಿಸ್ಥಿತಿಯಲ್ಲಿ ಮೇಲ್ನೋಟಕ್ಕೆ ಕಳೆದ ಉಪ ಚುನಾವಣೆಯಂತೆಯೇ ಕಾಂಗ್ರೆಸ್‌–ಜೆಡಿಎಸ್‌ ನಡು­ವೆಯೇ ನೇರ ಹಣಾಹಣಿ ಏರ್ಪಡುವ ಚಿತ್ರಣವಿದೆ.

ಆದರೆ, ಕಳೆದ ಉಪ ಚುನಾವ­ಣೆಯಲ್ಲಿ ನೇಪಥ್ಯ­ದಲ್ಲಿದ್ದು, ಈ ಬಾರಿ ಕಣಕ್ಕೆ ಇಳಿದಿರುವ ಬಿಜೆಪಿ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಯಾರ ಮತ­ಬುಟ್ಟಿಗೆ ಕೈಹಾಕುತ್ತಾರೆ; ಎಷ್ಟು ಮತಗಳನ್ನು ಕಸಿಯು­ತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರ­ವಾಗಲಿದೆ. ಕ್ಷೇತ್ರದೆಲ್ಲೆಡೆ ಸಾಮಾನ್ಯವಾಗಿ ಕೇಳಿಬಂದ ಮಾತು ‘ಯಾರೇ ಗೆದ್ದರೂ ಲೀಡ್‌ ಹತ್ತಿಪ್ಪತ್ತು ಸಾವಿರ ಮೀರುವುದಿಲ್ಲ’. ಇದೇ ಮಾತೇ ಪಕ್ಷಗಳ ವಲಯ­ದಲ್ಲೂ ಪ್ರತಿಧ್ವನಿಸುತ್ತಿದೆ.

ಜಾತಿ ಲೆಕ್ಕಾಚಾರ
ಜಿಲ್ಲೆಯಲ್ಲಿ ಒಕ್ಕಲಿಗರು ಬಹು­ಸಂಖ್ಯಾತ­ರಾಗಿದ್ದು, ಪ್ರಮುಖ ಪಕ್ಷ­ಗಳಾದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿ­ರುವ ಮೂವರೂ ಅಭ್ಯರ್ಥಿಗಳು ಇದೇ ಜಾತಿಗೆ ಸೇರಿದ­ವರಾಗಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡ, ಮುಸ್ಲಿಂ, ಕುರುಬ ಸಮುದಾಯ­ದವರು ಫಲಿತಾಂಶ­ದಲ್ಲಿ ನಿರ್ಣಾ­ಯಕ ಪಾತ್ರ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT